ಆರ್ ಬಿಐ ಶಿಫಾರಸು ಮಾಡಿದ ಕೆಲ ಗಂಟೆಯಲ್ಲೇ ನೋಟು ನಿಷೇಧ
ನೋಟು ನಿಷೇಧ ನಿರ್ಧಾರದ ಹಿಂದೆ ಹಲವು ಕಥೆಗಳು ಹುಟ್ಟಿಕೊಂಡಿವೆ. ಇಲ್ಲಿರುವ ಮಾಹಿತಿ ಆರ್ ಟಿಐ ಅಡಿ ಪಡೆದುಕೊಂಡಿರುವುದು. ಆರ್ ಬಿಐ ಹಾಗು ಕೇಂದ್ರ ಸರಕಾರದ ಬಗ್ಗೆ ಕುತೂಹಲಕಾರಿಯಾದ ಅಂಶಗಳಿವೆ.
ನವದೆಹಲಿ, ಡಿಸೆಂಬರ್ 24: ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ 500, 1000 ರುಪಾಯಿ ನಿಷೇಧದ ಘೋಷಣೆ ಮಾಡಿದರಲ್ಲಾ, ಆ ದಿಢೀರ್ ಘೋಷಣೆಯ ಬಗ್ಗೆ ಟಿವಿಯಲ್ಲಿ ದೇಶಕ್ಕೆ ಮಾಹಿತಿ ನೀಡಿದ ಕೆಲ ಗಂಟೆ ಮುಂಚೆಯಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ನಿರ್ಧಾರವನ್ನು ಶಿಫಾರಸು ಮಾಡಿದ್ದು ಎಂಬ ಅಂಶ ಹೊರಬಿದ್ದಿದೆ.
ಆಗ ಚಲಾವಣೆಯಲ್ಲಿ ಶೇ 86ರಷ್ಟು ನೋಟುಗಳನ್ನು ಹಿಂಪಡೆಯಬೇಕು ಎಂಬ ಚರ್ಚೆ ರಹಸ್ಯವಾಗಿ ನಡೆಯುತ್ತಿತ್ತು. ತುಂಬ ಹಿಂದಿನಿಂದ ಚರ್ಚೆ ನಡೆದಿತ್ತು. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಮಾಧ್ಯಮದವರ ಜತೆ ಮಾತನಾಡಿ, ಈ ನಿರ್ಧಾರದ ಹಿಂದಿನ ಪ್ರಕ್ರಿಯೆಗಳ ಬಗ್ಗೆ ತಿಳಿಯುವ ಅಗತ್ಯವಿಲ್ಲ. ಅದರಿಂದ ಬರುವ ಫಲಿತಾಂಶ ಹಾಗೂ ಆ ನಿರ್ಧಾರದ ಬಗ್ಗೆ ಗಮನಹರಿಸಿದರೆ ಸಾಕು ಎಂದಿದ್ದರು.[ಹೊಸ ನೋಟುಗಳ ಮುದ್ರಣಕ್ಕೆ ಆರ್ ಬಿಐ ಎಷ್ಟು ಖರ್ಚು ಮಾಡ್ತಿದೆ?]
ಆ ನಂತರ ಹಣಕ್ಕೆ ಆದ ಪಡಿಪಾಟಲು. ಮಿತಿ ನಿಗದಿಪಡಿಸಿದ ನಂತರವೂ ಆ ಮೊತ್ತವನ್ನೂ ಹೊಂದಿಸಲಾಗದೆ ಬ್ಯಾಂಕ್ ಗಳ ಒದ್ದಾಟ ಮುಂದುವರಿದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ 1934ರ ಪ್ರಕಾರ ಯಾವುದೇ ನೋಟು ನಿಷೇಧದ ನಿರ್ಧಾರವನ್ನು ಕೇಂದ್ರ ಸರಕಾರ ಏಕಾಏಕಿ ತೆಗೆದುಕೊಳ್ಳೋದಿಕ್ಕೆ ಆಗಲ್ಲ.
ನವದೆಹಲಿಯಲ್ಲಿ ಸಭೆ
ಅರ್ ಬಿಐ ಕೇಂದ್ರೀಯ ಸಮಿತಿ ಶಿಫಾರಸಿನ ಅನ್ವಯವೇ ಕ್ರಮ ತೆಗೆದುಕೊಳ್ಳಬೇಕು. ಪತ್ರಿಕೆಯೊಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಹಾಕಿದ ಅರ್ಜಿಗೆ ಉತ್ತರಿಸಿರುವ ಆರ್ ಬಿಐ, ಬ್ಯಾಂಕ್ ನ ಕೇಂದ್ರೀಯ ಸಮಿತಿ ನಿರ್ದೇಶಕರ ಸಭೆ ನವೆಂಬರ್ 8ರಂದು ನವದೆಹಲಿಯಲ್ಲಿ ನಡೆಯಿತು.
ಕೆಲವೇ ಗಂಟೆಗಳ ಅಂತರ
ಸಮಿತಿಯ ಸಭೆಯ ಅಧಿಕೃತ ಶಿಫಾರಸು ಸಲ್ಲಿಕೆ ಹಾಗೂ ಮೋದಿ ಘೋಷಣೆ ಮಧ್ಯೆ ಕೆಲವೇ ಗಂಟೆಗಳ ಅಂತರವಿತ್ತು. ಆ ನಂತರ ಸಂಪುಟ ಸಭೆಯನ್ನು ಕರೆದ ಪ್ರಧಾನಿ, ತಾವು ದೇಶದ ಜನರ ಎದುರು ಮಹತ್ವದ ಘೋಷಣೆ ಮಾಡುವ ಮುನ್ನ ಒಳಗೆ ಮೊಬೈಲ್ ಫೋನ್ ತರುವಂತಿಲ್ಲ ಎಂದು ಸೂಚಿಸಿದ್ದರು. ನವೆಂಬರ್ 8ರೊಳಗಾಗಿ ರಿಸರ್ವ್ ಬ್ಯಾಂಕ್ 2 ಸಾವಿರ ರುಪಾಯಿ ನೋಟುಗಳ 4.94 ಲಕ್ಷ ಕೋಟಿಯಷ್ಟು ಮುದ್ರಿಸಿತ್ತು.
ಸೂಕ್ತ ಕ್ರಮ ತೆಗೆದುಕೊಂಡಿಲ್ಲ
ಆದರೆ, ಆರ್ ಬಿಐನ ನಿವೃತ್ತ ಅಧಿಕಾರಿಗಳ ಪ್ರಕಾರ ಸಮಿತಿಯ ಒಪ್ಪಿಗೆ ಅನ್ನೋದು ನಿಯಮದ ಪ್ರಕಾರ ಬೇಕು, ಆ ಕಾರಣಕ್ಕಷ್ಟೇ ಪಡೆಯಲಾಗಿದೆ. ಅದೇ ರೀತಿ ಜನರ ತೊಂದರೆಗಳನ್ನು ತಪ್ಪಿಸಲು ಸರಕಾರವಾಗಲೀ ಆರ್ ಬಿಐ ಆಗಲೀ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ನಿವೃತ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹುದ್ದೆ ಖಾಲಿ ಖಾಲಿ
ಅದೇ ರೀತಿ ಆರ್ ಬಿಐನ ಕೇಂದ್ರ ಸಮಿತಿಯಲ್ಲಿ ಹುದ್ದೆಗಳೇ ಖಾಲಿ ಇವೆ. ಹದಿನಾಲ್ಕು ಸ್ವತಂತ್ರ ನಿರ್ದೇಶಕರ ಪೈಕಿ ಸಮಿತಿಯಲ್ಲಿ ಇರುವುದು ನಾಲ್ಕು ಮಂದಿ ಮಾತ್ರ. ಇನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ನೀಡಿದ ಉತ್ತರದಲ್ಲಿ ತಿಳಿಸಿರುವಂತೆ, ಅಂದಿನ ಮಹತ್ವದ ಸಭೆಯಲ್ಲಿ ಭಾಗವಹಿಸಿದ್ದವರು ಮೂವರು ಮಾತ್ರ. ಅದು ಸಭೆ ನಡೆಸಲು ಬೇಕಾದ ಕನಿಷ್ಠ ಕಡ್ಡಾಯ ಸಂಖ್ಯೆ. ಆದ್ದರಿಂದ ಅಷ್ಟು ಮಂದಿ ಪಾಲ್ಗೊಂಡಿದ್ದರು.