ಕಾಂಗ್ರೆಸ್ ಬಿಟ್ಟು ಬೇಕಿದ್ದರೆ RSS ಸೇರಿಕೊಳ್ಳಿ: ರಾಹುಲ್ ಗಾಂಧಿ ಟಾರ್ಗೆಟ್ ಯಾರು?
ಉತ್ತರ ಪ್ರದೇಶ ಸೇರಿದಂತೆ ಮುಂದಿನ ವರ್ಷದ ಆದಿಯಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್ ಪೂರ್ವತಯಾರಿ ಮಾಡಿಕೊಳ್ಳುತ್ತಿದೆ. ಪ್ರಿಯಾಂಕ ಗಾಂಧಿ ವಾಧ್ರಾ ಬಹುತೇಕ ಉತ್ತರ ಪ್ರದೇಶದಲ್ಲೇ ಇದ್ದು ಪಕ್ಷ ಸಂಘಟನೆ ನಡೆಸುತ್ತಿದ್ದಾರೆ.
ಸೋಮವಾರದಿಂದ (ಜುಲೈ 19) ಲೋಕಸಭೆಯ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಕಾಂಗ್ರೆಸ್ ಪಕ್ಷದ ನಾಯಕನ ಸ್ಥಾನಕ್ಕಾಗಿ ಸೋನಿಯಾ ಗಾಂಧಿ ಕಸರತ್ತನ್ನು ನಡೆಸುತ್ತಿದ್ದಾರೆ. ಮನೀಶ್ ತಿವಾರಿ ಅಥವಾ ಶಶಿ ತರೂರ್ ಈ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ.
ಇನ್ನು, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೂ ಹಿರಿಯ ಮುಖಂಡರೊಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ರಾಹುಲ್ ಗಾಂಧಿ ಆ ಸ್ಥಾನಕ್ಕೆ ಒಲ್ಲೆ ಅಂದ ನಂತರ ಸೋನಿಯಾ ಗಾಂಧಿಯವರೇ ಹಂಗಾಮಿಯಾಗಿ ಆ ಸ್ಥಾನವನ್ನು ನಿಭಾಯಿಸುತ್ತಿದ್ದಾರೆ.
ಇನ್ನು, ಕಾಂಗ್ರೆಸ್ಸಿನ ವಿವಿಧ ರಾಜ್ಯಗಳ ಸಾಮಾಜಿಕ ತಾಣದ ಮುಖ್ಯಸ್ಥರ ಜೊತೆಗೆ ಸಂವಾದ ನಡೆಸಿದ್ದ ರಾಹುಲ್ ಗಾಂಧಿ, ಪಕ್ಷ ತೊರೆಯುವವರು ಹೋಗಿ, ಬೇಕಿದ್ದರೆ ಆರ್ ಎಸ್ ಎಸ್ ಸೇರಿಕೊಳ್ಲಬಹುದು ಎಂದು ಖಡಕ್ಕಾಗಿ ಹೇಳಿದ್ದಾರೆ.

ನಿರ್ಭೀತಿಯಿಂದ ಕೆಲಸ ಮಾಡುವ ನಾಯಕರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಬೇಕು
ಪಕ್ಷ ಸಂಘಟನೆಯ ವಿಚಾರದಲ್ಲಿ ವಿಶೇಷ ಒತ್ತು ನೀಡಿ ಸಂವಾದದಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, "ನಿರ್ಭೀತಿಯಿಂದ ಕೆಲಸ ಮಾಡುವ ನಾಯಕರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳುವ ವಿಚಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಇಂತಹ ನಾಯಕರ ಅವಶ್ಯಕತೆ ಕಾಂಗ್ರೆಸ್ಸಿಗೆ ಇದೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ತೊರೆದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸೇರಿಕೊಳ್ಳಬಹುದು
"ಅದೇ ರೀತಿ ಭಯದಿಂದ ಕೆಲಸ ಮಾಡುವ ನಾಯಕರು ನಮ್ಮ ಪಕ್ಷದಲ್ಲಿ ಇರಬೇಕಾಗಿಲ್ಲ. ಅಂತವರು ಕಾಂಗ್ರೆಸ್ ತೊರೆದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸೇರಿಕೊಳ್ಳಬಹುದು. ಇಂತಹ ನಾಯಕರನ್ನು ಪಕ್ಷದಿಂದ ಉಚ್ಚಾಟಿಸುವ ಕೆಲಸ ನಡೆಯಲಿದೆ"ಎಂದು ರಾಹುಲ್ ಗಾಂಧಿ ಝೂಮ್ ಸಂವಾದದಲ್ಲಿಎಚ್ಚರಿಕೆಯನ್ನು ನೀಡಿದ್ದಾರೆ.

ಇದು ನಾನು ಕೊಡುತ್ತಿರುವ ಮೂಲ ಸಂದೇಶ, ರಾಹುಲ್ ಗಾಂಧಿ
"ಭಯದಿಂದ ಕೆಲಸ ಮಾಡುವವರು ಆರ್ ಎಸ್ ಎಸ್ ಸೇರಿಕೊಂಡು, ಮಜಾ ಮಾಡಲಿ. ಅಂತಹ ನಾಯಕರು ನಮಗೆ ಬೇಕಿಲ್ಲ. ನಮ್ಮ ಪಕ್ಷ ಮತ್ತು ಸಿದ್ದಾಂತವನ್ನು ಒಪ್ಪಿಕೊಂಡು ಬರುವ ಜೊತೆಗೆ, ನಿರ್ಭೀತಿಯಿಂದ ಕೆಲಸ ಮಾಡುವ ನಾಯಕರನ್ನು ನಾವು ಪಕ್ಷಕ್ಕೆ ಕರೆದು ತರಬೇಕಿದೆ. ಇದು ನಾನು ಕೊಡುತ್ತಿರುವ ಮೂಲ ಸಂದೇಶ"ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಜಿತಿನ್ ಪ್ರಸಾದ್ ಉಲ್ಲೇಖ
ಒಂದು ಕಾಲದಲ್ಲಿ ಪರಮಾಪ್ತರಾದ ಮತ್ತು ಈಗ ಮೋದಿ ಸರಕಾರದ ನಾಗರೀಕ ವಿಮಾನಯಾನ ಖಾತೆಯ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಮುಖಂಡ ಜಿತಿನ್ ಪ್ರಸಾದ್ ಅವರನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಈ ಮಾತನ್ನು ಹೇಳಿದ್ದಾರೆಂದು ವ್ಯಾಖ್ಯಾನಿಸಲಾಗುತ್ತಿದೆ. ಇವರಿಬ್ಬರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.












Click it and Unblock the Notifications