Ram Mandir Inauguration; ಅಯೋಧ್ಯೆಯಲ್ಲಿ ಭದ್ರತೆ ಹೇಗಿದೆ?
ಲಕ್ನೋ, ಜನವರಿ 21: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಜನವರಿ 22ರ ಸೋಮವಾರ ಶ್ರೀ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 8 ಸಾವಿರಕ್ಕೂ ಅಧಿಕ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಿಂದಾಗಿ ಅಯೋಧ್ಯೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಸುಮಾರು 20 ಸಾವಿರಕ್ಕೂ ಅಧಿಕ ವಿವಿಧ ಭದ್ರತಾ ಪಡೆಗಳಿಂದ ಅಯೋಧ್ಯೆಗೆ ಭದ್ರತೆ ನೀಡಲಾಗಿದೆ. ಇದರಲ್ಲಿ ವಾಹನ ತಪಾಸಣೆ, ಜನರ ತಪಾಸಣೆ, ವೈಮಾನಿಕ ಕಣ್ಗಾವಲು ಸೇರಿದಂತೆ ವಿವಿಧ ಹಂತಗಳು ಸೇರಿವೆ. ಪಾಸು ಹೊಂದಿರದ ಯಾವುದೇ ವಾಹನ, ಜನರನ್ನು ಅಯೋಧ್ಯೆ ಒಳಗೆ ಬಿಡುತ್ತಿಲ್ಲ.

ಉತ್ತರ ಪ್ರದೇಶದ ಪೊಲೀಸರು ಮತ್ತು ಕೇಂದ್ರದ ಭದ್ರತಾ ಪಡೆಗಳ ಸಿಬ್ಬಂದಿ ಅಯೋಧ್ಯೆಗೆ ಭದ್ರತೆ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಳ್ಗೊಳ್ಳುವುದರಿಂದ ಅವರ ಭದ್ರತೆ ನೋಡಿಕೊಳ್ಳುವ ಎಸ್ಪಿಜಿ ಪಡೆ ಸಹ ಅಯೋಧ್ಯೆಗೆ ಆಗಮಿಸಿ, ಸ್ಥಳವನ್ನು ತಮ್ಮ ವಶಕ್ಕೆ ಪಡೆದಿದೆ.
ಡ್ರೋನ್ ಹಾರಾಟ ನಿಷೇಧ; ಶ್ರೀ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಅಯೋಧ್ಯೆಯಲ್ಲಿ ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿದೆ. ಒಂದು ವೇಳೆ ಡ್ರೋನ್ ಹಾರಾಟ ನಡೆಸಿದರೆ ಅದನ್ನು ಹೊಡೆದುರುಳಿಸಲು ಪಡೆಗಳನ್ನು ನಿಯೋಜನೆ ಮಾಡಲಾಗಿದೆ.
ಅಯೋಧ್ಯೆಯಲ್ಲಿ ಎಸ್ಪಿಜಿ, ಎನ್ಎಸ್ಜಿ, ಸಿಆರ್ಪಿಎಫ್, ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ, ಉತ್ತರ ಪ್ರದೇಶದ ವಿಶೇಷ ಪೊಲೀಸ್ ಪಡೆ, ರಾಜ್ಯ ಮತ್ತು ಕೇಂದ್ರ ಗುಪ್ತಚರ ಪಡೆಯನ್ನು ನಿಯೋಜನೆ ಮಾಡಲಾಗಿದೆ.
ಅಲ್ಲದೇ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ತಾಂತ್ರಿಕ ತಂಡ ಭದ್ರತೆ ನೋಡಿಕೊಳ್ಳಲಿದೆ. ಐತಿಹಾಸಿಕ ಸಮಾರಂಭದಲ್ಲಿ ಯಾವುದೇ ಭದ್ರತಾ ವೈಫಲ್ಯ ಕಂಡುಬರದಂತೆ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಉನ್ನತ ಅಧಿಕಾರಿಗಳಿಂದ ನಿಗಾ; ಉತ್ತರ ಪ್ರದೇಶದ ಡಿಜಿಪಿ ವಿಜಯ್ ಕುಮಾರ್ ಶನಿವಾರದಿಂದ ಅಯೋಧ್ಯೆಯಲ್ಲಿನ ಭದ್ರತಾ ವ್ಯವಸ್ಥೆ ಬಗ್ಗೆ ನಿಗಾ ವಹಿಸಿದ್ದಾರೆ. ವಿವಿಧ ಹಂತದ ಅಧಿಕಾರಿಗಳಿಗೆ ಹಲವು ಸೂಚನೆ ನೀಡುತ್ತಿದ್ದಾರೆ. ಭಾರತ ನೇಪಾಳ ಗಡಿಯಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ.
ಅಯೋಧ್ಯೆಯಲ್ಲಿನ ಕಾರ್ಯಕ್ರಮ ಮತ್ತು ಜನವರಿ 26ರ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಭಾರತ-ನೇಪಾಳ ಗಡಿ ಸಮನ್ವಯ ಸಮಿತಿಯ 42ನೇ ಬೆಟಾಲಿಯನ್ ಸಭೆ ಶನಿವಾರ ನಡೆದಿದೆ. ಗಡಿ ಭಾಗದ ಜಿಲ್ಲೆಗಳಲ್ಲಿ ಮಾಡಿರುವ ಭದ್ರತಾ ವ್ಯವಸ್ಥೆ ಬಗ್ಗೆ ಉಭಯ ದೇಶಗಳು ಮಾಹಿತಿ ವಿನಿಮಯ ಮಾಡಿಕೊಂಡಿವೆ.
ವಿವಿಧ ಮಾದರಿ ಭದ್ರತಾ ವ್ಯವಸ್ಥೆಯನ್ನು ಅಯೋಧ್ಯೆಯಲ್ಲಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಂಜೆ ಅಯೋಧ್ಯಗೆ ಆಗಮಿಸುತ್ತಿದ್ದಾರೆ. ಪ್ರಧಾನಿ ಭದ್ರತಾ ವ್ಯವಸ್ಥೆಯನ್ನು ಎಸ್ಪಿಜಿ ನೋಡಿಕೊಳ್ಳುತ್ತದೆ. ನಗರಕ್ಕೆ ಪ್ರವೇಶ ಮಾಡುವ ಎಲ್ಲಾ ವಾಹನಗಳ ಮೇಲೆ ನಿಗಾವಹಿಸಲಾಗಿದೆ.
ಸೋಮವಾರದ ಕಾರ್ಯಕ್ರಮದಲ್ಲಿ ಗಣ್ಯರಿಗೆ ಮಾತ್ರ ಪ್ರವೇಶ. ಜನವರಿ 22ರಂದು ಅಯೋಧ್ಯೆಗೆ ಆಗಮಿಸಬೇಡಿ. ಜನವರಿ 23ರಿಂದ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಶ್ರೀರಾಮನ ಭಕ್ತರಿಗೆ ಕರೆ ನೀಡಿದ್ದಾರೆ.
ಅಯೋಧ್ಯೆಯ ಶ್ರೀ ರಾಮ ಮಂದಿರದ ಸುತ್ತಲಿನ 5 ಕಿ. ಮೀ. ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಕಾರ್ಯಕ್ರಮಕ್ಕ ಆಗಮಿಸುವ ಗಣ್ಯರನ್ನು, ವಯಸ್ಸಾದವರನ್ನು ಕರೆತರಲು ಪೊಲೀಸರು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿದ್ದಾರೆ.
ಜನವರಿ 21 ಮತ್ತು 22ರಂದು ಅಯೋಧ್ಯೆಯಲ್ಲಿ ಸಂಚಾರ ನಡೆಸುವ ವಾಹನಗಳಿಗೆ ಪ್ರತ್ಯೇಕ ನಂಬರ್ ಪ್ಲೇಟ್, ಪಾಸು ನೀಡಲಾಗಿದೆ. ಅಯೋಧ್ಯೆ ನಗರದ ಸುತ್ತಲೂ 5 ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ಪಾಸು ಇಲ್ಲದ ವಾಹನ ನಗರ ಪ್ರವೇಶಿಸುವಂತಿಲ್ಲ.
ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು ಯಾವ ಮಾರ್ಗದಲ್ಲಿ ಸಂಚಾರ ನಡೆಸಬೇಕು ಎಂದು ಪೊಲೀಸರು ಸೂಚನೆ ನೀಡಲಿದ್ದಾರೆ. ಬೇರೆ ಯಾವ ಮಾರ್ಗದಲ್ಲಿ ಸಾಗಲು ಸಹ ಅವಕಾಶವೇ ಇಲ್ಲ. ಅಯೋಧ್ಯೆಗೆ ಅಕ್ಕಪಕ್ಕದ ಜಿಲ್ಲೆಗಳಿಂದ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಭದ್ರತಾ ಪಡೆಗಳು ತಮ್ಮ ವಶಕ್ಕೆ ಪಡೆದುಕೊಂಡಿವೆ.












Click it and Unblock the Notifications