ಕುರಾನ್ನ 26 ಪದ್ಯಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿ ವಜಾ, 50 ಸಾವಿರ ರೂ ದಂಡ
ನವದೆಹಲಿ, ಏಪ್ರಿಲ್ 12: ಕುರಾನ್ ಧಾರ್ಮಿಕ ಗ್ರಂಥದ 26 ಉಕ್ತಿಗಳು ಧರ್ಮವನ್ನು ನಂಬದವರ ಮೇಲೆ ದಾಳಿ ನಡೆಸುವ ಇಸ್ಲಾಮಿಕ್ ಭಯೋತ್ಪಾದನಾ ಗುಂಪುಗಳನ್ನು ಸಮರ್ಥಿಸಿಕೊಳ್ಳುವಂತೆ ಇರುವುದರಿಂದ ಅವುಗಳನ್ನು ತೆಗೆದುಹಾಕಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಸಯ್ಯದ್ ವಾಸೀಂ ರಿಜ್ವಿ ಅವರಿಗೆ ಸುಪ್ರೀಂಕೋರ್ಟ್ 50,000 ರೂ. ದಂಡ ವಿಧಿಸಿದೆ.
'ಇದು ಸಂಪೂರ್ಣ ನಿಷ್ಪ್ರಯೋಜಕ ಅರ್ಜಿ' ಎಂದು ನ್ಯಾಯಮೂರ್ತಿ ರೊಹಿಂಗ್ಟನ್ ಎಫ್ ನಾರಿಮನ್ ನೇತೃತ್ವದ, ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಹೃಷಿಕೇಶ್ ರಾಯ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿತು.
ಕುರಾನ್ನಲ್ಲಿರುವ 26 ಪದ್ಯಗಳು ಈ ಮಣ್ಣಿನ ಕಾನೂನನ್ನು ಉಲ್ಲಂಘಿಸಿವೆ. ಉಗ್ರವಾದ ಮತ್ತು ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಮತ್ತು ದೇಶದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಬೆದರಿಕೆಯೊಡ್ಡುತ್ತಿದೆ. ಈ ಉಕ್ತಿಗಳು ಅಸಾಂವಿಧಾನಿಕ, ಪರಿಣಾಮರಹಿತ ಮತ್ತು ಕಾರ್ಯರಹಿತವಾಗಿವೆ ಎಂದು ಘೋಷಣೆ ಮಾಡುವಂತೆ ರಿಜ್ವಿ ನ್ಯಾಯಾಲಯವನ್ನು ಕೋರಿದ್ದರು.

ಅರ್ಜಿಯ ವಿಚಾರದ ಕುರಿತು ಅಭಿಪ್ರಾಯ ಸಂಗ್ರಹಿಸಲು ಧಾರ್ಮಿಕ ಪರಿಣತರ ಸಮಿತಿಯನ್ನು ರಚಿಸಬೇಕು. ಜತೆಗೆ ಈ ಬಗ್ಗೆ ಕೇಂದ್ರ ಸರ್ಕಾರವು ಶ್ವೇತಪತ್ರ ಹೊರಡಿಸಬೇಕು ಅಥವಾ ಸೂಕ್ತ ಮಸೂದೆ ಅಂಗೀಕರಿಸಬೇಕು ಎಂದು ನಿರ್ದೇಶನ ನೀಡುವಂತೆ ಅವರು ಮನವಿ ಮಾಡಿದ್ದರು.
ಕಳೆದ ತಿಂಗಳು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗವು (ಎನ್ಸಿಎಂ) ಕುರಾನ್ ಕುರಿತಾದ ರಿಜ್ವಿ ಹೇಳಿಕೆಯನ್ನು ಹಿಂದಕ್ಕೆ ಪಡೆಯುವಂತೆ ನೋಟಿಸ್ ಜಾರಿ ಮಾಡಿತ್ತು. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಸಭೆ ನಡೆಸುವುದಾಗಿ ತಿಳಿಸಿತ್ತು.












Click it and Unblock the Notifications