ಗುಜರಾತ್ ಫೈಲ್ಸ್ ಬರೆದ ಪತ್ರಕರ್ತೆಗೂ ತಾಕಿತು ಬಿಸಿ; ಟ್ವಿಟ್ಟರ್ ಖಾತೆ ನಿರ್ಬಂಧ
ನವದೆಹಲಿ, ಜೂನ್ 27: ಪತ್ರಕರ್ತೆ ಮತ್ತು ಬರಹಗಾರ್ತಿ ರಾಣಾ ಆಯುಬ್ರ ಟ್ವಿಟ್ಟರ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಿದ ಘಟನೆ ನಡೆದಿದೆ. ಸರಕಾರದ ನಿರ್ದೇಶನದ ಮೇರೆಗೆ ಟ್ವಿಟ್ಟರ್ ಸಂಸ್ಥೆ ಈ ಕ್ರಮ ಕೈಗೊಂಡಿತ್ತು. ವಿಶ್ವಾದ್ಯಂತ ತೀಕ್ಷ್ಣ ಪ್ರತಿಕ್ರಿಯೆಗಳು ಬಂದ ಬಳಿಕ ನಿರ್ಬಂಧವನ್ನು ಹಿಂಪಡೆಯಲಾಗಿದೆ.
ಟ್ವಿಟ್ಟರ್ ಸಂಸ್ಥೆ ಭಾನುವಾರ ರಾಣಾ ಆಯುಬ್ ಅವರ ಟ್ವಿಟ್ಟರ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಿತು. ಇಂದು ಸೋಮವಾರ ತೆರವುಗೊಳಿಸಲಾಗಿದೆ. ಇದೇ ವೇಳೆ, ಕುವೇತ್ ದೇಶದ ವಕೀಲ ಅಲ್ ಶುರೇಕ ಎಂಬುವರ ಟ್ವೀಟ್ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
ಗುಜರಾತ್ ಗಲಭೆ 2002: ತೀಸ್ತಾ, ಭಟ್, ಶ್ರೀಕುಮಾರ್ ವಿರುದ್ಧ ತನಿಖೆಗೆ ಎಸ್ಐಟಿ ರಚನೆ
ಕಳೆದ ವಾರಾಂತ್ಯದಲ್ಲಿ ನಡೆದ ಹೈಡ್ರಾಮಾ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಣಾ ಆಯೂಬ್ ಟ್ವಿಟ್ಟರ್ ನಿರ್ಬಂಧ ಘಟನೆ ಕುತೂಹಲ ಮೂಡಿಸುತ್ತದೆ. ಸಾಮಾಜಿಕ ಕಾರ್ಯಕರ್ತೆ ಮತ್ತು ವಕೀಲೆ ತೀಸ್ತಾ ಸೆಟಲ್ವಾಡ್, ಮಾಜಿ ಐಪಿಎಸ್ ಅಧಿಕಾರಿಗಳಾದ ಶ್ರೀಕುಮಾರ್ ಮತ್ತು ಸಂಜೀವ್ ಭಟ್ ಅವರನ್ನು ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಗುಜರಾತ್ ಎಟಿಎಸ್ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಎಸ್ಐಟಿ ರಚನೆ ಮಾಡಲಾಗಿದೆ.
2002ರ ಗುಜರಾತ್ ಗಲಭೆ ಘಟನೆಗಳಲ್ಲಿ ಅಂದಿನ ಸರಕಾರದಿಂದ ಆಡಳಿತಯಂತ್ರದ ದುರುಪಯೋಗವಾಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಲಾಯಿತು ಎಂದು ಆರೋಪಿಸಿ ಈ ಮೂವರು ಕೂಡ ಪೊಲೀಸ್ ಮತ್ತು ನ್ಯಾಯಾಲಯಗಳಲ್ಲಿ ದೂರುಗಳ ಸರಮಾಲೆಯನ್ನೇ ಕೊಟ್ಟು ಸಾಕ್ಷ್ಯಾಧಾರಗಳನ್ನೂ ಕಲೆಹಾಕಿದ್ದರು. ಇದೇ ಗುಜರಾತ್ ಗಲಭೆ ಘಟನೆಯಲ್ಲಿ ರಾಣಾ ಆಯೂಬ್ ಸಾಕಷ್ಟು ವರದಿಗಳನ್ನು ಮಾಧ್ಯಮಗಳಲ್ಲಿ ಬರೆದಿದ್ದರು. ಹೀಗಾಗಿ, ಗುಜರಾತ್ ಗಲಭೆ ಘಟನೆಯ ತನಿಖೆ ಮತ್ತು ದೂರುಗಳ ವಿಚಾರ ಬಂದಾಗ ತೀಸ್ತಾ ಸೆಟಲ್ವಾಡ್, ಶ್ರೀಕುಮಾರ್, ಸಂಜೀವ್ ಭಟ್ ಜೊತೆ ರಾಣಾ ಆಯುಬ್ ಹೆಸರೂ ಪ್ರಮುಖವಾಗಿ ಬರುತ್ತದೆ. ಈ ಹಿನ್ನೆಲೆಯಲ್ಲಿ ರಾಣಾ ಆಯುಬ್ ಅವರ ಟ್ವಿಟ್ಟರ್ ಖಾತೆಯನ್ನು ನಿರ್ಬಂಧಿಸಿದ್ದ ಕ್ರಮ ಗಮನ ಸೆಳೆಯುತ್ತದೆ.
|
ಟ್ವಿಟ್ಟರ್ ಕೊಟ್ಟ ಕಾರಣವೇನು?
ನಿನ್ನೆ ಭಾನುವಾರ ಪತ್ರಕರ್ತೆ ರಾಣಾ ಆಯುಬ್ ಅವರ ಟ್ವೀಟ್ಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿತ್ತು. ಈ ಸಂಬಂಧ ಟ್ವಿಟ್ಟರ್ನಿಂದ ರಾಣಾಗೆ ನೋಟೀಸ್ ಹೋಗಿತ್ತು. ಈ ನೋಟೀಸ್ ಅನ್ನು ರಾಣಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಟ್ವೀಟ್ ಮಾಡಿದ್ದರು.
"ಭಾರತದ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರಬೇಕಾದ್ದರಿಂದ ಇಲ್ಲಿಯ ೨೦೦೦ರ ಐಟಿ ಕಾಯ್ದೆ ಅಡಿ ಖಾತೆಯನ್ನು ಭಾರತದಲ್ಲಿ ಹಿಂಪಡೆಯಲಾಗಿದೆ. ಬೇರೆ ದೇಶಗಳಲ್ಲಿ ಇದು ಲಭ್ಯ ಇರುತ್ತದೆ" ಎಂದು ಟ್ವಿಟ್ಟರ್ನ ನೋಟೀಸ್ನಲ್ಲಿ ತಿಳಿಸಲಾಗಿತ್ತು.
ಗೋಧ್ರಾ ತೀರ್ಪು; 19 ವರ್ಷ ನೋವು ಅನುಭವಿಸಿದ್ದಾರೆ ಎಂದ ಅಮಿತ್ ಶಾ
|
ತೀಕ್ಷ್ಣ ಪ್ರತಿಕ್ರಿಯೆ:
ರಾಣಾ ಆಯುಬ್ ಅವರ ಟ್ವೀಟ್ಗಳನ್ನು ಭಾರತದಲ್ಲಿ ನಿರ್ಬಂಧಿಸಿ ಕ್ರಮಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾದವು. ಮಾಜಿ ಟೆನಿಸ್ ಆಟಗಾರ್ತಿ ಮಾರ್ಟಿನಾ ನವ್ರಟಿಲೋವಾ, "ಮುಂದೆ ಯಾರು? ಭಯಂಕರ ಸ್ಥಿತಿ..." ಎಂದು ರಾಣಾ ಆಯುಬ್ರನ್ನು ಟ್ಯಾಗ್ ಮಾಡಿ ಟ್ವೀಟ್ ಪೋಸ್ಟ್ ಮಾಡಿದರು.
ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ಮೊದಲಾದವರೆಲ್ಲರೂ ಭಾರತ ಸರಕಾರ ಮತ್ತು ಟ್ವಿಟ್ಟರ್ ಸಂಸ್ಥೆಗಳನ್ನು ಟೀಕಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಟ್ವಿಟ್ಟರ್ ಈಗ ಸರಕಾರದ ಸಾಧನವಾಗಿ ಬದಲಾಗಿದೆ ಎಂದು ಟ್ವೀಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇಂದು ಸೋಮವಾರ ಮಧ್ಯಾಹ್ನದ ವೇಳೆ ರಾಣಾ ಆಯುಬ್ ಅವರ ಟ್ವಿಟ್ಟರ್ ನಿರ್ಬಂಧವನ್ನು ಹಿಂಪಡೆಯಲಾಗಿದೆ.
ಗುಜರಾತ್ ಫೈಲ್ಸ್ ಬರೆದಿದ್ದ ರಾಣಾ ಆಯುಬ್:
ಮೊದಲೇ ತಿಳಿಸಿದಂತೆ ಪತ್ರಕರ್ತೆ ರಾಣಾ ಆಯುಬ್ ಗುಜರಾತ್ ಗಲಭೆ ಘಟನೆಗಳ ಸಂಬಂಧ ತನಿಖಾ ವರದಿಗಳಿಂದ ಹೆಚ್ಚು ಪರಿಚಿತರಾಗಿದ್ದಾರೆ. ತಾನು ಬರೆದ ತನಿಖಾ ವರದಿಗಳನ್ನೇ ಸಂಗ್ರಹಿಸಿ ಗುಜರಾತ್ ಫೈಲ್ಸ್ ಎಂಬ ಪುಸ್ತಕವನ್ನೂ ಬಿಡುಗಡೆ ಮಾಡಿದ್ದರು. ಮುಸ್ಲಿಮರನ್ನು ಗುರಿಯಾಗಿಸಿ ನಡೆಸಲಾದ ಹತ್ಯಾಕಾಂಡಗಳು ಹಾಗೂ ಕೋಮುಗಲಭೆಗಳಿಗೆ ಸರಕಾರಿ ಯಂತ್ರಗಳೇ ಹೇಗೆ ಸಹಾಯಕವಾದವು ಎಂಬುದನ್ನು ರಾಣಾ ತಮ್ಮ ತನಿಖಾ ವರದಿಗಳಲ್ಲಿ ಚಿತ್ರಿಸಿದ್ದರು.
ಕುವೇತ್ ವಕೀಲರಿಗೆ ನಿರ್ಬಂಧ
ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿದೆ ಎನ್ನಲಾದ ದೌರ್ಜನ್ಯದ ವಿಚಾರವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದ ಎದುರು ತೆಗೆದುಕೊಂಡು ಹೋಗುವುದಾಗಿ ಸಾಲು ಸಾಲು ಟ್ವೀಟ್ಗಳನ್ನು ಮಾಡುತ್ತಿದ್ದ ಕುವೇತ್ನ ಮಾನವಹಕ್ಕು ಹೊರಾಟಗಾರ ಮುಜಬಿಲ್ ಅಲ್ ಶುರೇಕಾ ಅವರ ಟ್ವಿಟ್ಟರ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ.
ದೌರ್ಜನ್ಯಕ್ಕೊಳಗಾದ ಭಾರತೀಯ ಮುಸ್ಲಿಮರಿಗೆ ಬೆಂಬಲ ನೀಡುವುದು ಅಪರಾಧವೇ? ಹಿಂದುತ್ವವಾದಿಗಳ ಆಡಳಿತದಿಂದ ಆಗುತ್ತಿರುವ ಮಾನವ ಹಕ್ಕು ಉಲ್ಲಂಘನೆಯನ್ನು ಎತ್ತಿ ತೋರಿಸುವುದು ತಪ್ಪಾ? ಭಾರತದ ಓದುಗರಿಗೆ ನನ್ನ ಟ್ವೀಟ್ಗಳು ತಲುಪದಂತೆ ಯಾಕೆ ನಿರ್ಬಂಧ ಹಾಕಲಾಗಿದೆ?" ಎಂದು ಅಲ್ ಶುರೇಕಾ ಪ್ರಶ್ನೆ ಮಾಡಿದ್ದಾರೆ.
ಕುವೈತ್ ದೇಶದ ಈ ವಕೀಲ ಕಮ್ ಹೋರಾಟಗಾರ ಬಾಬ್ರಿ ಮಸೀದಿ ವಿಚಾರವನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ಗೆ ತೆಗೆದುಕೊಂಡು ಹೋಗುವ ಇರಾದೆ ವ್ಯಕ್ತಪಡಿಸಿದ್ದಾರೆ. ಭಾರತೀಯ ಮುಸ್ಲಿಮರು ನನ್ನನ್ನು ಅವರ ವಕೀಲನಾಗಿ ನೇಮಿಸಿದರೆ ಬಾಬ್ರಿ ಘಟನೆಯನ್ನು ನೆದರ್ಲ್ಯಾಂಡ್ಸ್ನ ಹೇಗ್ನಲ್ಲಿರುವ ಐಸಿಸಿ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿ ವಾದ ಮಾಡುತ್ತೇನೆ ಎಂದು ಇವರು ಆಗಾಗ ಮನವಿ ಮಾಡಿದ್ದುಂಟು.
ಭಾರತದ 'ತುಕಡೆ ಗ್ಯಾಂಗ್' ಹಣೆಪಟ್ಟಿ ಹೊಂದಿರುವ ಶಾರ್ಜೀಲ್ ಇಮಾಮ್, ಉಮರ್ ಖಾಲಿದ್, ಸಿದ್ದಿಕಿ ಕಪ್ಪನ್ ಮೊದಲಾದ ಮುಸ್ಲಿಮ್ ಹೋರಾಟಗಾರರಿಗೆ ಇವರು ಬೆಂಬಲ ವ್ಯಕ್ತಪಡಿಸಿರುವುದುಂಟು.
(ಒನ್ಇಂಡಿಯಾ ಸುದ್ದಿ)