ನ.17 ರಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಓಪನ್: ದಿನಾಂಕಗಳು ಮತ್ತು ವೇಳಾಪಟ್ಟಿ ತಿಳಿಯಿರಿ
ಸ್ವಾಮಿಯೇ ಶರಣಂ ಅಯ್ಯಪ್ಪ... ಸ್ವಾಮಿಯೇ ಶರಣಂ ಅಯ್ಯಪ್ಪ.... ಎಂದು ಹೇಳಲು ಅದೆಷ್ಟು ಆನಂದ. ಅದೆಷ್ಟು ನೆಮ್ಮದಿ. ನಾವು ನಮ್ಮೊಳಗೆ ಅಯ್ಯಪ್ಪನನ್ನು ಕಂಡಷ್ಟೇ ತೃಪ್ತಿ ಮತ್ತು ಸಂತೋಷ. ಈ ಸಂತಸದ ಗಳಿಗೆಯನ್ನು ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಶಬರಿಮಲೆಗೆ ಹರಿದು ಬರುತ್ತದೆ. ಇದು ಅಯ್ಯಪ್ಪ ಸ್ವಾಮಿಗಿರುವ ಶಕ್ತಿ ಮತ್ತು ಆತನ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ.
ವಿಶ್ವಪ್ರಸಿದ್ಧ ಕೇರಳದ ಸ್ವಾಮಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ನವೆಂಬರ್ 17 ರಿಂದ ತೆರೆಯಲಿದೆ. ಸುಮಾರು 914 ಮೀಟರ್ ಎತ್ತರದಲ್ಲಿರುವ ಅಯ್ಯಪ್ಪ ಸ್ವಾಮಿಯನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಭೇಟಿ ಮಾಡಲು ಆಗಮಿಸುತ್ತಾರೆ. ಶಬರಿಮಲೆ ದೇವಾಲಯದ ತೀರ್ಥಯಾತ್ರಾ ಕಾಲ 2022 ಡಿಸೆಂಬರ್ 27 ಮಂಡಲ ಪೂಜೆಯಿಂದ ಆರಂಭವಾಗಿ ಶನಿವಾರ ಜನವರಿ 14, 2023ಕ್ಕೆ (ಮಕರ ವಿಳಕ್ಕು) ಕೊನೆಗೊಳ್ಳಲಿದೆ. ಇದನ್ನು ಮಂಡಲ ಪೂಜಾ ಸಮಯ ಎಂದು ಕರೆಯಲಾಗುತ್ತದೆ. ಇದು ಡಿಸೆಂಬರ್ ಮತ್ತು ಜನವರಿಯ 41 ದಿನಗಳವರೆಗೆ ಇರುತ್ತದೆ.
ಸ್ವಾಮಿಯೇ ಶರಣಂ ಅಯ್ಯಪ್ಪ: ಮುಂದಿನ ವಾರದಿಂದ ಭಕ್ತರಿಗಾಗಿ ತೆರೆಯಲಿದೆ ಶಬರಿಮಲೆ
ಮಂಡಲ ಪೂಜಾ (41 ದಿನಗಳು) ಸಮಯದಲ್ಲಿ ಕಟ್ಟುನಿಟ್ಟಾದ ಉಪವಾಸವನ್ನು ಮಾಡಲಾಗುತ್ತದೆ. ಆದರೆ ಕೆಲವರು ಕೆಲವು ದಿನಗಳವರೆಗೆ ಮಾತ್ರ ಉಪವಾಸ ಅಥವಾ ತಪಸ್ಸನ್ನು ಆಚರಿಸುತ್ತಾರೆ. ಈ ಸಮಯದಲ್ಲಿ ಮಾಂಸಾಹಾರವನ್ನು ಸೇವಿಸುವುದಿಲ್ಲ. ಜೊತೆಗೆ ಲೈಂಗಿಕತೆಯನ್ನು ತಪ್ಪಿಸಲಾಗುತ್ತದೆ ಮತ್ತು ವಿಶೇಷವಾದ 'ರುದ್ರಾಕ್ಷ' ಮಾಲೆಯನ್ನು ಧರಿಸಲಾಗುತ್ತದೆ. ಮಂಡಲ ಪೂಜೆ ಆರಂಭವಾಗುತ್ತಿದ್ದಂತೆ ಕಟ್ಟುನಿಟ್ಟಾದ ಆಚರಣೆಯನ್ನು ಭಕ್ತರು ಮಾಡುತ್ತಾರೆ. ಸೂರ್ಯೋದಯಕ್ಕಿಂತ ಮೊದಲೇ ತಣ್ಣೀರಿನ ಸ್ನಾನ ಮಾಡುವ ಭಕ್ತರು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಯಾರೊಂದಿಗಾದರು ಮಾತನಾಡುವಾಗ 'ಸ್ವಾಮಿ' ಎಂದೇ ಸಂಭೋದಿಸುತ್ತಾರೆ. ಜೊತೆಗೆ ಕಪ್ಪು ಧೋತಿಗಳನ್ನು ಧರಿಸುತ್ತಾರೆ.
ಶಬರಿಮಲೆ ಪವಿತ್ರ ಯಾತ್ರೆ
ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಪೂಜಿಸುವ ದೇವರುಗಳಲ್ಲಿ ಅಯ್ಯಪ್ಪ ಸ್ವಾಮಿಯೂ ಒಬ್ಬನು. ಪ್ರತೀ ವರ್ಷ ತಪ್ಪದೇ ಶಬರಿಮಲೆಗೆ ಪವಿತ್ರ ಯಾತ್ರೆಯನ್ನು ಭಕ್ತರು ಕೈಗೊಳ್ಳುತ್ತಾರೆ. ಅಯ್ಯಪ್ಪನ ಅನುಗ್ರಹ ಪಡೆಯಲು ಭಕ್ತಿಯನ್ನು ಅನುಭವಿಸಲು ದಟ್ಟವಾದ ಕಾಡಿನಲ್ಲಿ ಬೆಟ್ಟದ ಹಾದಿಯಲ್ಲಿ ಚಾರಣ ಮಾಡುತ್ತಾರೆ. ತಮ್ಮ ಕಷ್ಟವನ್ನು ನೀಗಿಸಲು ಚಾರಣ ಹೋಗುತ್ತಾ ಪವಿತ್ರ ಮಂತ್ರಗಳ ಮೂಲಕ ಸ್ವಾಮಿ ಅಯ್ಯಪ್ಪನನ್ನು ಕೂಗುತ್ತಾರೆ.
ಮಕರ ಸಂಕ್ರಾಂತಿಯ ರಾತ್ರಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಬಳಿ ಆಕಾಶದಲ್ಲಿ ಒಂದು ಬೆಳಕು ಅದ್ಭುತವಾಗಿ ಗೋಚರಿಸುತ್ತದೆ. ದಟ್ಟ ಕತ್ತಲೆಯಲ್ಲೂ ಬೆಳಕು ಪ್ರಕಾಶಮಾನವಾಗಿ ಬೆಳಗುತ್ತಿರುತ್ತದೆ. ಈ ಬೆಳಕನ್ನು ನೋಡಿದಾಗಲೆಲ್ಲಾ ಅದರ ಜೊತೆಯಲ್ಲಿ ಶಬ್ದವೂ ಕೇಳಿಸುತ್ತದೆ ಎಂದು ಹೇಳಲಾಗುತ್ತದೆ.ಪ್ರತಿ ವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಭಕ್ತರು ಈ ಬೆಳಕನ್ನು ನೋಡಲು ಬರುತ್ತಾರೆ. ಭಕ್ತರು ಈ ದೇವರನ್ನು ಜ್ಯೋತಿ ಎಂದು ನಂಬುತ್ತಾರೆ ಮತ್ತು ದೇವರು ಅದನ್ನು ಭಕ್ತರಿಗಾಗಿ ಕಳುಹಿತ್ತಾನೆ ಎನ್ನುವ ನಂಬಿಕೆಯಿದೆ. ಈ ಮಕರ ಜ್ಯೋತಿ ನಕ್ಷತ್ರವು ಕಾಣಿಸುತ್ತಿದ್ದಂತೆ ಅದನ್ನು ಪೂಜಿಸಲಾಗುತ್ತದೆ.
ಶಬರಿಮಲೆ ಮಂಡಲ ಪೂಜೆಯ ಸಮಯ
ಶಬರಿಮಲೆಗೆ ಹೋಗುವ ಭಕ್ತರು ಇರುಮುಡಿ ಅನ್ನು ಒಯ್ಯುತ್ತಾರೆ. ಅಯ್ಯಪ್ಪ ದೀಕ್ಷೆ ಪಡೆಯುವವರು ಈ ಇರುಮುಡಿ ಕಟ್ಟನ್ನು ಹೋರುತ್ತಾರೆ. ಇದರಲ್ಲಿ ಕಾಯಿ, ಕಾಣಿಕೆ ನಾಣ್ಯಗಳು, ಅಕ್ಕಿ ಹಾಗೂ ಬೆಲ್ಲ, ಎಲೆಅಡಿಕೆ, ಅರಿಶಿನ, ಗಂಧದ ಪುಡಿ, ವಿಭೂತಿ, ಗುಲಾಬಿ ನೀರು, ಅವಲಕ್ಕಿ, ಊದುಬತ್ತಿ, ಕಾಳುಮೆಣಸು, ಕರ್ಪೂರ ಇತ್ಯಾದಿಗಳು ಇರುತ್ತದೆ. 'ಇರುಮುಡಿ'ಯನ್ನು ಅಯ್ಯಪ್ಪ ದೇವರಿಗೆ ಅರ್ಪಿಸಲಾಗುತ್ತದೆ.
'ಇರು' ಎಂದರೆ ಎರಡು ಎಂದರ್ಥ. 'ಮುಡಿ' ಎಂದರೆ ಚೀಲ, 'ಕಟ್ಟು' ಎಂದರೆ ಗಂಟು ಹಾಕುವುದು. ಎರಡು ಭಾಗವಿರುವ ಚೀಲದೊಳಗೆ ಪೂಜೆ ಹಾಗೂ ಯಾತ್ರೆಗೆ ಬೇಕಾದ ವಸ್ತುಗಳನ್ನಿಟ್ಟುಕೊಂಡು ಗಂಟು ಹಾಕಿಕೊಂಡು ಹೊತ್ತು ಹೋಗುವುದೇ ಇರುಮುಡಿ ಕಟ್ಟು. ಈ ಇರುಮುಡಿಯು ಬಹಳ ಪವಿತ್ರವಾದುದಾಗಿದ್ದು, 41 ದಿನ ವ್ರತ ಆಚರಿಸುವವರು ಮಾತ್ರ ಇದನ್ನು ಹೊರಬಹುದು.
ಶಬರಿಮಲೆ ಮಂಡಲ ಪೂಜೆಯ ಸಮಯ ಸೂರ್ಯೋದಯ ಡಿಸೆಂಬರ್ 27 ಬೆಳಿಗ್ಗೆ 7:10ರಿಂದ ಸೂರ್ಯಾಸ್ತ ಡಿಸೆಂಬರ್ 27 ಸಂಜೆ 5:45ರವರೆಗೆ ಇರುತ್ತದೆ.
ಮಂಡಲ ಪೂಜೆಯ ಮಹತ್ವ:
ಶಬರಿಮಲೆ ದೇವಾಲಯವು ಶಬರಿ ಬೆಟ್ಟಗಳ ಕಾಡುಗಳ ನಡುವೆ ಇರುವ ಪ್ರಮುಖ ಯಾತ್ರಾ ಸ್ಥಳವಾಗಿದೆ. ದಂತಕಥೆಗಳ ಪ್ರಕಾರ 'ಮಹಿಷಿ' ಎಂಬ ರಾಕ್ಷಸನನ್ನು ಕೊಂದ ನಂತರ ಅಯ್ಯಪ್ಪ ಈ ಸ್ಥಳದಲ್ಲಿ ಧ್ಯಾನ ಮಾಡಿದರು. ಮಂಡಲ ಕಾಲ ಅಥವಾ ಮಂಡಲ ಮಾಸ ಎಂಬುದು ಶಬರಿಮಲೆ ದೇಗುಲಕ್ಕೆ ಮೀಸಲಾದ ಅವಧಿಯಾಗಿದ್ದು ಅದು 41 ದಿನಗಳವರೆಗೆ ಇರುತ್ತದೆ. ಈ ಅವಧಿಯನ್ನು ಭಕ್ತರು ಕಟ್ಟುನಿಟ್ಟಾಗಿ ಆಚರಿಸುತ್ತಾರೆ.
ಶಬರಿಮಲೆ ದೇವಸ್ಥಾನಕ್ಕೆ ಯಾವುದೇ ಧರ್ಮದ ಜನರು ಭೇಟಿ ನೀಡಬಹುದು. ಏಕೆಂದರೆ ಇಲ್ಲಿ ಯಾವುದೇ ಜಾತಿ ಅಥವಾ ಧರ್ಮದ ತಾರತಮ್ಯವಿಲ್ಲ. ಆದಾಗ್ಯೂ 10-50 ವರ್ಷ ವಯಸ್ಸಿನ ಮಹಿಳಾ ಭಕ್ತರು ಮಂಡಲ ಪೂಜಾ ಅವಧಿಯಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗಿತ್ತು. ಆದರೀಗ ಅದಕ್ಕೂ ಕಾನೂನಾತ್ಮಕವಾಗಿ ಅವಕಾಶ ಸಿಕ್ಕಿದೆ.
ಪ್ರಸಿದ್ಧ ಶಬರಿಮಲೆ ದೇವಸ್ಥಾನದ ವಾರ್ಷಿಕ ತೀರ್ಥಯಾತ್ರೆಯು ನವೆಂಬರ್ ಮಧ್ಯದಿಂದ ಜನವರಿ ಮಧ್ಯದವರೆಗೆ ಇರುತ್ತದೆ. ಇದು 'ಮಕರವಿಳಕ್ಕು' ಆಚರಣೆಯೊಂದಿಗೆ ಕೊನೆಗೊಳ್ಳುತ್ತದೆ. ಅಯ್ಯಪ್ಪ ದೇವರಿಗೆ ತಮ್ಮ ಪವಿತ್ರ ಪ್ರಾರ್ಥನೆಗಳನ್ನು ಸಲ್ಲಿಸಲು ಮಂಡಲ ಪೂಜಾ ಸಮಯದಲ್ಲಿ ಲಕ್ಷಾಂತರ ಭಕ್ತರು ಶಬರಿಮಲೆ ದೇಗುಲಕ್ಕೆ ಭೇಟಿ ನೀಡುತ್ತಾರೆ.
ಪ್ರತೀ ವರ್ಷ ಆಚರಿಸಲಾಗುವ ದಿನಾಂಕ-
2019 ಭಾನುವಾರ, 17 ನವೆಂಬರ್
2020 ಸೋಮವಾರ, 16 ನವೆಂಬರ್
2021 ಮಂಗಳವಾರ, 16 ನವೆಂಬರ್
2022 ಗುರುವಾರ, 17 ನವೆಂಬರ್
2023 ಶುಕ್ರವಾರ, 17 ನವೆಂಬರ್
2024 ಶನಿವಾರ, 16 ನವೆಂಬರ್
2025 ಸೋಮವಾರ, 17 ನವೆಂಬರ್
2026 ಮಂಗಳವಾರ, 17 ನವೆಂಬರ್
2027 ಬುಧವಾರ, 17 ನವೆಂಬರ್
2028 ಗುರುವಾರ, 16 ನವೆಂಬರ್
2029 ಶನಿವಾರ, 17 ನವೆಂಬರ್