ರಾಂಚಿ ಸಾಮೂಹಿಕ ಆತ್ಮಹತ್ಯೆ: ಆರ್ಥಿಕ ಸಮಸ್ಯೆಯೇ ಕಾರಣ
ರಾಂಚಿ, ಜುಲೈ 31: ಒಂದೇ ಮನೆಯಲ್ಲಿ 7 ಜನ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಇವರೆಲ್ಲರೂ ಸಾಲಭಾದೆ ತಾಳಲಾರದೆ ಅಸುನೀಗಿದ್ದಾರೆಂದು ತಿಳಿದುಬಂದಿದೆ.
ಜುಲೈ 30 ಸೋಮವಾರದಂದು ಜಾರ್ಖಂಡದ ರಾಂಚಿಯಲ್ಲಿ ಒಂದೇ ಮನೆಯ ಏಳು ಜನ ಆತ್ಮಹತ್ಯೆ ಶರಣಾಗಿದ್ದರು. ಆತ್ಮಹತ್ಯೆ ಕಾರಣವೇನು ಎಂಬುದು ತಿಳಿದುಬಂದಿರಲಿಲ್ಲ. ಆದರೆ ಪ್ರಾಥಮಿಕ ತನಿಖೆಯ ಪ್ರಕಾರ ಆರ್ಥಿಕ ಸಮಸ್ಯೆಯೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಇಬ್ಬರು ಚಿಕ್ಕಮಕ್ಕಳು ಸೇರಿದಂತೆ ಏಳು ಜನ ಮೃತರಾಗಿದ್ದು, ಮೃತರನ್ನು ಶಶಿ ಕುಮಾರ್ ಜಾ(65), ಗಾಯತ್ರಿ ದೇವಿ(60), ದೀಪಕ್ ಜಾ(40), ಸೋನಿ ಜಾ(38), ಜಾಗು(1), ದೃಷ್ಟಿ(6) ಎಂದು ಗುರುತಿಸಲಾಗಿದೆ.

ಇತ್ತೀಚೆಗಷ್ಟೇ ಹೊಸ ಉದ್ಯಮ ಆರಂಭಿಸಿದ್ದ ಜಾ ಕುಟುಂಬ ಸಾಲದ ಹೊರೆಯಿಂದ ಬಳಲುತ್ತಿತ್ತು. ವ್ಯವಹಾರದಲ್ಲೂ ಸಾಕಷ್ಟು ನಷ್ಟವಾಗಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದಿರಬಹುದು ಎನ್ನಲಾಗಿದೆ.
ದೆಹಲಿಯ ಬುರಾರಿಯಲ್ಲಿ ಸಂಭವಿಸಿದ ಒಂದೇ ಕುಟುಂಬದ 11 ಜನರ ಆತ್ಮಹತ್ಯೆಯ ಗೌಜೇ ಇನ್ನೂ ಆರಿಲ್ಲ. ಆಗಲೇ ರಾಂಚಿ ಆತ್ಮಹತ್ಯೆಯ ನಿಗೂಢ ಘಟನೆ ಬೆಳಕಿಗೆ ಬಂದಿದೆ.












Click it and Unblock the Notifications