27 ವಾರದ ಭ್ರೂಣ ತೆಗೆಸಲು ಒಪ್ಪದ ಸುಪ್ರೀಂ ಕೋರ್ಟ್
ಹೊಟ್ಟೆಯಲ್ಲಿರುವ ಮಗುವು ಸಾಕಷ್ಟು ಅಂಗವೈಕಲ್ಯದಿಂದ ಕೂಡಿರುವುದು ಪತ್ತೆಯಾಗಿತ್ತು. ಇದರಿಂದ ಆಘಾತಗೊಂಡ ಆ ಮಗುವಿನ ತಾಯಿ, ತಂದೆಯರು ಈಗ ಮಗುವಿನ ಗರ್ಭಪಾತಕ್ಕೆ ಮುಂದಾಗಿದ್ದರು.
ನವದೆಹಲಿ, ಮಾರ್ಚ್ 27: ತಾನು ಹೊತ್ತಿರುವ 27 ವಾರಗಳು ತುಂಬಿರುವ (ಸುಮಾರು ಆರು ಮುಕ್ಕಾಲು ತಿಂಗಳು ಅವಧಿಯ) ಭ್ರೂಣವನ್ನು ಗರ್ಭಪಾತ ಮಾಡಿಸಲು ಒಪ್ಪಿಗೆ ಕೊಡಬೇಕೆಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಯೊಬ್ಬರ ಮನವಿಯನ್ನು ಸರ್ವೋಚ್ಛ ನ್ಯಾಯಾಲಯ ಸೋಮವಾರ ತಳ್ಳಿಹಾಕಿದೆ.
ಮಹಿಳೆಯರ ಹೆಸರನ್ನು ಹಾಗೂ ಆಕೆ ಗರ್ಭಪಾತ ಮಾಡಿಸಲು ಬಯಸಿದ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಲಾಗಿಲ್ಲ.
ಸ್ಕಾನಿಂಗ್ ವೇಳೆ, ಹೊಟ್ಟೆಯಲ್ಲಿರುವ ಮಗುವು ಸಾಕಷ್ಟು ಅಂಗವೈಕಲ್ಯದಿಂದ ಕೂಡಿರುವುದು ಪತ್ತೆಯಾಗಿತ್ತು. ಇದರಿಂದ ಆಘಾತಗೊಂಡ ಆ ಮಗುವಿನ ತಾಯಿ, ತಂದೆಯರು ಈಗ ಮಗುವಿನ ಗರ್ಭಪಾತಕ್ಕೆ ಮುಂದಾಗಿದ್ದರು. ಆದರೆ, 27 ವಾರಗಳನ್ನು ಕಳೆದ ನಂತರ ಗರ್ಭಪಾತ ಮಾಡಿಸಲು ಕಾನೂನಿನಲ್ಲಿ ಅವಕಾಶ ಇಲ್ಲದಿರುವುದರಿಂದ ತಮ್ಮ ಗರ್ಭಪಾತಕ್ಕೆ ವಿಶೇಷ ಅನುಮತಿ ನೀಡಬೇಕೆಂದು ಗರ್ಭಿಣಿ ಮಹಿಳೆ ಸುಪ್ರೀಂ ಕೋರ್ಟ್ ಗೆ ಮೊರೆಯಿಟ್ಟಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೋರ್ಟ್, ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಎಸ್.ಎ. ಬಾಬ್ಡೆ ಹಾಗೂ ನ್ಯಾ. ಎಲ್. ನಾಗೇಶ್ವರ ರಾವ್ ಅವರಿದ್ದ ನ್ಯಾಯಪೀಠ, ಈ ಬಗ್ಗೆ ಮುಂಬೈನಲ್ಲಿರುವ ಕೆಇಎಂ ಆಸ್ಪತ್ರೆ ವೈದ್ಯರ ಸಲಹೆ ಕೇಳಿತ್ತು.
ಇದಕ್ಕೆ ಉತ್ತರಿಸಿರುವ ತಜ್ಞ ವೈದ್ಯರ ತಂಡ, ಭ್ರೂಣವು ಅಂಗವೈಕಲ್ಯತೆಯಿಂದ ಬಳಲುತ್ತಿದ್ದರೂ, ಅದರ ಆರೋಗ್ಯ ಸಹಜವಾಗಿದೆ. ಅಲ್ಲದೆ, ತಾಯಿಯ ಆರೋಗ್ಯವೂ ಚೆನ್ನಾಗಿದೆ. ಇಂಥ ಸಂದರ್ಭದಲ್ಲಿ ಮಗುವನ್ನು ಗರ್ಭದಿಂದ ಹೊರತಗೆದರೂ ಅದು ಜೀವಂತವಾಗಿಯೇ ಹೊರಬರುವ ಸಾಧ್ಯತೆಗಳು ಅಧಿಕವಾಗಿರುವುದರಿಂದ ಗರ್ಭಪಾತವನ್ನು ವೈದ್ಯರು, ಸಂಬಂಧಪಟ್ಟ ವ್ಯಕ್ತಿಗೆ ಸಲಹೆ ನೀಡಿಲ್ಲ. ಈ ಪ್ರಕರಣದಲ್ಲಿ ಗರ್ಭ ಮುಂದುವರಿಸುವುದರಿಂದ ಮಗುವಿಗೂ, ತಾಯಿಗೂ ಯಾವುದೇ ತೊಂದರೆಯಿಲ್ಲ'' ಎಂದು ಸ್ಪಷ್ಟಪಡಿಸಿದೆ.
ತಜ್ಞರ ಈ ವರದಿಯನ್ನು ಭಾರತ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್, ಸೋಮವಾರದ ವಿಚಾರಣೆ ವೇಳೆ ನ್ಯಾಯಪೀಠಕ್ಕೆ ಸಲ್ಲಿಸಿದರು. ವೈದ್ಯರ ಸಲಹೆಯ ಆಧಾರದ ಮೇರೆಗೆ, ಗರ್ಭಿಣಿ ಮಹಿಳೆಯ ಮನವಿಯನ್ನು ನ್ಯಾಯಪೀಠ ತಳ್ಳಿಹಾಕಿತು.
ಕಾನೂನು ಏನನ್ನುತ್ತೆ?
ಕಾನೂನಿನ ಪ್ರಕಾರ, 20 ವಾರ ದಾಟಿದ ಯಾವುದೇ ಗರ್ಭಿಣಿಗೂ ಗರ್ಭಪಾತ ಮಾಡಿಸಲು ಅವಕಾಶವಿಲ್ಲ. 20 ವಾರಗಳು ಕಳೆದ ನಂತರದ ಬೆಳವಣಿಗೆಯ ಪ್ರಕಾರ, ತಾಯಿಗೆ ಅಥವಾ ಮಗುವಿಗೆ ಗಂಡಾಂತರ ಇದ್ದರೂ ಗರ್ಭಪಾತ ಮಾಡಿಸಲು ಕಾನೂನು ಸಮ್ಮತಿಸುವುದಿಲ್ಲ.












Click it and Unblock the Notifications