'ಇಂಡಿಯಾ' ಭಾರತವಾಗುವಲ್ಲಿ ಯಾವ ಹಿತಾಸಕ್ತಿಯಿದೆ?
ನವದೆಹಲಿ, ನ.10 : ರಾಷ್ಟ್ರಕ್ಕೆ ಎರಡೆರಡು ಹೆಸರಿದ್ದು 'ಇಂಡಿಯಾ' ಬದಲಾಗಿ 'ಭಾರತ'ವನ್ನೇ ಎಲ್ಲ ಕಡೆ ಬಳಸಬೇಕು. ಹಾಗೆ ನಾಮಕರಣ ಮಾಡಿ ಆದೇಶ ಹೊರಡಿಸಬೇಕು ಎಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ಸೋಮವಾರ ವಜಾ ಆಗಿದೆ.
ಸೋಮವಾರ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ನೇತೃತ್ವದ ನ್ಯಾಯಪೀಠ, 'ಇಂಡಿಯಾ' ಭಾರತವಾಗಿ ಬದಲಾಗುವಲ್ಲಿ ಯಾವ ಹಿತಾಸಕ್ತಿ ಅಡಗಿದೆ? ಎಂದು ಪ್ರಶ್ನಿಸಿದೆ.[ಕಪ್ಪು ಹಣದ ಮಾಹಿತಿ ಯಾರು ಬೇಕಾದ್ರೂ ಕೊಡಬಹುದು]
ಇದು ಕೇವಲ ತೋರಿಕೆಗೆ ಸಲ್ಲಿಸಿದ ಅರ್ಜಿಯಂತೆ ಕಾಣುತ್ತಿದೆ. ಯಾವುದಾರೊಂದು ಸಂಘ ಸಂಸ್ಥೆಯಿಂದ ಈ ಬಗ್ಗೆ ಸೂಕ್ತ ಪ್ರಾತಿನಿಧ್ಯ ದೊರಕಿಸಿಕೊಂಡು ಬನ್ನಿ ಎಂದು ಅರ್ಜಿ ಸಲ್ಲಿಸಿರುವವರಿಗೆ ತಿಳಿಸಿದೆ.
ಈ ಅರ್ಜಿ ಯಾಕೆ ವಿಚಾರಣೆ ನಡೆಸಬೇಕು ಎಂಬುದೇ ತಿಳಿಯುತ್ತಿಲ್ಲ. ಇಲ್ಲಿ ಯಾವ ಸಾರ್ವಜನಿಕ ಹಿತ ಅಡಗಿದೆ ಎಂದು ವಿವರಿಸಲು ನಿಮ್ಮ ಬಳಿ ಯಾವುದೇ ಆಧಾರಗಳಿಲ್ಲ. ಅಷ್ಟಕ್ಕೂ ಸುಮ್ಮನೆ ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥವಾಗುವುದು ಬೇಡ. ಜನರಿಂದ ಈ ಬಗ್ಗೆ ನಿಜವಾದ ಕಳಕಳಿ ಮೂಡಿಬಂದರೆ ವಿಚಾರಣೆ ಮಾಡುವುದು ಒಳಿತು ಎಂದು ಹೇಳಿದೆ.[ಸಲಿಂಗಕಾಮː ಅಮೀರ್ ಖಾನ್ ಗೆ ಲೀಗಲ್ ನೋಟಿಸ್]
ಇಂಥ ಅರ್ಜಿ ಸಲ್ಲಿಕೆಗೆ ಮುನ್ನ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಒಮ್ಮೆ ಚರ್ಚಿಸುವುದು ಒಳಿತು. ಇಲ್ಲವಾದಲ್ಲಿ ಸುಮ್ಮನೆ ಗೊಂದಲಕ್ಕೆ ಎಡೆಯಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.