ರೋಹಿಂಗ್ಯಾ ಮುಸ್ಲಿಮರಿಂದ ದೇಶದ ಭದ್ರತೆಗೆ ಕುತ್ತು : ಸುಪ್ರೀಂಗೆ ಕೇಂದ್ರ ಅಫಿಡವಿಟ್
ನವದೆಹಲಿ, ಸೆಪ್ಟೆಂಬರ್ 18: ಕೇಂದ್ರ ಸರಕಾರ ಸುಪ್ರಿಂ ಕೋರ್ಟ್ ಗೆ ರೋಹಿಂಗ್ಯಾ ಮುಸ್ಲಿಮರ ಸಮಸ್ಯೆಗೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಿದೆ.
16 ಪುಟಗಳ ಅಫಿಡವಿಟ್ ನಲ್ಲಿ ಭಾರತದೊಳಕ್ಕೆ ರೋಹಿಂಗ್ಯಾ ಮುಸ್ಲಿಮರ ನುಸುಳುವಿಕೆ ಮತ್ತು ದೇಶದಲ್ಲಿ ರೋಹಿಂಗ್ಯಾ ಮುಸ್ಲಿಮರು ನೆಲೆಸುವುದರಿಂದ ದೇಶದ ಭದ್ರತೆಯಲ್ಲಿ ಆತಂಕ ಎದುರಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.
ಕೆಲವು ರೋಹಿಂಗ್ಯಾಗಳು ದೇಶ ವಿರೋಧಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಹುಂಡಿ, ಹವಾಲಗಳ ಮೂಲಕ ಧನ ಸಂಗ್ರಹದಲ್ಲಿ ತೊಡಗಿದ್ದಾರೆ. ಜತೆಗೆ ನಕಲಿ ಭಾರತದ ಗುರುತಿನ ಚೀಟಿಗಳನ್ನು ಪಡೆಯುತ್ತಿದ್ದಾರೆ. ಮಾನವ ಕಳ್ಳ ಸಾಗಣೆಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಕೇಂದ್ರ ಸರಕಾರ ತನ್ನ ಅಫಿಡವಿಟ್ ನಲ್ಲಿ ಹೇಳಿದೆ.
"ಭದ್ರತಾ ಸಂಸ್ಥೆಗಳಿಗೆ ಸಿಕ್ಕಿರುವ ಮಾಹಿತಿಗಳ ಪ್ರಕಾರ ಕೆಲವು ರೊಹಿಂಗ್ಯಾ ಜನರು ಪಾಕಿಸ್ತಾನದ ಸಂಸ್ಥೆಗಳ ಜತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಈಗಾಗಲೇ ಭಾರತದೊಳಕ್ಕೆ ನುಸುಳಿರುವ ರೋಹಿಂಗ್ಯಾಗಳ ಸಂಖ್ಯೆ 40,000 ದಾಟಿದೆ. ಇದೇ ರೀತಿ ರೋಹಿಂಗ್ಯಾಗಳು ಮಯನ್ಮಾರ್ ಗಡಿ ಮೂಲಕ ಭಾರತದೊಳಕ್ಕೆ ನುಸುಳುತ್ತಿದ್ದರೆ ದೇಶದ ಭದ್ರತೆಗೆ ಭಾರೀ ಕುತ್ತು ಉಂಟಾಗಲಿದೆ," ಎಂದು ಕೇಂದ್ರ ಸರಕಾರ ಹೇಳಿದೆ.
ಇನ್ನು ರೋಹಿಂಗ್ಯಾ ಸಮಸ್ಯೆಗೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರಿಂ ಕೋರ್ಟ್ ಅಕ್ಟೋಬರ್ 3ಕ್ಕೆ ಮುಂದೂಡಿದೆ.