ಒಡಿಶಾ ಸೋಲಿಸಿ ರಸಗುಲ್ಲಾ ಸವಿದ ಪಶ್ಚಿಮ ಬಂಗಾಳ
ನವದೆಹಲಿ, ನವೆಂಬರ್ 14: ಒಂದು ಸ್ವೀಟ್... ಎರಡು ರಾಜ್ಯ... ಬರೋಬ್ಬರಿ ಎರಡು ವರ್ಷಗಳ ಸಮರ... ಕೊನೆಗೆ ಬಾಯಲ್ಲಿ ನೀರೂರಿಸುವ ರಸಗುಲ್ಲಾ ಪಶ್ಚಿಮ ಬಂಗಾಳದ ಪಾಲು...
'ಹಿಂದಿ' ಖಿಚಡಿಗೆ ಉಪ್ಪಿಟ್ಟು, ಚಿತ್ರಾನ್ನ ಭಾರೀ ಪೈಪೋಟಿ!
ಇದು ಪಶ್ಚಿಮ ಬಂಗಾಳ ಮತ್ತು ಒಡಿಶಾ ನಡುವಿನ ರಸಗುಲ್ಲಾ ಯುದ್ಧದ ಕಥೆ. ಎರಡೂ ರಾಜ್ಯಗಳು ರಸಗುಲ್ಲಾ ಕಂಡು ಹಿಡಿದವರು ನಾವು ಎಂದು ಸಮರಕ್ಕೆ ಹೊರಟಿದ್ದರು. ಕೊನೆಗೆ ಪಶ್ಚಿಮ ಬಂಗಾಳ ವಿಜಯಶಾಲಿಯಾಗಿದ್ದು ಜಿಐ (ಜಿಯೋಗ್ರಾಫಿಕಲ್ ಇಂಡಿಕೇಷನ್ ಆಫ್ ಗೂಡ್ಸ್ ರೆಜಿಸ್ಟ್ರೇಷನ್) ಮಾನ್ಯತೆ ಪಡೆದುಕೊಂಡಿದೆ. ಈ ಮೂಲಕ ಅಧಿಕೃತವಾಗಿ ರಸಗುಲ್ಲಾ ಬೆಂಗಾಲಿಗಳ ಅನ್ವೇಷಣೆ ಎಂದು ಸಾಬೀತಾಗಿದೆ.
ಎರಡು ವರ್ಷಗಳ ಯುದ್ಧ
ಬಾಯಲ್ಲಿ ನೀರೂರಿಸುವ ರಸಗುಲ್ಲಾ ಯುದ್ಧ ಆರಂಭವಾಗಿದ್ದು 2015ರಲ್ಲಿ; ಒಡಿಶಾ ಸರಕಾರ 'ರಸಗುಲ್ಲಾ ದಿವಸ್' ಆಚರಣೆ ಮೂಲಕ ಕಾಲು ಕೆರೆದು ರಸಗುಲ್ಲಾ ಯುದ್ಧಕ್ಕೆ ಕಾಲಿಟ್ಟಿತ್ತು.
ದಂತಕಥೆಗಳ ಪ್ರಕಾರ ಲಕ್ಷ್ಮೀ ದೇವರನ್ನು ಆಕೆಯ ಗಂಡ ಜಗನ್ನಾಥ ರಥ ಯಾತ್ರೆ ಸಮಯದಲ್ಲಿ ಮನೆಯಲ್ಲಿ ಒಬ್ಬಳನ್ನೇ ಬಿಟ್ಟು ಹೋಗಿದ್ದ. ನಂತರ ಜಗನ್ನಾಥ ಮರಳಿ ಬಂದಾಗ ಲಕ್ಷ್ಮೀ ಆತನನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಳು. ಆಗ ಜಗನ್ನಾಥ ಆಕೆಗೆ ತಟ್ಟೆ ತುಂಬಾ ರಸಗುಲ್ಲಾ ನೀಡಿದ. ಇದು ರಸಗುಲ್ಲಾ ಹುಟ್ಟಿದ ಕಥೆ ಎಂದು ಒಡಿಶಾ ಹೇಳಿತ್ತು.
ಆದರೆ ಇದಕ್ಕೆ ತಕರಾರು ತೆಗೆದಿದ್ದ ಪಶ್ಚಿಮ ಬಂಗಾಳ, ಒಡೆದ ಹಾಲಿನಿಂದ ರಸಗುಲ್ಲಾ ತಯಾರಿಸುತ್ತಾರೆ. ಒಡೆದ ಹಾಲನ್ನು ಅಶುದ್ಧ ಎಂದು ಪರಿಗಣಿಸುವುದರಿಂದ ದೇವರಿಗೆ ಅದನ್ನು ಅರ್ಪಿಸುವುದಿಲ್ಲ. ಹೀಗಾಗಿ ಜಗನ್ನಾಥ ಲಕ್ಷ್ಮೀಗೆ ರಸಗುಲ್ಲಾ ನೀಡಲು ಸಾಧ್ಯವಿಲ್ಲ ಎಂದು ವಾದಿಸಿತ್ತು.
ಹೀಗೆ ವಾದ ವಿವಾದಗಳು ನಡೆದು ಕೊನೆಗೆ ರಸಗುಲ್ಲಾ ಯುದ್ಧದಲ್ಲಿ ಪಶ್ಚಿಮ ಬಂಗಾಳ ಜಯಶಾಲಿಯಾಗಿದೆ.