ಬಿಹಾರ ಡಿಸಿಎಂ ಸುಶೀಲ್ ಮೋದಿ 'ಪಿತೃ ಪಕ್ಷ' ಹೇಳಿಕೆಗೆ ಹಿಗ್ಗಾಮುಗ್ಗಾ ತರಾಟೆ
ಗಯಾ, ಸೆಪ್ಟೆಂಬರ್ 25: "ನಾನು ಕೈ ಮುಗಿದು ಕೇಳಿಕೊಳ್ತೀನಿ, ಪಿತೃ ಪಕ್ಷದಲ್ಲಿ ಯಾವುದೇ ಅಪರಾಧ- ಕಾನೂನುಬಾಹಿರ ಕೃತ್ಯಗಳಲ್ಲಿ ಪಾಲ್ಗೊಳ್ಳಬೇಡಿ" ಹೀಗೆಂದು ಅಪರಾಧಿಗಳ ಮನವಿ ಮಾಡಲಾಗಿದೆ. ಹಾಗಿದ್ದರೆ ಯಾರವರು ಅನ್ನೋದನ್ನು ಊಹೆ ಮಾಡಲು ಸಾಧ್ಯವಾ? ಯಾರಾದರೂ ಸ್ವಾಮೀಜಿಯೇ ಇರ್ತಾರೆ ಅಂತ ನೀವಂದುಕೊಂಡರೆ, ಅದು ತಪ್ಪು.
ಹೀಗೆ 'ಕೈ ಮುಗಿದು' ಅಪರಾಧಿಗಳ ಬಳಿ ವಿನಂತಿ ಮಾಡಿಕೊಂಡಿರುವವರು ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ (ಅವರು ಬಿಜೆಪಿ ಶಾಸಕ). ಇನ್ನೂ ಮುಂದುವರಿದು, ಬೇರೆ ದಿನಗಳಲ್ಲಿ ಅದಲ್ಲದಿದ್ದರೆ ಏನಾದರೂ ಮಾಡಿಕೊಳ್ಳಿ ಎಂದು ಬೇರೆ ಸುಶೀಲ್ ಮೋದಿ ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಬಿಹಾರದಲ್ಲಿನ ವಿರೋಧ ಪಕ್ಷದ ನಾಯಕ-ರಾಷ್ಟ್ರೀಯ ಜನತಾ ದಳದ ಮುಖಂಡ ತೇಜಸ್ವಿ ಯಾದವ್ ಟ್ವಿಟ್ಟರ್ ನಲ್ಲಿ ಸುಶೀಲ್ ಮೋದಿ ಹೇಳಿಕೆಯನ್ನು ಖಂಡಿಸಿದ್ದಾರೆ. ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ನಾಚಿಕೆ ಬಿಟ್ಟು, ಮುಂದಿನ ಹದಿನೈದು ದಿನ ಯಾವ ಅಪರಾಧ ಮಾಡಬೇಡಿ ಅಪರಾಧಿಗಳನ್ನು ಕೈ ಮುಗಿದು ಬೇಡಿಕೊಂಡಿದ್ದಾರೆ. ಇದರಿಂದ ಸರಕಾರದ ವರ್ಚಸ್ಸಿಗೆ ಪೆಟ್ಟು ಬಿದ್ದಿದೆ.

ಪಿತೃಪಕ್ಷ ಆದ ಮೇಲೆ ಅಪಹರಣ, ಲೂಟಿ, ಶೂಟ್ ಮಾಡುವುದು...ಏನು ಬೇಕೋ ಅದು ಮಾಡಲು ನೀವು ಸ್ವತಂತ್ರರು ಎಂಬ ಸಂದೇಶ ರವಾನಿಸಿದಂತಾಗಿದೆ. ಸುಶೀಲ್ ಮೋದಿಗೆ ನಾಚಿಕೆ ಆಗಬೇಕು ಎಂದು ತೇಜಸ್ವಿ ಯಾದವ್ ಕಿಡಿ ಕಾರಿದ್ದಾರೆ.
ಭಾದ್ರಪದ ಮಾಸದ ಕೃಷ್ಣ ಪಕ್ಷದ ಹದಿನೈದು ದಿನವನ್ನು ಹಿಂದೂ ಪಂಚಾಂಗದ ಪ್ರಕಾರ ಪಿತೃ ಪಕ್ಷ ಎನ್ನಲಾಗುತ್ತದೆ. ಈ ಸಮಯದಲ್ಲಿ ಹಿಂದೂಗಳು ತೀರಿಕೊಂಡ ಹಿರಿಯರ ನೆನಪಿಗಾಗಿ ಅನ್ನ ಸಂತರ್ಪಣೆ ಮಾಡುತ್ತಾರೆ. ಅಕ್ಟೋಬರ್ ಎಂಟನೇ ತಾರೀಕಿನವರೆಗೆ ಪಿತೃ ಪಕ್ಷ ಇದೆ.












Click it and Unblock the Notifications