RSS, ಚಡ್ಡಿ, ಮಹಿಳೆಯರು: ರಾಹುಲ್ ಗಾಂಧಿಗೊಂದು ನೀತಿಪಾಠ
RSSನಲ್ಲಿ ಮಹಿಳೆಯರಿಗೆ ಸೂಕ್ತಸ್ಥಾನಮಾನ ಇಲ್ಲ ಎನ್ನುವ ಮಾತನ್ನು ರಾಹುಲ್ ಗಾಂಧಿ ಆಡಿದ್ದಾರೆ. ಸಂಘಟನೆಯಲ್ಲಿ ಮಹಿಳೆಯರಿಗೋಸ್ಕರ 'ರಾಷ್ಟ್ರ ಸೇವಿಕಾ ಸಮಿತಿ' ಎನ್ನುವ ಮಹಿಳಾ ಘಟಕ ಅಸ್ತಿತ್ವದಲ್ಲಿದೆ. ಈ ಬಗ್ಗೆ ಒಂದು ಮಾಹಿತಿ.
ವಿಶ್ವದಲ್ಲೇ ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಸಂಘಟನೆಗಳಲ್ಲೊಂದಾದ RSS ಮತ್ತು ಬಿಜೆಪಿ, ನರೇಂದ್ರ ಮೋದಿ, ಅಮಿತ್ ಶಾ ವಿರುದ್ದ ರಾಹುಲ್ ಗಾಂಧಿಯವರ ವಾಗ್ದಾಳಿ ಮುಂದುವರಿದಿದೆ. ಮುಂದುವರಿಯಲಿ, ವಿರೋಧ ಪಕ್ಷದ ನಾಯಕರು ಎಂದ ಮೇಲೆ ಇದು ಇರಲೇ ಬೇಕು, ತಕರಾರಿಲ್ಲ..
ಆದರೆ, RSS ಸಂಘಟನೆಯ ಮಹಿಳಾ ಸದಸ್ಯರು ಚಡ್ಡಿ ಹಾಕುತ್ತಾರಾ ಎನ್ನುವ ಸಂದೇಹ ಯುವರಾಜರಿಗೆ ಯಾಕೆ ಕಾಡಲಾರಂಭಿಸಿತು ಎನ್ನುವುದು ಇಲ್ಲಿ ಪ್ರಶ್ನೆ. ಅಸಲಿಗೆ, ಸಂಘಟನೆ ಚಡ್ಡಿಯಿಂದ ಹೊರಬಂದು ಪ್ಯಾಂಟಿಗೆ ಬದಲಾಗಿ ತುಂಬಾ ದಿನಗಳೇ ಆಗಿ ಹೋಗಿದೆ. ಪ್ಯಾಂಟಿನಲ್ಲಿ ವಿಜಯದಶಮಿಯ ಪಥಸಂಚಲನವೂ ನಡೆದಿದ್ದಾಗಿದೆ.
ಆರೆಸ್ಸೆಸ್ ನಲ್ಲಿ ಚಡ್ಡಿ ಹಾಕಿಕೊಂಡ ಮಹಿಳೆಯನ್ನು ನೋಡಿದ್ದೀರಾ
ಬಿಜೆಪಿಯ ಮಾತೃಸಂಘಟನೆ RSSನಲ್ಲಿ ಎಷ್ಟು ಜನ ಮಹಿಳೆಯರಿದ್ದಾರೆ, ಅವರ ಶಾಖೆಯಲ್ಲಿ ಎಂದಾದರೂ ಮಹಿಳೆಯರು ಚಡ್ಡಿ ಹಾಕಿಕೊಂಡಿರುವುದನ್ನು ನೋಡಿದಿರಾ, ನಾನಂತೂ ನೋಡಲಿಲ್ಲ. ಪುರುಷ ಪ್ರಧಾನ ಸಂಘಟೆನೆಯಾಗಿರುವ ಆರ್ ಎಸ್ ಎಸ್ ನಲ್ಲಿ ಮಹಿಳೆಯರಿಗೆ ಸೂಕ್ತಸ್ಥಾನಮಾನವಿಲ್ಲ ಎನ್ನುವ ಮಾತು ರಾಹುಲ್ ಗಾಂಧಿಯವರಿಂದ ಬಂದಿದೆ.
ಸುಮಾರು ಒಂಬತ್ತು ದಶಕಗಳಿಂದ ಚಾಲ್ತಿಯಲ್ಲಿದ್ದ ಗಣವೇಶವನ್ನು (ಚಡ್ಡಿ) RSS, ಕಳೆದ ವರ್ಷ ಬದಲಿಸಿದ್ದರಿಂದ, ಚಡ್ಡಿ ಜಾಗದಲ್ಲಿ ಪ್ಯಾಂಟ್ ಬಂದಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಮಾತೃ ಸಂಘಟನೆಯೊಂದರ ಬಗ್ಗೆ, ಇದಕ್ಕಿಂತೆ ಹೆಚ್ಚಾಗಿ RSS ಟೀಕಿಸದೇ ರಾಹುಲ್ ಭಾಷಣ ಮುಗಿಯದೇ ಇರುವುದರಿಂದ, ಎಐಸಿಸಿ ಉಪಾಧ್ಯಕ್ಷರು ಈ ವಿಚಾರವನ್ನು ತಿಳಿದುಕೊಳ್ಳುವುದು ಸೂಕ್ತ.
ಇನ್ನು, RSSನಲ್ಲಿ ಮಹಿಳೆಯರಿಗೆ ಸೂಕ್ತಸ್ಥಾನಮಾನ ಇಲ್ಲ ಎನ್ನುವ ಮಾತನ್ನು ರಾಹುಲ್ ಗಾಂಧಿ ಆಡಿದ್ದಾರೆ. ಸಂಘಟನೆಯಲ್ಲಿ ಮಹಿಳೆಯರಿಗೋಸ್ಕರ 'ರಾಷ್ಟ್ರ ಸೇವಿಕಾ ಸಮಿತಿ' ಎನ್ನುವುದು ಅಸ್ತಿತ್ವದಲ್ಲಿದೆ ಎನ್ನುವುದನ್ನು ರಾಹುಲ್ ಗಾಂಧಿಗಿಂತ ಮೊದಲು, ಅವರಿಗೆ ಭಾಷಣ ಬರೆದುಕೊಟ್ಟವರು 'ಬರೆದಿಟ್ಟು'ಕೊಳ್ಳುವುದು ಒಳ್ಳೆಯದು.
ರಾಹುಲ್ ಫುಲ್ ಫಾರಂನಲ್ಲಿ
ಇತ್ತೀಚಿನ ತಮ್ಮ ವಿದೇಶ ಪ್ರವಾಸದ ನಂತರ ಸಖತ್ ಫಾರಂನಲ್ಲಿರುವ ರಾಹುಲ್ ಗಾಂಧಿ, ಸೋಮವಾರ (ಅ 9) ಜೀನ್ಯೂಸ್ ವರದಿಗಾರ, ಅಮಿತ್ ಶಾ ಮಗನ ಹಗರಣದ ಬಗ್ಗೆ ಕೇಳಿದ ಪ್ರಶ್ನೆಗೆ ರಾಹುಲ್ ಉತ್ತರಿಸಿದ ರೀತಿ ವೈರಲ್ ಆಗಿದೆ. ಇಂತಹ ಪ್ರಶ್ನೆಯನ್ನು ಕೇಳಿದ ನಿಮಗೆ ತುಂಬಾ ಧೈರ್ಯ ಎಂದಿರುವ ರಾಹುಲ್, ಪ್ರಶ್ನೆಗೂ ಉತ್ತರಿಸಿ ಮಾಧ್ಯಮದವರ ಜವಾಬ್ದಾರಿಯ ಬಗ್ಗೆಯೂ ಕಿವಿಹಿಂಡಿದ್ದರು. ಜೀನ್ಯೂಸ್ ಮುಖ್ಯಸ್ಥ ಸುಭಾಷ್ ಚಂದ್ರ, ಬಿಜೆಪಿ ರಾಜ್ಯಸಭಾ ಸದಸ್ಯರು.
ರಾಷ್ಟ್ರ ಸೇವಿಕಾ ಸಮಿತಿ' ಮಹಿಳಾ ಘಟಕ
ಅಕ್ಟೋಬರ್ 25,1936ರ ವಿಜಯದಶಮಿಯ ದಿನದಂದು RSS ಸಂಘಟನೆಯಿಂದ ಸ್ಪೂರ್ತಿ ಪಡೆದು 'ರಾಷ್ಟ್ರ ಸೇವಿಕಾ ಸಮಿತಿ' ಮಹಿಳಾ ಘಟಕ ಮಹರಾಷ್ಟ್ರದ ವಾರ್ಧಾ ನಗರದಲ್ಲಿ ಅಸ್ತಿತ್ವಕ್ಕೆ ಬಂತು. ಇದನ್ನು RSS ಮಹಿಳಾ ಘಟಕ ಎಂದು ಕರೆಯಲಾಗುತ್ತಾದರೂ, ಇದು ಸ್ವತಂತ್ರ ಸಂಘಟನೆಯಾಗಿದೆ. (ಚಿತ್ರ ಕೃಪೆ: ಸಂವಾದ)
ಲಕ್ಷ್ಮೀಬಾಯಿ ಕೇಲ್ಕರ್ ಸಂಘಟನೆಯ ಸಂಸ್ಥಾಪಕರು
ಈ ಸಂಘಟನೆ ಭಾರತೀಯತೆ, ರಾಷ್ಟ್ರೀಯತೆ, ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತದೆ. ಸಂಘಟನೆಯ ಈಗಿನ ಮುಖ್ಯಸ್ಥೆ ಶಾಂತಕುಮಾರಿ, ಪ್ರಧಾನ ಕಾರ್ಯದರ್ಶಿ ಸೀತಾ ಆನಂದನಂ. ಲಕ್ಷ್ಮೀಬಾಯಿ ಕೇಲ್ಕರ್ ಈ ಸಂಘಟನೆಯ ಸಂಸ್ಥಾಪಕರು. (ಚಿತ್ರದಲ್ಲಿ ವಿ ಶಾಂತಕುಮಾರಿ, ಕೃಪೆ: ಸಂವಾದ)
ಹೆಗಡೇವಾರ್ ಅವರನ್ನು ಭೇಟಿಯಾಗಿ ಸಂಘಟನೆ ಹುಟ್ಟುಹಾಕುವ ನಿರ್ಧಾರ
ರಾಷ್ಟ್ರ ಸೇವಿಕಾ ಸಮಿತಿಯನ್ನು ಹುಟ್ಟುಹಾಕುವ ಮೊದಲು ಕೇಲ್ಕರ್, RSS ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಗಡೇವಾರ್ ಅವರನ್ನು ಭೇಟಿಯಾಗಿ ಮಹಿಳಾ ಸಂಘಟನೆ ಹುಟ್ಟುಹಾಕುವ ನಿರ್ಧಾರಕ್ಕೆ ಬಂದಿದ್ದರು. RSS ನಂತೆ ಇಲ್ಲೂ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಯೋಗ, ಗಾಯನ, ದೇಶಭಕ್ತಿ ಗೀತೆಯ ಪಾಠ ಇಲ್ಲಿ ನಡೆಯುತ್ತದೆ.
ಸುಮಾರು ಹತ್ತು ಲಕ್ಷ ಸಕ್ರಿಯ ಸದಸ್ಯರನ್ನು ಹೊಂದಿದೆ
ರಾಷ್ಟ್ರ ಸೇವಿಕಾ ಸಮಿತಿ ಸದ್ಯ 5215 ಶಾಖೆಗಳನ್ನು ಹೊಂದಿದ್ದು, ಅದರಲ್ಲಿ 875 ಶಾಖೆಗಳು ಪ್ರತೀದಿನ ಕಾರ್ಯನಿರ್ವಹಿಸುತ್ತದೆ. ವಿದೇಶದ ಹತ್ತು ರಾಷ್ಟ್ರಗಳಲ್ಲಿ ಶಾಖೆಯನ್ನು ಹೊಂದಿರುವ ಈ ಸಂಘಟನೆ ಸುಮಾರು ಹತ್ತು ಲಕ್ಷ ಸಕ್ರಿಯ ಸದಸ್ಯರನ್ನು ಹೊಂದಿದೆ. ಮಾತೃತ್ವ, ಕರ್ತೃತ್ವ ಮತ್ತು ನೇತೃತ್ವ ಹೀಗೆ ಮೂರು ವಿಚಾರದ ಬಗ್ಗೆ ಶಾಖೆಯಲ್ಲಿ ತರಬೇತಿ ನಡೆಯುತ್ತದೆ. (ಚಿತ್ರ ಕೃಪೆ: ಸಂವಾದ)