ಅತ್ಯಾಚಾರಿ ಬಾಬಾ ರಾಮ್ ರಹೀಂಗೆ 10 ಅಲ್ಲ, 20 ವರ್ಷ ಜೈಲು!
ರೋಹ್ಟಕ್, ಆಗಸ್ಟ್ 28: ಅತ್ಯಾಚಾರ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿಸಲ್ಪಟ್ಟಿರುವ ಡೇರಾ ಸಚ್ಚಾ ಸೌದಾ ಪಂಗಡದ ಧರ್ಮಗುರು ಬಾಬಾ ರಾಮ್ ರಹೀಂಗೆ ಸಿಬಿಐ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.
Recommended Video

ಆತನ ವಿರುದ್ಧ ಎರಡು ಅತ್ಯಾಚಾರ ಪ್ರಕರಣಗಳಿದ್ದು, ಆ ಎರಡೂ ಪ್ರಕರಣಗಳಲ್ಲಿ ಆತ ದೋಷಿಯೆಂದು ಸಾಬೀತಾಗಿದೆ. ಹಾಗಾಗಿ, ಎರಡೂ ಪ್ರಕರಣಗಳಿಗೆ ತಲಾ 10 ವರ್ಷದಂತೆ 20 ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ.
ಭದ್ರತಾ ಕಾರಣಗಳಿಗಾಗಿ ಬಾಬಾ ಬಂಧಿಯಾಗಿರುವ ರೋಹ್ಟಕ್ ಜೈಲಿನಲ್ಲೇ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಯಿತು. ಶಿಕ್ಷೆಯ ಪ್ರಮಾಣ ವಿಚಾರದಲ್ಲಿ ತಮ್ಮ ತಮ್ಮ ವಾದ ಮಂಡಿಸಲು ಎರಡೂ ಕಡೆಯ ವಕೀಲರಿಗೆ ಅವಕಾಶ ನೀಡಲಾಯಿತು.
ಅದರಂತೆ, ತಮ್ಮ ವಾದ ಮಂಡಿಸಿದ ಸರ್ಕಾರಿ ವಕೀಲರು, ಬಾಬಾಗೆ ಜೀವಾವಧಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಅತ್ತ, ಬಾಬಾ ಪರ ವಕೀಲರು ಬಾಬಾ ಮಾಡಿರುವ ಸಮಾಜ ಕಲ್ಯಾಣ ಕಾರ್ಯಗಳನ್ನು ಪರಿಗಣಿಸಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಮನವಿ ಸಲ್ಲಿಸಿದರು.
ಇಬ್ಬರ ಅಹವಾಲು ಕೇಳಿದ ನಂತರ, ಎರಡೂ ಕಡೆಯ ವಕೀಲರು ವಿಚಾರಣೆ ಕೋಣೆಯಿಂದ ಹೊರ ನಡೆದರು. ಆನಂತರ, ನ್ಯಾಯಾಧೀಶರು ತೀರ್ಪನ್ನು ಓದಲು ಶುರು ಮಾಡಿದರು.

ನ್ಯಾ. ಜಗದೀಪ್ ಸಿಂಗ್ ರಿಂದ ಶಿಕ್ಷೆ ಪ್ರಕಟ
ನ್ಯಾಯಮೂರ್ತಿ ಜಗದೀಪ್ ಸಿಂಗ್ ಅವರು, ಐಪಿಸಿ ಸೆಕ್ಷನ್ 376, 506, 511ರ ಪ್ರಕಾರ, ಶಿಕ್ಷೆಯನ್ನು ಪ್ರಕಟಿಸಿದರು.

ಅತ್ಯಾಚಾರ, ಜೀವ ಬೆದರಿಕೆ ಹಿನ್ನೆಲೆಯಲ್ಲಿ ಶಿಕ್ಷೆ
ಐಪಿಸಿ ಸೆಕ್ಷನ್ 376ರ ಪ್ರಕಾರ ಅತ್ಯಾಚಾರ, ಸೆಕ್ಷನ್ 506ರ ಪ್ರಕಾರ ಜೀವ ಬೆದರಿಕೆ ಹಿನ್ನೆಲೆಯಲ್ಲಿ 20 ವರ್ಷ ಜೈಲು ವಾಸವನ್ನು ವಿಧಿಸಲಾಯಿತು.

ಸಾಮಾನ್ಯ ಕೈದಿಯಂತಿರಬೇಕು
ಇದರ ಜತೆಗೆ 65 ಸಾವಿರ ರು. ದಂಡವನ್ನು ನ್ಯಾಯಾಲಯ ವಿಧಿಸಿದೆ. ಬಾಬಾಗೆ ಜೈಲಿನ ಸಮವಸ್ತ್ರ ನೀಡಬೇಕು. ಅಲ್ಲದೆ, ಆತ ಇತರ ಕೈದಿಗಳಂತೆ ಕೆಲಸ ಮಾಡಬೇಕು ಎಂದು ನ್ಯಾಯಮೂರ್ತಿ ಖಡಾಖಂಡಿತವಾಗಿ ಸೂಚಿಸಿದರು. ಈವರೆಗೆ ಆತನಿಗೆ ವಿಐಪಿ ವ್ಯವಸ್ಥೆ ಕಲ್ಪಿಸಿದ್ದಕ್ಕೆ ನ್ಯಾಯಾಧೀಶರು ಜೈಲು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಭುಗಿಲೆದ್ದ ಹಿಂಸಾಚಾರ
ನ್ಯಾಯಾಲಯದಲ್ಲಿ ಹೀಗೆ ಶಿಕ್ಷೆಯ ಪ್ರಕಟವಾಗುತ್ತಿದ್ದಂತೆ ರೋಹ್ಟಕ್ ಹಾಗೂ ಬಾಬಾ ಆಶ್ರಮ ಇರುವ ಸಿರ್ಸಾದಲ್ಲಿ ನೂರಾರು ಮಂದಿ ಭಕ್ತರು ಬೀದಿಗಿಳಿದು ಹಿಂಸಾಚಾರಕ್ಕೆ ತೊಡಗಿದರು.

ನ್ಯಾಯಧೀಶರಲ್ಲಿ ಅಳಲು
ಶಿಕ್ಷೆಯ ಪ್ರಮಾಣದ ವಿಚಾರಣೆ ನಡೆಯುತ್ತಿರುವಾಗಲೇ ಬಾಬಾ ರಾಮ್ ರಹೀಂ ಅವರು, ನ್ಯಾಯಾಧೀಶರ ಎದುರು ಗಳಗಳನೆ ಅತ್ತುಬಿಟ್ಟರು. ತಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂದು ಬೇಡಿಕೊಂಡಿದ್ದರು.

ನ್ಯಾಯಾಧೀಶರಿಗೆ ಮೇಲ್ಮನವಿ
ನ್ಯಾಯಾಧೀಶರ ತೀರ್ಪು ಪ್ರಕಟವಾದ ನಂತರ, ಬಾಬಾನಿಂದ ಅತ್ಯಾಚಾರ ಸಂತ್ರಸ್ತೆಯಾಗಿರುವ ಮಹಿಳೆಯು ಬಾಬಾಗೆ ಜೀವಾವಧಿ ಶಿಕ್ಷೆ ನೀಡಬೇಕೆಂದು ಮೇಲ್ಮನವಿ ಸಲ್ಲಿಸಿದರು. ಸಿಬಿಐ ನ್ಯಾಯಾಲಯವು ನೀಡಿರುವ ತೀರ್ಪಿನ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೇಲ್ಮನವಿ ಸಲ್ಲಿಕೆಗೆ ನಿರ್ಧಾರ
ಏತನ್ಮಧ್ಯೆ, ಬಾಬಾ ಪರ ವಕೀಲರು ಸಿಬಿಐ ನ್ಯಾಯಾಲಯ ನೀಡಿರುವ ತೀರ್ಪನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಮುಂದೆ ಅವರು ಹೇಳಿಕೆ ನೀಡಿದರು.












Click it and Unblock the Notifications