ಶಬರಿಮಲೆಗೆ ಮಹಿಳೆ ಪ್ರವೇಶ: ಸುಪ್ರೀಂನಲ್ಲಿ ಫೆ. 6ಕ್ಕೆ ಮೇಲ್ಮನವಿ ವಿಚಾರಣೆ
ಎಲ್ಲ ವಯೋಮಾನದ ಮಹಿಳೆಯರಿಗೆ ಕೇರಳದ ಶಬರಿಮಲೆ ದೇಗುಲ ಪ್ರವೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಫೆಬ್ರವರಿ 6ಕ್ಕೆ ನಡೆಸಲಿದೆ. ಜನವರಿ ಇಪ್ಪತ್ತೆರಡನೇ ತಾರೀಕು ಮೇಲ್ಮನವಿ ವಿಚಾರಣೆ ನಡೆಯಬೇಕಿತ್ತು. ಆದರೆ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠದಲ್ಲಿ ನ್ಯಾ. ಇಂದು ಮಲ್ಹೋತ್ರಾ ರಜಾದಲ್ಲಿ ಇದ್ದುದರಿಂದ ವಿಚಾರಣೆ ನಡೆದಿರಲಿಲ್ಲ.
ಅದಕ್ಕೂ ಮುನ್ನ ಶಬರಿಮಲೆ ವಿಚಾರವನ್ನು ತುರ್ತಾಗಿ ವಿಚಾರಣೆ ಮಾಡಲು ಸಾಧ್ಯವಿಲ್ಲ, ನಿಗದಿ ಆದಂತೆ ಮಾತ್ರ ವಿಚಾರಣೆ ನಡೆಯುತ್ತದೆ ಎಂದು ತಿಳಿಸಲಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನೀಡಿದ ತೀರ್ಪಿನ ಅನ್ವಯ, ಎಲ್ಲ ವಯೋಮಾನದ ಮಹಿಳೆಯರಿಗೂ ಶಬರಿಮಲೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ತಿಳಿಸಿತ್ತು.
ಆ ದೇಗುಲದಲ್ಲಿ ಆ ವರೆಗೆ ಹತ್ತರಿಂದ ಐವತ್ತು ವರ್ಷದೊಳಗಿನ ಸ್ತ್ರೀಯರಿಗೆ ಪ್ರವೇಶ ಅವಕಾಶ ಇರಲಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕೇರಳ ಸೇರಿದಂತೆ ದೇಶದಾದ್ಯಂತ ಇರುವ ಸಂಪ್ರದಾಯವಾದಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಅನುಸರಿಸುವುದಾಗಿ ತಿಳಿಸಿದ್ದರು. ಸುಪ್ರೀಂ ತೀರ್ಪು ಮತ್ತೊಮ್ಮೆ ಪರಿಶೀಲಿಸುವಂತೆ ಅರ್ಜಿ ಹಾಕಿಕೊಳ್ಳಲಾಗಿತ್ತು.

ಈ ವರ್ಷದ ಜನವರಿ ಎರಡನೇ ತಾರೀಕು ನಲವತ್ತರ ಹರೆಯದ ಇಬ್ಬರು ಮಹಿಳೆಯರು ಮೊದಲ ಬಾರಿಗೆ ಶಬರಿಮಲೆ ದೇಗುಲ ಪ್ರವೇಶ ಮಾಡಿದ್ದರು. ಆ ನಂತರ ಕೇರಳದ ಹಲವೆಡೆ ಆಕ್ರೋಶ ಬುಗಿಲೆದ್ದಿತ್ತು. ದೇಗುಲ ಪ್ರವೇಶಿಸಿದ್ದ ಬಿಂದು ಅಮ್ಮಿಣಿ ಹಾಗೂ ಕನಕ ದುರ್ಗ ಎರಡು ವಾರಗಳ ತನಕ ಅಜ್ಞಾತ ಸ್ಥಳದಲ್ಲಿ, ಪೊಲೀಸರ ರಕ್ಷಣೆಯಲ್ಲಿ ಇದ್ದರು.
ತಮಗೆ ರಕ್ಷಣೆ ಒದಗಿಸುವಂತೆ ಅವರಿಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ದಿನದ ಇಪ್ಪತ್ನಾಲ್ಕು ಗಂಟೆಯೂ ಆ ಇಬ್ಬರು ಮಹಿಳೆಯರಿಗೆ ಭದ್ರತೆ ಒದಗಿಸುವಂತೆ ಸುಪ್ರೀಂ ಕೋರ್ಟ್ ನಿಂದ ಕೇರಳ ರಾಜ್ಯ ಸರಕಾರಕ್ಕೆ ಸೂಚಿಸಲಾಯಿತು.












Click it and Unblock the Notifications