Delhi Election 2025: ದೆಹಲಿ ಗೆಲುವಿಗೆ ಮಹಾರಾಷ್ಟ್ರ ಪ್ಲಾನ್ ಮಾಡಿದ ಬಿಜೆಪಿ, ಎಎಪಿ ಕಂಗಾಲು!
ದೆಹಲಿ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕೆ ಬಿಜೆಪಿ ಭರ್ಜರಿ ಮಾಸ್ಟರ್ ಪ್ಲಾನ್ವೊಂದನ್ನು ಮಾಡಿದೆ. ದೆಹಲಿ ಗದ್ದುಗೆ ತಲುಪಲು ಬಿಜೆಪಿ ಮಹಾರಾಷ್ಟ್ರದ ಪ್ಲಾನ್ ಅನ್ನು ಇಲ್ಲಿಯೂ ಫಾಲೋ ಮಾಡಲು ಮುಂದಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ಮಾಡಿದ್ದ ಪ್ಲಾನ್ ವರ್ಕ್ಔಟ್ ಆಗಿತ್ತು. ಇದೀಗ ದೆಹಲಿಯಲ್ಲೂ ಇದೇ ರೀತಿಯ ಪ್ಲಾನ್ ಮಾಡುವುದಕ್ಕೆ ಬಿಜೆಪಿ ಮುಂದಾಗಿದೆ. ಈ ಪ್ಲಾನ್ಗಳನ್ನು ನೋಡಿಯೇ ಎಎಪಿ ಕಂಗಾಲಾಗಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಕಳೆದ ಎರಡು ಅವಧಿಯಿಂದ ಅಧಿಕಾರದಲ್ಲಿ ಇದೆ. ಆದರೆ, ಈ ಬಾರಿ ಅಧಿಕಾರಕ್ಕೆ ಬರುವುದು ಎಎಪಿಗೆ ಸವಾಲಾಗಿದೆ. ಇದರ ನಡುವೆಯೇ ಎಎಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಶಾಕ್ ಕೊಡುವುದಕ್ಕೆ ಆರ್ಎಸ್ಎಸ್ ಹಾಗೂ ಬಿಜೆಪಿ ನಿರ್ಧರಿಸಿದೆ.
ಕಳೆದ ವರ್ಷ ನಡೆದ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಭರ್ಜರಿ ಗೆಲುವು ದಾಖಲಿಸಿತ್ತು. ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಬರುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಇದೀಗ ಇದೇ ಸೂತ್ರವನ್ನು ದೆಹಲಿಯಲ್ಲೂ ಅಳವಡಿಸಿಕೊಳ್ಳಲು ಬಿಜೆಪಿ ಮುಂದಾಗಿದೆ. ದೆಹಲಿಯಲ್ಲಿ ಈ ಬಾರಿ ಎಎಪಿಗೆ ತೀವ್ರ ಸಂಕಷ್ಟ ಹಾಗೂ ಆಡಳಿತ ವಿರೋಧ ಅಲೆ ಇದೆ. ಇದನ್ನೇ ಲಾಭವಾಗಿಸಿಕೊಳ್ಳಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿಕೊಳ್ಳುತ್ತಿದೆ.

ಮಹಾರಾಷ್ಟ್ರದಲ್ಲಿ ಹಲವು ಗೊಂದಲ ಹಾಗೂ ಆಡಳಿತ ವಿರೋಧಿ ಅಲೆಗಳ ನಡುವೆಯೂ ಬಿಜೆಪಿಯ ಮಹಾಯುತಿ ಅಧಿಕಾರಕ್ಕೆ ಬರುವುದರಲ್ಲಿ ಯಶಸ್ವಿಯಾಗಿತ್ತು. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಆರ್ಎಸ್ಎಸ್ ಪಾತ್ರ ಪ್ರಮುಖವಾಗಿತ್ತು. ಸಣ್ಣ ಸಣ್ಣ ಸಭೆಗಳನ್ನು ನಡೆಸುವ ಮೂಲಕ ಬಿಜೆಪಿ ಪರ ಮತದಾರರಲ್ಲಿ ಒಲವು ಮೂಡುವಂತೆ ಮಾಡುವಲ್ಲಿ ಆರ್ಎಸ್ಎಸ್ ಯಶಸ್ವಿಯಾಗಿತ್ತು. ಇದೀಗ ಇದೇ ಸೂತ್ರವನ್ನು ದೆಹಲಿಯಲ್ಲೂ ಅನುಸರಿಸಲಾಗುತ್ತಿದೆ. ಆರ್ಎಸ್ಎಸ್ ರಾಜಕೀಯ ವಿಷಯಗಳಿಂದ ದೂರವಿದೆ. ಆದರೆ, ಬಿಜೆಪಿಗೆ ಬೆಂಗಾವಲಾಗಿ ಹಾಗೂ ಬಿಜೆಪಿ ಗೆಲ್ಲುವಲ್ಲಿ ಆರ್ಎಸ್ಎಸ್ ಪಾತ್ರ ಪ್ರಮುಖವಾಗಿದೆ.
ದೆಹಲಿ ಚುನಾವಣೆಯ ವಿಷಯಗಳು: ಈ ಬಾರಿ ದೆಹಲಿ ಚುನಾವಣೆಯಲ್ಲಿ ಹಲವು ವಿಷಯಗಳು ಚರ್ಚೆಯಾಗುತ್ತಿವೆ. ಅವುಗಳಲ್ಲಿ ದೆಹಲಿಯ ಮದ್ಯ ನೀತಿ ಹಗರಣ, ದೆಹಲಿ ಸಿ.ಎಂ ಸರ್ಕಾರಿ ನಿವಾಸ ಶೀಶ್ ಮಹಲ್, ನೀರು ಪೂರೈಕೆ ಹಾಗೂ ಸ್ವಚ್ಛತೆ ಸಮಸ್ಯೆಗಳು, ಕೊಳೆಗೇರಿ ಪ್ರದೇಶಗಳ ಅವ್ಯವಸ್ಥೆ, ಅಕ್ರಮ ಬಾಂಗ್ಲಾದೇಶಿ ವಲಸಿಗರು ದೆಹಲಿಯಲ್ಲಿ ವಾಸವಿರುವುದು ಪ್ರಮುಖ ವಿಷಯಗಳಾಗಿವೆ.
ದೆಹಲಿ ಬಿಜೆಪಿ ಘಟಕವು ಈಗಾಗಲೇ ಆರ್ಎಸ್ಎಸ್ನೊಂದಿಗೆ ಸಮನ್ವಯ ಕಾಪಾಡಿಕೊಂಡಿದೆ ಅಂತ ಹೇಳಲಾಗಿದೆ. ದೆಹಲಿಯ ಬಿಜೆಪಿ ಘಟಕ ಮತ್ತು ಆರ್ಎಸ್ಎಸ್ ನಡುವೆ ಈ ಸಂಬಂಧ ಹಲವು ಸುತ್ತಿನ ಸಭೆಗಳು ನಡೆದಿವೆ. ದೆಹಲಿಯಲ್ಲಿ ಬೂತ್ ಮಟ್ಟದಿಂದ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಇನ್ನು ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದು, 13,000 ಕ್ಕೂ ಹೆಚ್ಚು ಬೂತ್ಗಳಿವೆ. ಹೀಗಾಗಿ ಸಣ್ಣ ಸಣ್ಣ ಸಭೆಗಳನ್ನು ನಡೆಸಿ ಬಿಜೆಪಿಪರ ಮತದಾರರನ್ನು ಸೆಳೆಯುವ ತಂತ್ರವನ್ನು ಮಾಡಲಾಗಿದೆ. ದೆಹಲಿ ಚುನಾವಣೆಗೂ ಮುಂಚೆ 50,000 ಕ್ಕೂ ಹೆಚ್ಚು ಸಣ್ಣ ಸಭೆಗಳನ್ನು ಆರ್ಎಸ್ಎಸ್ ಹಾಗೂ ಬಿಜೆಪಿ ಜಂಟಿಯಾಗಿ ನಡೆಸಲಿವೆ ಎಂದು ಹೇಳಲಾಗಿದೆ.

ಇನ್ನು ಹರಿಯಾಣದಲ್ಲೂ ಬಿಜೆಪಿ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎನ್ನುವ ವಾತಾವರಣವಿತ್ತು. ಅಲ್ಲಿ 20 ಸಾವಿರಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿತ್ತು. ಅಂತಿಮವಾಗಿ ಹರಿಯಾಣದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮಹರಾಷ್ಟ್ರ ಹಾಗೂ ಹರಿಯಾಣದ ನಂತರ ಇದೀಗ ದೆಹಲಿಯಲ್ಲೂ ಇದೇ ಪ್ಲಾನ್ ಅನುಸರಿಸಲಾಗುತ್ತಿದೆ.












Click it and Unblock the Notifications