ಸಾಮಾಜಿಕ ಜಾಲತಾಣ ಬಳಕೆ ಬಗ್ಗೆ ಸ್ವಯಂ ನಿಯಂತ್ರಣ ಬೇಕು: ರಾಜವರ್ಧನ್ ರಾಥೋಡ್
ನವದೆಹಲಿ, ಅಕ್ಟೋಬರ್ 09: ಯಾವ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿಯ ಅಭಿಪ್ರಾಯವನ್ನು ಕೇಳಿಸಿಕೊಳ್ಳುವ ಹಾಗೂ ಅದನ್ನು ಸಹಿಸಿಕೊಳ್ಳುವ ತಾಳ್ಮೆ ಇರುವುದಿಲ್ಲವೋ ಆತನಿಗೆ ತನ್ನ ಅಭಿಪ್ರಾಯ ಮಂಡಿಸುವ ನೈತಿಕತೆ ಇರುವುದಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಹೇಳಿದರು.
ಫೇಸ್ಬುಕ್ ಆಯೋಜಿಸಿದ್ದ 'ಸಾಮಾಜಿಕ ಜಾಲತಾಣದ ಜವಾಬ್ದಾರಿಯುತ ಬಳಕೆ' ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣದಲ್ಲಿ ಭಾಷೆಯ ಬಳಕೆ ಬಗ್ಗೆ ರಾಜಕೀಯ ಮುಖಂಡರು ಎಚ್ಚರ ವಹಿಸಬೇಕು. ವೈಯಕ್ತಿಕವಾಗಿ ರಾಜಕೀಯ ಮುಖಂಡರು ಉತ್ತಮ ಭಾಷೆ ಬಳಸುವ ಮೂಲಕ ತಮ್ಮ ಅನುಯಾಯಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ ಉತ್ತಮ ಭಾಷೆ ಬಳಕೆ ಬಗ್ಗೆ ಸೂಚನೆ ನೀಡಬೇಕು ಎಂದು ಅವರು ಹೇಳಿದರು.

ಬಹುದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಪ್ರತಿ ವ್ಯಕ್ತಿಯ ಅಭಿಪ್ರಾಯವೂ ಮತ್ತೊಬ್ಬನಿಗಿಂತೂ ಭಿನ್ನವಾಗಿರುತ್ತದೆ ಆದರೆ ಅದನ್ನು ಮತ್ತೊಬ್ಬರ ಮೇಲೆ ಹೇರುವ, ಒಪ್ಪಿಕೊಳ್ಳದಿದ್ದರೆ ದಾಳಿ ಮಾಡುವ ಸಂಪ್ರದಾಯ ಬೆಳೆಸಿಕೊಳ್ಳಬಾರದು ಎಂದು ರಾಥೋಡ್ ಹೇಳಿದರು.
ಸ್ವಚ್ಛ ಭಾರತ ಅಭಿಯಾನದ ಜೊತೆಗೆ ಡಿಜಿಟಲ್ ಸ್ವಚ್ಛತೆ ಮತ್ತು ಅಂತರ್ಜಾಲ ಸ್ವಚ್ಛತೆಯ ಅವಶ್ಯಕತೆಯೂ ಇದೆ ಎಂದು ಹೇಳಿದ ಅವರು, ಸುಳ್ಳು ಸುದ್ದಿಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಹಿಂಸೆಗಳನ್ನು ತಡೆಯಲು ಸರ್ಕಾರವು ಬದ್ಧವಾಗಿದೆ ಎಂದರು.

ಸಾಮಾಜಿಕ ಜಾಲತಾಣ ಬಳಕೆದಾರರು ಸ್ವಯಂ ನಿಯಂತ್ರಣ ಹೇರಿಕೊಂಡಲ್ಲಿ ಹಾಗೂ ಸಾಮಾಜಿಕ ಜಾಳತಾಣದಿಂದ ಸಾಧಿಸಬಹುದಾದ ಉತ್ತಮ ಕಾರ್ಯಗಳ ಕಡೆ ಮಾತ್ರವೇ ಗಮನ ಹರಿಸಿದರೆ ಸಾಕು ಬೇರಾವುದೇ ನಿಯಂತ್ರಣಗಳ ಅಗತ್ಯವೇ ಇಲ್ಲವೆಂದು ಅವರು ಹೇಳಿದರು.












Click it and Unblock the Notifications