ಉರಿ ಕ್ಯಾಂಪ್ ನಲ್ಲಿ ಸತ್ತ ಯೋಧರಿಗಿಂತ ಜಾಸ್ತಿ ಈಗ ಜನ ಸಾಯ್ತಾ ಇದ್ದಾರೆ
ಐನೂರು, ಸಾವಿರ ರೂಪಾಯಿ ನೋಟನ್ನು ಬ್ಯಾನ್ ಮಾಡಿದ ನಂತರದ ಬೆಳವಣಿಗೆಗಳ ನಡುವೆ ಆರಂಭವಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ನೀಡಿರುವ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ನವದೆಹಲಿ, ನ 17: ಮೊದಲೇ ನೋಟು ನಿಷೇಧದ ಬಿಸಿಯಲ್ಲಿ ಹೈರಾಣನಾಗಿರುವ ಸಾರ್ವಜನಿಕ, ಸಂಸತ್ತಿನಲ್ಲಿ ಜನಪ್ರತಿನಿಧಿಗಳ ಆರೋಪ, ಪ್ರತ್ಯಾರೋಪ ನೋಡಿದರೆ ನಮ್ಮ ವ್ಯವಸ್ಥೆಯ ಮೇಲೆ ಹೇಸಿಗೆ ಪಡದೇ ಇರಲಾರ.
ಐನೂರು, ಸಾವಿರ ರೂಪಾಯಿ ನೋಟನ್ನು ಬ್ಯಾನ್ ಮಾಡಿದ ನಂತರದ ಬೆಳವಣಿಗೆಗಳ ನಡುವೆ ಆರಂಭವಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ನೀಡಿರುವ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. (ಮೋದಿಜೀ.. ಅಟ್ಟಕ್ಕೇರಿಸಿದ್ದ ಜನ ತಳ್ ಬಿಟ್ಟಾರು)
ಕಾಶ್ಮೀರದ ಉರಿ ಕ್ಯಾಂಪ್ ನಲ್ಲಿ ಪಾಕಿಸ್ತಾನದ ಉಗ್ರರು ಭಾರತದ ಯೋಧರನ್ನು ಹತೈಗೈದಿದ್ದಕ್ಕಿಂತ ಹೆಚ್ಚು, ನೋಟು ನಿಷೇಧದ ವಿಚಾರದಲ್ಲಿನ ಸರಕಾರದ ತಪ್ಪು ನಿರ್ಧಾರದಿಂದ ಜನ ಸತ್ತಿದ್ದಾರೆ ಎನ್ನುವ ಗುಲಾಂ ನಬಿ ಆಜಾದ್ ಹೇಳಿಕೆ ರಾಜ್ಯಸಭೆಯಲ್ಲಿ ಕೋಲಾಹಲವನ್ನು ಉಂಟುಮಾಡಿದೆ.
ರಾಜ್ಯಸಭೆಯಲ್ಲಿ ಗುರುವಾರ (ನ 17) ಮಾತನಾಡುತ್ತಿದ್ದ ಗುಲಾಂನಬಿ ಆಜಾದ್, ನೋಟು ನಿಷೇಧದ ಸರಕಾರದ ನಿರ್ಧಾರದಿಂದ ನಲವತ್ತಕ್ಕೂ ಹೆಚ್ಚು ರೈತರು, ಬಡವರು ಸಾವನ್ನಪ್ಪಿದ್ದಾರೆ.
ಇದು ಇತ್ತೀಚೆಗೆ ಪಾಕಿಸ್ತಾನ ಪ್ರಾಯೋಜಿತ ಉಗ್ರರ 'ಉರಿ' ದಾಳಿಗೆ ಹೋಲಿಸಿದರೆ ಅರ್ಧಕ್ಕಿಂತ ಕಮ್ಮಿ, ಇದಕ್ಕೆ ಸರಕಾರ ಈಗ ಯಾರನ್ನು ದೂಷಿಸುತ್ತದೆ ಎನ್ನುವ ಗುಲಾಂನಬಿ ಆಜಾದ್ ಹೇಳಿಕೆ ಆಡಳಿತ ಪಕ್ಷದವರನ್ನು ಕೆರಳಿಸಿದೆ.
ಗುಲಾಂ ನಬಿ ಹೇಳಿಕೆಗೆ ವಿರೋಧ ಪಕ್ಷದವರ ಮುಖಂಡರೇ ಸಹಮತ ವ್ಯಕ್ತಪಡಿಸದ ನಡುವೆ, ಸಂಸದೀಯ ವ್ಯವಹಾರ ಖಾತೆಯ ಸಚಿವ ವೆಂಕಯ್ಯ ನಾಯ್ಡು, ಗುಲಾಂ ನಬಿ ಹೇಳಿಕೆಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಪಾಕಿಸ್ತಾನದ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಚರ್ಚೆಗೆ ಬರುವಂತಹ ವಿಷಯವನ್ನು ಗುಲಾಂ ನಬಿ ಆಜಾದ್ ಪ್ರಸ್ತಾವಿಸಿದ್ದಾರೆ. ಹಿರಿಯ ಮುಖಂಡರೊಬ್ಬರಿಂದ ಇಂತಹ ಹೇಳಿಕೆ ಬಂದಿರುವುದು ನಿಜಕ್ಕೂ ವಿಷಾದನೀಯ. ಯಾಕೆ ಗುಲಾಂ ನಬಿ ಈ ರೀತಿಯ ಹೇಳಿಕೆ ನೀಡಿದರು ಎನ್ನುವದೇ ಇಲ್ಲಿ ಪ್ರಶ್ನಾರ್ಹ?
ಹುತಾತ್ಮರಿಗೆ ಕಾಂಗ್ರೆಸ್ ಈ ಸಂಸತ್ತಿನ ಇಂದಿನ ಅಧಿವೇಶನದ ಮೂಲಕ ಅವಮಾನ ಮಾಡುತ್ತಿದೆ, ಇವರ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಬೇಕೆಂದು ಎಂದು ವೆಂಕಯ್ಯ ನಾಯ್ಡು ಸಭಾಧ್ಯಕ್ಶರಲ್ಲಿ ಮನವಿ ಮಾಡಿದರು. ಗದ್ದಲ, ಗೌಜಿನ ನಡುವೆ ರಾಜ್ಯಸಭೆಯ ಇಂದಿನ ಅಧಿವೇಶನ ಶುಕ್ರವಾರಕ್ಕೆ (ನ 18) ಮುಂದೂಡಲಾಯಿತು.
ಕೊನೇ ಮಾತು: ನಾಳೆಯ ಅಧಿವೇಶನದಲ್ಲಾದರೂ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಚರ್ಚೆ/ನಿರ್ಣಯ ಸಂಸತ್ತು ತೆಗೆದುಕೊಳ್ಳಬಹುದು ಎಂದು ಜನಸಾಮಾನ್ಯ ನಿರೀಕ್ಷೆ ಇಟ್ಟುಕೊಂಡಿದ್ದರೆ, ಅದಕ್ಕಿಂತ ದೊಡ್ಡ ತಪ್ಪು ಸದ್ಯದ ಪರಿಸ್ಥಿತಿಯಲ್ಲಿ ಇನ್ನೇನಾದರೂ ಇದೆಯೇ?