ಶಬರಿಮಲೆ ದೇವಸ್ಥಾನದ ವಿವಾದ: ಕಾನೂನು ಹೋರಾಟದ ಟೈಮ್ಲೈನ್
ನವದೆಹಲಿ, ಸೆಪ್ಟೆಂಬರ್ 28: ಕೇರಳದ ಶಬರಿಮಲೆ ದೇವಸ್ಥಾನದ ಒಳಗೆ ಎಲ್ಲ ವಯೋಮಾನದ ಮಹಿಳೆಯರಿಗೂ ಮುಕ್ತ ಪ್ರವೇಶಕ್ಕೆ ಅನುಮತಿ ನೀಡುವಂತೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಋತುಮತಿಯಾದ ಮಹಿಳೆಯರಿಗೆ ದೇವಸ್ಥಾನದ ಆವರಣದ ಒಳಗೆ ಪ್ರವೇಶ ನೀಡದೆ ಇರುವುದು ಸುಮಾರು 800 ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಆಚರಣೆ. ಮಹಿಳೆಯರಿಗೆ ಪ್ರವೇಶ ನೀಡಿದರೆ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರತಿಪಾದಿಸಿತ್ತು.
ಆದರೆ, ಪುರುಷರಷ್ಟೇ ಮಹಿಳೆಯರೂ ಸಮಾನರು. ಅವರಿಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿದೆ. ಆಡಳಿತ ಮಂಡಳಿ ಹೇರಿರುವ ನಿರ್ಬಂಧವನ್ನು ಅತ್ಯಗತ್ಯ ಧಾರ್ಮಿಕ ನಿಯಮ ಎಂದು ಪರಿಗಣಿಸಲು ಸಾಧ್ಯವಿಲ್ಲ. ಪೂಜಿಸುವ ಹಕ್ಕು ಎಲ್ಲರಿಗೂ ಇದೆ. ಅವರನ್ನು ದೇವಸ್ಥಾನದಿಂದ ಹೊರಗಿಟ್ಟಿರುವುದು ಸಂವಿಧಾನದ ತತ್ವಗಳನ್ನು ಗಾಳಿಗೆ ತೂರಿದಂತೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಶುಕ್ರವಾರ ಪ್ರಕಟವಾಗಿದ್ದರೂ, ಅನೇಕ ವರ್ಷಗಳಿಂದ ಈ ವಿವಾದ ನ್ಯಾಯಾಲಯದ ಅಂಗಳದಲ್ಲಿ ವಿಚಾರಣೆಗೆ ಒಳಪಡದೆ ನನೆಗುದಿಗೆ ಬಿದ್ದಿತ್ತು. ಈ ಪ್ರಕರಣದ ಕಾನೂನು ಹೋರಾಟದ ಹಾದಿ ಹೀಗಿದೆ.
1991
ಶಬರಿಮಲೆ ದೇವಸ್ಥಾನದಲ್ಲಿ ನಿರ್ದಿಷ್ಟ ವಯೋಮಾನದ ಮಹಿಳೆಯರಿಗೆ ವಿಧಿಸಿರುವ ನಿರ್ಬಂಧವನ್ನು ಕೇರಳ ಹೈಕೋರ್ಟ್ ಎತ್ತಿಹಿಡಿಯಿತು.
ಇಬ್ಬರು ನ್ಯಾಯಮೂರ್ತಿಗಳ ನ್ಯಾಯಪೀಠ, ದೇವಸ್ಥಾನದ ಮಂಡಳಿಯ ನಿಯಮವು ಸಂವಿಧಾನ ಅಥವಾ 1965ರ ಕೇರಳ ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
2006
ನಿರ್ಬಂಧದ ನಡುವೆಯೂ ದೇವಸ್ಥಾನವನ್ನು ಮಹಿಳೆಯೊಬ್ಬರು ಪ್ರವೇಶಿಸಿದ್ದ ಸಂಕೇತ ಕಾಣಿಸುತ್ತಿದೆ ಎಂದು ಖ್ಯಾತ ಜೋತಿಷಿಯೊಬ್ಬರು ಹೇಳಿಕೆ ನೀಡಿದ್ದರು.
2006
ಜೋತಿಷಿಯ ಹೇಳಿಕೆ ಬೆನ್ನಲ್ಲೇ ನಟಿ, ಹಾಲಿ ಸಚಿವೆ ಜಯಮಾಲಾ ಅವರು, ತಾವು 28 ವರ್ಷದವರಿದ್ದಾಗ 1987ರಲ್ಲಿ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ದೇವಸ್ಥಾನದ ಒಳಗೆ ಪ್ರವೇಶಿಸಿದ್ದಲ್ಲದೆ ಮೂರ್ತಿಯನ್ನು ಸ್ಪರ್ಶಿಸಿದ್ದಾಗಿ ಹೇಳಿದ್ದರು. ದೇವಸ್ಥಾನದ ಅರ್ಚಕ ಅನುಮತಿ ಪಡೆದೇ ಈ ಕ್ರಮ ಅನುಸರಿಸಿದ್ದಾಗಿ ತಿಳಿಸಿದ್ದರು.
2006
ಈ ವಿವಾದವು ತೀವ್ರಗೊಂಡಿದ್ದರಿಂದ ಕೇರಳ ಸರ್ಕಾರ ಅಪರಾಧ ದಳದ ಮೂಲಕ ಘಟನೆಯನ್ನು ವಿಚಾರಣೆಗೆ ಒಳಪಡಿಸಿತು. ಬಳಿಕ ಈ ಪ್ರಕರಣವನ್ನು ಕೈಬಿಡಲಾಯಿತು.
2008
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬೆಂಬಲಿಸಿ ಕೇರಳದ ಎಲ್ಡಿಎಫ್ ಸರ್ಕಾರ ಅಫಿಡವಿಟ್ ಸಲ್ಲಿಸಿತು.
2016
ಮಹಿಳೆಯರಿಗೆ ವಿಧಿಸಿರುವ ನಿಷೇಧ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ಗೆ ದಿ ಇಂಡಿಯಾ ಯಂಗ್ ಲಾಯರ್ಸ್ ಅಸೋಸಿಯೇಷನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತು.
ನವೆಂಬರ್ 2016
ಎಲ್ಲ ವಯೋಮಾನದ ಮಹಿಳೆಯರಿಗೂ ಪ್ರವೇಶ ಕಲ್ಪಿಸುವುದರ ಪರವಾಗಿ ಎಲ್ಡಿಎಫ್ ಸರ್ಕಾರ ಅಫಿಡವಿಟ್ ಸಲ್ಲಿಸಿತು.
ಜುಲೈ, 2018
ಪಿಐಎಲ್ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ, ನಿರ್ದಿಷ್ಟ ವಯೋಮಾನದ ಮಹಿಳೆಯರಿಗೆ ಪ್ರವೇಶ ನಿರಾಕರಿಸುವ ದೇವಸ್ಥಾನದ ಆಡಳಿತದ ನಿರ್ಧಾರದ ವಿರುದ್ಧ ಪ್ರಶ್ನಿಸಿದರು. ಬಳಿಕ ಅರ್ಜಿಯ ಅಂತಿಮ ತೀರ್ಪನ್ನು ಕಾಯ್ದಿರಿಸಲಾಯಿತು.
ಸೆಪ್ಟೆಂಬರ್, 2018
ದೇವಸ್ಥಾನದ ಆವರಣದ ಒಳಗೆ ಮಹಿಳೆಯರ ಪ್ರವೇಶ ನಿಷೇಧಿಸುವ ಆಚರಣೆಯನ್ನು ತೆರವುಗೊಳಿಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ, ಯಾವುದೇ ವಯೋಮಾನದ ಮಹಿಳೆಯರು ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸಲು ಅರ್ಹರು ಎಂದು ತೀರ್ಪು ನೀಡಿತು.
ನವೆಂಬರ್ 2019
ನವೆಂಬರ್ 14 ರಂದು ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಸಲ್ಲಿಸಲಾಗಿದ್ದ ಸುಮಾರು 56 ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವಂತೆ ಆದೇಸಿತು. ಏಳು ನ್ಯಾಯಮೂರ್ತಿಗಳ ವಿಸ್ತೃತ ಪೀಠ ಈ ಪ್ರಕರಣದ ವಿಚಾರಣೆ ನಡೆಸಲಿದೆ.












Click it and Unblock the Notifications