ಕೇರಳದಲ್ಲಿ ಕಾರ್ಯಕರ್ತರ ಹತ್ಯೆಯಾಗುತ್ತಿದ್ದರೂ ಆರೆಸ್ಸೆಸ್ ಮಾನವೀಯತೆ?
ದೇವರನಾಡಿನ ಮೇಲೆ ವರುಣ ದೇವರ ಸಿಟ್ಟು ಯಾವಮಟ್ಟಿಗೆ ಇದೆಯೆಂದರೆ ಸುಮಾರು ಐದು ದಶಕಗಳಲ್ಲಿ ಕಂಡುಕೇಳರಿಯದ ಮಳೆಯ ಆರ್ಭಟಕ್ಕೆ ಕೇರಳ ಅಕ್ಷರಶಃ ತತ್ತರಿಸಿ ಹೋಗಿದೆ. ದೇವಸ್ಥಾನವೇ ಆಗಲಿ, ಮಸೀದಿಯೇ ಆಗಲಿ, ಚರ್ಚ್ ಆಗಲಿ, ಯಾವುದನ್ನೂ ಬಿಡದೆ ಮಳೆ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುತ್ತಾ ಸಾಗುತ್ತಿದೆ.
ಸ್ವಾತಂತ್ರ್ಯೋತ್ಸವದ ದಿನದಂದೇ 29 ಜನ ಸಾವನ್ನಪ್ಪಿದ್ದಾರೆ, ಇದರಿಂದ ಕೇರಳದ ಮಹಾಮಳೆಗೆ ಬಲಿಯಾದವರ ಸಂಖ್ಯೆ 72ಕ್ಕೇರಿದೆ. ಕೇರಳದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 35 ಅಣೆಕಟ್ಟನ್ನು ತೆರೆಯಲಾಗಿದೆ. ರಾಜ್ಯದ ಹದಿನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೇಂದ್ರ ಸರಕಾರ ನಿರಂತರವಾಗಿ ಅಲ್ಲಿನ ಸಿಎಂ ಪಿಣರಾಯಿ ವಿಜಯನ್ ಸಂಪರ್ಕದಲ್ಲಿದೆ.
ರಾಜ್ಯ ಸರಕಾರ ಮತ್ತು ಸೇನೆ ಸಮರೋಪಾದಿಯಲ್ಲಿ ಪರಿಹಾರ ಕೆಲಸದಲ್ಲಿ ತೊಡಗಿಸಿಕೊಂಡಿದೆ, ಕರ್ನಾಟಕವೂ ಸೇರಿದಂತೆ ದೇಶದ ಇತರ ರಾಜ್ಯಗಳಿಂದ ಕೇರಳಕ್ಕೆ ಎಲ್ಲಾ ರೀತಿಯ ನೆರವು ಹರಿದುಬರುತ್ತಿದೆ. ಇವೆಲ್ಲದರ ಜೊತೆಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘ ನೆರೆಪೀಡಿತ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗುತ್ತಿದೆ.
ಸಂಘದ ಕಾರ್ಯಕರ್ತರು ಮಳೆಯಿಂದ ತೊಂದರೆಗೊಳಗಾದ ಹದಿಮೂರು ಜಿಲ್ಲೆಗಳಲ್ಲಿ ನೆರೆ ಸಂತ್ರಸ್ತರಿಗೆ ಸಹಾಯವಾಗುತ್ತಿರುವ ಚಿತ್ರಗಳು RSS ವಾಟ್ಸಾಪ್ ನಂಬರ್ ನಿಂದ ಬಿಡುಗಡೆಯಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಸಂತ್ರಸ್ತರಿಗೆ ನೆರವಾಗುತ್ತಿರುವ ದೃಶ್ಯ, 2017ರಲ್ಲಿ ಗುಜರಾತ್ ನೆರೆ ಪರಿಹಾರದ ಸಂದರ್ಭದ್ದು ಎಂದು ಸಾಮಾಜಿಕ ತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದವು.
ಕೇರಳದಲ್ಲಿ ಪಿಣರಾಯಿ ವಿಜಯನ್ ಸರಕಾರ ಅಧಿಕಾರಕ್ಕೆ ಬಂದ ನಂತರ ಸಂಘದ ಕಾರ್ಯಕರ್ತರ ಹತ್ಯೆ ಅವ್ಯಾಹತವಾಗಿ ಮುಂದುವರಿದಿದೆ. ಆರ್ ಎಸ್ ಎಸ್ ಮತ್ತು ಕಮ್ಯೂನಿಸ್ಟರ ನಡುವಿನ ರಾಜಕೀಯ ಮತ್ತು ವೈಯಕ್ತಿಕ ಸಂಬಂಧ ತೀರಾ ಹದೆಗೆಟ್ಟಿದೆ. ಈ ಸಮಯದಲ್ಲಿ RSS ನಡೆಸುತ್ತಿರುವ ಈ ಕೆಲಸಕ್ಕೆ ವಿಶೇಷ ಒತ್ತು ಬಂದಿದೆ.

ನೆರೆ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ RSS
ಕೇರಳದ ಒಟ್ಟು ಏಳು ಜಿಲ್ಲೆಗಳಲ್ಲಿ (ತಿರುವನಂತಪುರಂ, ಕೋಳಿಕ್ಕೋಡ್ , ಕಾಸರಗೋಡು, ಪಾಲಕ್ಕಾಡ್, ಕಣ್ಣೂರು, ತ್ರಿಶೂರು ಮತ್ತು ಪತನಂತಿಟ್ಟ) ಸಂಘದ ಹಿಡಿತ ಹೆಚ್ಚಾಗಿದೆ. ಹಾಗಾಗಿ, ಈ ಜಿಲ್ಲೆಗಳಲ್ಲಿ ಇತರ ಪ್ರದೇಶಕ್ಕಿಂತ ಹೆಚ್ಚು RSS ಕಾರ್ಯಕರ್ತರು ನೆರೆ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಘಟನೆಯ ಕಾರ್ಯಕರ್ತರ ಪರಿಹಾರ ಕೆಲಸಕ್ಕೆ ಸಾಮಾಜಿಕ ತಾಣದಲ್ಲಿ ಪರ,ವಿರೋಧ ಚರ್ಚೆಗಳು ನಡೆಯುತ್ತಿವೆ.

ದ್ವೇಷ ಕಾರುವ ಸಂದೇಶಗಳೂ ಸಾಮಾಜಿಕ ತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ
ಸಂಘದ ಕಾರ್ಯಕರ್ತರು ನಡೆಸುತ್ತಿರುವ ಪರಿಹಾರದ ಫೋಟೋಗಳನ್ನು ಹಾಕಿ, ದ್ವೇಷ ಕಾರುವ ಸಂದೇಶಗಳೂ ಸಾಮಾಜಿಕ ತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಉದಾಹರಣೆಗೆ, ಕಣ್ಣೂರಿನಲ್ಲಿ ಹಸುವನ್ನು ಕಡಿದು, ಮಾಂಸವನ್ನು ಸಾರ್ವಜನಿಕವಾಗಿ ಹಂಚಿತಿಂದರು. ಈಗ ಈ ಜಿಲ್ಲೆ ಸಂಪೂರ್ಣವಾಗಿ ಜಲಾವೃತವಾಗಿದೆ. ಶಬರಿಮಲೆಗೆ ಹೆಂಗಸರ ಪ್ರವೇಶದ ವಿಚಾರದಲ್ಲಿ ಕೇರಳಕ್ಕೆ ಈ ಪರಿಸ್ಥಿತಿ ಬಂದೆದೆಯಾ ಎನ್ನುವ ಸಂದೇಶಗಳು ಹರಿದಾಡುತ್ತಿವೆ.

ರೋಗಗಳು ಹರಡದಂತೆ ಡಿಡಿಟಿ ಸಿಂಪಡಿಸುವುದು
ಸಾರ್ವಜನಿಕರಿಂದ ಹಿಡಿದು ಸೇನೆಯ ಸಿಬ್ಬಂದಿಗಳಿಗೂ ಆಹಾರ ನೀಡುತ್ತಿರುವ ಫೋಟೋಗಳು ಆರ್ ಎಸ್ ಎಸ್ ವಾಟ್ಸಾಪ್ ನಿಂದ ಬಿಡುಗಡೆಯಾಗಿವೆ. ರೋಗಗಳು ಹರಡದಂತೆ ಡಿಡಿಟಿ ಸಿಂಪಡಿಸುವುದು, ಜಲಾವೃತವಾಗಿದ್ದ ಆಸ್ಪತ್ರೆಯನ್ನು ಸ್ವಚ್ಛಗೊಳಿಸುವುದು, ಆಹಾರ ಪೊಟ್ಟಣ ಸಿದ್ದಪಡಿಸುತ್ತಿರುವ ಫೋಟೋಗಳು ಹರಿದಾಡುತ್ತಿವೆ.

2012ರಲ್ಲಿ ಕೇರಳದ ಪ್ರವಾಹದ ವೇಳೆಯ ಫೋಟೊಗಳನ್ನು ಈಗ ಹರಿಯಬಿಡಲಾಗುತ್ತಿದೆ
2012ರಲ್ಲಿ ಕೇರಳದ ಪ್ರವಾಹದ ವೇಳೆಯ ಫೋಟೊಗಳನ್ನು ಈಗ ಹರಿಯಬಿಡಲಾಗುತ್ತಿದೆ ಎಂದು ಸುದ್ದಿಯಾಗಿತ್ತು. ಕೋಳಿಕ್ಕೋಡ್ ಮತ್ತು ಕಣ್ಣೂರಿನ ಮಳೆಯ ಅಬ್ಬರದಲ್ಲಿ ಏಳು ಮಂದಿ ಮೃತ ಪಟ್ಟಿದ್ದರು. ಇದರ ಜೊತೆಗೆ, 2017ರಲ್ಲಿ ಗುಜರಾತ್ ನೆರೆ ಬಂದಂತಹ ಸಂದರ್ಭದಲ್ಲಿನ ಇಮೇಜುಗಳನ್ನು ಕ್ರಾಪ್ ಮಾಡಿ, ಬಳಸಿಕೊಳ್ಲಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಬಿಜೆಪಿ ಮುಖಂಡ
ಚಿಕ್ಕಮಗಳೂರು ಕ್ಷೇತ್ರದ ಶಾಸಕ ಮತ್ತು ಬಿಜೆಪಿ ಮುಖಂಡ ಸಿ ಟಿ ರವಿ ಆಗಸ್ಟ್ ಹದಿಮೂರರಂದು ಟ್ವೀಟ್ ಮಾಡಿ, 'ರಕ್ತದಾಹಿ ಕಮ್ಯೂನಿಸ್ಟರು ಹಲವಾರು ಹಿಂದೂ ಕಾರ್ಯಕರ್ತರನ್ನು ಕೊಂದರು. ಆದರೆ, ದೇವರ ನಾಡು ಮಳೆಯಿಂದ ತೀವ್ರ ತೊಂದರೆಗೊಳಗಾದಾಗ, RSS ಕಾರ್ಯಕರ್ತರು ಪರಿಹಾರಕ್ಕೆ ಕೈಜೋಡಿಸಿದರು. ಮಾನವೀಯತೆಯ ಈ ಕೆಲಸವನ್ನು ಪೇಯ್ಡ್ ಮಿಡಿಯಾಗಳು ಪ್ರಸಾರ ಮಾಡುತ್ತಿಲ್ಲ' ಎಂದು ಸಿ ಟಿ ರವಿ ಟ್ವೀಟ್ ಮಾಡಿದ್ದರು. ಆದರೆ, ರವಿ ಟ್ವೀಟಿಗೆ ಬಳಸಿದ ಇಮೇಜುಗಳು ಫೇಕ್ ಎಂದು ತಿಳಿದುಬಂದಿದೆ.












Click it and Unblock the Notifications