ಪೆಪ್ಪರ್ ಸ್ಪ್ರೇ ಬಳಸಿ ಕಳ್ಳತನ, ಇಲ್ಲಿ ಇದು ಮಾಮೂಲಿ
ಗಾಜಿಯಾಬಾದ್, ನವೆಂಬರ್ 04: ಮಹಿಳೆಯರಿಗೆ ಬೀದಿ ಕಾಮಣ್ಣರಿಂದ ರಕ್ಷಣೆ ನೀಡಲೆಂದು ಮಾರುಕಟ್ಟೆಗೆ ಬಂದ ಪೆಪ್ಪರ್ ಸ್ಪ್ರೇ ವಿರುದ್ಧ ಉದ್ದೇಶಕ್ಕೆ ಬಳಕೆಯಾಗುತ್ತಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ನ ಕಳ್ಳರ ಗ್ಯಾಂಗ್ ಒಂದು ಪೆಪ್ಪರ್ ಸ್ಪ್ರೇ ಬಳಸಿ ಕಳ್ಳತನ ಸಲೀಸುಗೊಳಿಸಿಕೊಂಡಿದೆ. ಬೈಕ್ ನಲ್ಲಿ ಸಂಚರಿಸುವ ಈ ಗ್ಯಾಂಗ್ ನ ಸದಸ್ಯರು, ಬ್ಯಾಂಕ್ ನಿಂದ ಹಣ ಪಡೆದು ಹೊರಬರುವ, ಅಂಗಡಿ ವ್ಯಾಪಾರ ಮುಗಿಸಿ ಹೋಗುವ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡು ಪೆಪ್ಪರ್ ಸ್ಪ್ರೇ ದಾಳಿ ನಡೆಸುತ್ತಾರೆ.

ದಾಳಿಗೊಳಗಾದವರ ಕಣ್ಣುಗಳಲ್ಲಿ ಉರಿ ಪ್ರಾರಂಭವಾಗಿ, ಕಳ್ಳರ ವಿರುದ್ಧ ಪ್ರತಿಭಟಿಸಲು ಸಾಧ್ಯವಾಗದೆ ಕೈಚೆಲ್ಲಿದಾಗ, ಹಣ ದೋಚಿ ಪರಾರಿಯಾಗುತ್ತಾರೆ. ಪೆಪ್ಪರ್ ಸ್ಪ್ರೇ ಬಳಸುವುದರಿಂದ ಕಳ್ಳರ ಗುರುತಾಗಲಿ, ಅವರು ಬಳಸಿದ ವಾಹನ ಸಂಖ್ಯೆಯಾಗಲಿ ನೋಡಲು ದಾಳಿಗೊಳಗಾದವರಿಗೆ ಸಾಧ್ಯವಾಗುವುದಿಲ್ಲ.
ನವೆಂಬರ್ 4 ಶನಿವಾರ ಇಂತಹುದೇ ಘಟನೆ ಗಾಜಿಯಾಬಾದ್ ನ ರಾಜ್ ನಗರದಲ್ಲಿ ನಡೆದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬ್ಯುಸಿನೆಸ್ ಮ್ಯಾನೆಜ್ ಮೆಂಟ್ ಸಂಸ್ಥೆಯೊಂದರ ಚೇರ್ ಮೆನ್ ಅವರ ಮೇಲೆ ಪೆಪ್ಪರ್ ಸ್ಪ್ರೇ ಪ್ರಯೋಗಿಸಿ ಅವರಿಂದ 3 ಲಕ್ಷ ರೂಪಾಯಿ ದೋಚಿದ್ದಾರೆ. ಗಾಜಿಯಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಂತಹಾ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಉತ್ತಮ ಕಾರ್ಯಕ್ಕೆ ತಯಾರಿಸಲಾದ ಪೆಪ್ಪರ್ ಸ್ಪ್ರೆ ದುಷ್ಟ ಜನರ ಕೈಸೇರಿ ಸಮಸ್ಯೆ ಉಂಟುಮಾಡುತ್ತಿರುವುದು ವಿಪರ್ಯಾಸವೇ ಸರಿ.












Click it and Unblock the Notifications