ಮತ್ತದೇ 'ಕ್ರೂರ ಮಾರ್ಚ್/ಏಪ್ರಿಲ್'ನತ್ತ ಹೊರಳುತ್ತಿರುವ ದೇಶ: ಹೀಗಾದರೆ ಹೇಗೆ ಜೀವನ!
ಇಂದಿಗೆ ಬರೋಬ್ಬರಿ ಒಂದು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ 21 ದಿನಗಳ ಲಾಕ್ ಡೌನ್ ಅನ್ನು ಘೋಷಿಸಿದ್ದರು. ಅದಕ್ಕು ಮುನ್ನವೇ, ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಿಯಾಗಿತ್ತು.
21 ದಿನದ ನಂತರ ಲಾಕ್ ಡೌನ್ ಮುಂದುವರಿಯುತ್ತಲೇ ಸಾಗಿತು. ಮಧ್ಯಮಧ್ಯ ಸಂಡೇ ಕರ್ಫ್ಯು, ಜನತಾ ಕರ್ಪ್ಯೂ ನಡೆಯಿತು. ಜನರಿಗೆ ಗಂಟೆ ಮೊಳಗಿಸಲು ಪ್ರಧಾನಿ ಕರೆಕೊಟ್ಟರು, ಜನರು ಮನೆಯಿಲ್ಲಿದ್ದ ಪಾತ್ರೆ ಪಡಗಳನ್ನೆಲ್ಲಾ ಬಡಿದರು. ಪ್ರಧಾನಿ ದೀಪ ಹಚ್ಚಲು ಹೇಳಿದರು, ಜನರು ಪಟಾಕಿಯನ್ನೇ ಸಿಡಿಸಿದರು.
ಭಾರತದಲ್ಲಿ ಕೊರೊನಾ ಸ್ಫೋಟ: ಒಂದೇ ದಿನ 47262 ಮಂದಿಗೆ ಸೋಂಕು!
ಆ ಒಂದು ವರ್ಷದ ಕೊರೊನಾ, ಜೀವನದಲ್ಲಿ ಎದುರಿಸಿದ ದುಃಸ್ವಪ್ನ ಎಂದೇ ಮರೆತು ಬಿಡೋಣ ಎನ್ನುವಷ್ಟರಲ್ಲೇ, ಕೊರೊನಾ ಎರಡನೇ ಅಲೆಯ ಮೂಲಕ ಮತ್ತೆ ಜನಜೀವನ ಹಾಳು ಮಾಡಲು ಹರಡಲಾರಂಭಿಸಿದೆ.
ಕೊರೊನಾ ಲಸಿಕೆ ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಭಾರತ
ಹೋದ ವರ್ಷದ ಆ ಕ್ರೂರ ಮಾರ್ಚ್/ಏಪ್ರಿಲ್ ತಿಂಗಳ ಅನುಭವ ಅಳಸುವ ಮುನ್ನವೇ ಮತ್ತೆ ದೇಶ, ವೈರಸ್ ಹಾವಳಿಯಲ್ಲಿ ಸಿಲುಕಲಾರಂಭಿಸಿದೆ. ವ್ಯಾಪಾರ ವಹಿವಾಟು ತಕ್ಕಮಟ್ಟಿಗೆ ಸರಿದಾರಿಗೆ ಬರುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ಹಿನ್ನಡೆಯಾಗಲಾರಂಭಿಸಿದೆ.
ಸರಕಾರದ ಸತತ ಮನವಿಯ ನಂತರವೂ ಜನರು ಲಸಿಕೆಯ ಬಗ್ಗೆ ಉದಾಸೀನತೆ
ಲಸಿಕೆ ಬಂದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಜನ ಅದರ ಬಗ್ಗೆ ಆಸಕ್ತಿಯನ್ನು ತೋರುತ್ತಿಲ್ಲ. ಮತ್ತೆ ಲಾಕ್ ಡೌನ್ ಬರುತ್ತಾ, ನೈಟ್ ಕರ್ಫ್ಯೂ ಜಾರಿಯಾಗುತ್ತಾ ಎನ್ನುವುದರ ಬಗ್ಗೆ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆಯೇ ಹೊರತು, ಸರಕಾರದ ಸತತ ಮನವಿಯ ನಂತರವೂ ಜನರು ಲಸಿಕೆಯ ಬಗ್ಗೆ ಉದಾಸೀನತೆ ಮುಂದುವರಿಸಿದ್ದಾರೆ.
ವೈರಸ್ ಮತ್ತೆ ವೇಗವಾಗಿ ದೇಶದಲ್ಲಿ ವಿಜೃಂಭಿಸಲು ಆರಂಭಿಸಿದೆ
ಜನರು ಮಾಸ್ಕ್ ಹಾಕಿಕೊಳ್ಳುತ್ತಾರೋ ಇಲ್ಲವೋ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾರೋ ಇಲ್ಲವೋ, ವೈರಸ್ ಮತ್ತೆ ವೇಗವಾಗಿ ದೇಶದಲ್ಲಿ ವಿಜೃಂಭಿಸಲು ಆರಂಭಿಸಿದೆ. ನೂರು, ಇನ್ನೂರು ಇದ್ದ ಹೊಸ ಸೋಂಕಿತರ ಸಂಖ್ಯೆ 47 ಸಾವಿರ ಮುಟ್ಟಿದೆ. ಇನ್ನು ಕರ್ನಾಟಕದಲ್ಲೂ ಮಂಗಳವಾರ (ಮಾ 23) ಒಂದೇ ದಿನ ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿದಾಟಿದೆ.
3T (ಟೆಸ್ಟ್, ಟ್ರೇಸ್, ಟ್ರೀಟ್) ನಿಯಮ
3T (ಟೆಸ್ಟ್, ಟ್ರೇಸ್, ಟ್ರೀಟ್) ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ. ರಾಜ್ಯದಲ್ಲೂ ಮಾರ್ಗಸೂಚಿಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ರಾಜ್ಯದಲ್ಲಿ ಕೊರೊನಾ ತಾಂತ್ರಿಕ ಸಮಿತಿ ನೀಡಿದ್ದ ಕೆಲವು ಸಲಹೆಗಳನ್ನು ಮಾತ್ರ ರಾಜ್ಯ ಸರಕಾರ ಜಾರಿಗೆ ತಂದಿದೆ.
ನಿಧಾನವಾಗಿ ಕಳೆದ ಮಾರ್ಚ್/ಏಪ್ರಿಲ್ ತಿಂಗಳಿನತ್ತ ಸಾಗುತ್ತಿದೆ
ರಾಜ್ಯ ಮತ್ತು ದೇಶ ನಿಧಾನವಾಗಿ ಕಳೆದ ಮಾರ್ಚ್/ಏಪ್ರಿಲ್ ತಿಂಗಳಿನತ್ತ ಸಾಗುತ್ತಿದೆ. ಆರ್ಥಿಕ ಚಟುವಟಿಕೆಗಳ ಬೆಳವಣಿಗೆ ಮತ್ತೆ ಕುಂಠಿತಗೊಳ್ಳಲಾರಂಭಿಸಿದೆ. ತೆರೆದ ಶಾಲಾ/ಕಾಲೇಜುಗಳನ್ನು ಮತ್ತೆ ಮುಚ್ಚುವ ನಿರ್ಧಾರಕ್ಕೆ ಕೆಲವು ರಾಜ್ಯಗಳು ಬಂದಿವೆ. ಒಂದೊಂದೇ ರಾಜ್ಯಗಳು ನೈಟ್ ಕರ್ಪ್ಯೂ ಜಾರಿಗೊಳಿಸಲಾರಂಭಿಸಿದೆ. ಒಟ್ಟಿನಲ್ಲಿ, ಈ ಮಹಾಮಾರಿ ಇನ್ನೆಷ್ಟು ದಿನ ಜನರ ನೆಮ್ಮದಿಯನ್ನು ನುಂಗಿಹಾಕುತ್ತೋ.. ಹೀಗಾದರೆ ಜನಸಾಮಾನ್ಯರ ಜೀವನ ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.