ನಿಮಗಿಂತ ನಾಯಿಗಳೇ ಜಾಣ: ರಾಹುಲ್ ಗಾಂಧಿ ಕಾಲೆಳೆದ ಪರೇಶ್ ರಾವಲ್
ನವದೆಹಲಿ, ಜೂನ್ 21: ವಿಶ್ವ ಯೋಗ ದಿನದಂದು ಭಾರತೀಯ ಸೇನೆಯನ್ನು ಅಗೌರವಿಸಿದ ಆರೋಪಕ್ಕೆ ಗುರಿಯಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಭಾರತೀಯ ಸೇನೆಯ ಶ್ವಾನ ಪಡೆಯು ಶುಕ್ರವಾರದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿತ್ತು. ತಮ್ಮ ಮಾರ್ಗದರ್ಶಕರೊಂದಿಗೆ ಶ್ವಾನಗಳು ಯೋಗ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಈ ಯೋಗಾಭ್ಯಾಸದ ಎರಡು ಚಿತ್ರಗಳನ್ನು ಪ್ರಕಟಿಸಿದ್ದ 'ನ್ಯೂ ಇಂಡಿಯಾ' ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.
ಪ್ರಾಣಿ ತರಬೇತಿ ಶಾಲೆಯ (ಎಟಿಎಸ್) ಭಾರತ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಅರುಣಾಚಲ ಪ್ರದೇಶದ ಲೋಹಿತ್ ಕಣಿವೆಯ ನದಿ ತೀರದಲ್ಲಿ ಶ್ವಾನದಳದೊಂದಿಗೆ ಯೋಗಾಸನ ಪ್ರದರ್ಶಿಸಿದ್ದರು. ಇದನ್ನು ರಾಹುಲ್ ಗಾಂಧಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.
ಈ ಟ್ವೀಟ್ಗೆ ಕಿಡಿಕಾರಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಿಮಗೆ ಒಳ್ಳೆ ಬುದ್ಧಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದಾರೆ.

ನಾಯಿಗಳೇ ಚುರುಕು
ರಾಹುಲ್ ನಿಮಗಿಂತಲೂ ನಾಯಿಗಳೇ ಹೆಚ್ಚು ಚುರುಕು ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿಯ ಮಾಜಿ ಸಂಸದ ಪರೇಶ್ ರಾವಲ್ ಅವರು ರಾಹುಲ್ ಗಾಂಧಿ ಅವರನ್ನು ಲೇವಡಿ ಮಾಡಿದ್ದಾರೆ. ಪರೇಶ್ ರಾವಲ್ ಅವರ ಟೀಕೆ ಕೀಳು ಮಟ್ಟದ್ದಾಗಿದೆ. ಅವರು ಕ್ಷಮೆ ಕೋರಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ

ರಾಜನಾಥ್ ಟ್ವೀಟ್
'ನಿಮಗೆ ಗೌರವ ನೀಡುತ್ತಾ ಹೇಳುತ್ತಿದ್ದೇನೆ ರಾಹುಲ್ ಜಿ, ಇವರು ನಮ್ಮ ಭಾರತೀಯ ಸೇನೆಯ ಹೆಮ್ಮೆಯ ಸದಸ್ಯರು, ಅವರು ನಮ್ಮ ದೇಶದ ಸುರಕ್ಷತೆಗಾಗಿ ಕಾಣಿಕೆ ಸಲ್ಲಿಸುತ್ತಿದ್ದಾರೆ. ನಮ್ಮ ಸೇನೆಯನ್ನು ಯಾರಾದರೂ ನಿರಂತರವಾಗಿ ಅವಮಾನಿಸುತ್ತಿದ್ದರೆ ಅವರಿಗೆ ಒಳ್ಳೆಯ ಬುದ್ಧಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ' ಎಂಬುದಾಗಿ ಸಿಂಗ್ ಟ್ವೀಟ್ ಮಾಡಿದ್ದಾರೆ.

ಸದಾ ನಕಾರಾತ್ಮಕ ನಡೆ
ಕಾಂಗ್ರೆಸ್ ಯಾವಾಗಲೂ ನಕಾರಾತ್ಮಕತೆಯನ್ನೇ ಪ್ರಕಟಿಸುತ್ತದೆ. ಇಂದು ಅವರ ನಕಾರಾತ್ಮಕತೆ ಕೆಟ್ಟ ಸಂಪ್ರದಾಯವಾದ ತ್ರಿವಳಿ ತಲಾಖ್ಗೆ ಸ್ಪಷ್ಟ ಬೆಂಬಲ ನೀಡುವುದರಲ್ಲಿ ಕಂಡುಬಂದಿತ್ತು. ಈಗ ಯೋಗ ದಿನವನ್ನು ಅಣಕಿಸಿ ಮತ್ತು ನಮ್ಮ ಪಡೆಗಳನ್ನು ಅವಮಾನಿಸಿದ್ದಾರೆ. ನಿಮ್ಮಲ್ಲಿ ಸಕಾರಾತ್ಮಕತೆಯ ಬುದ್ಧಿ ಬರಲಿದೆ ಎಂಬ ಆಶಿಸುತ್ತೇನೆ. ಕಠಿಣವಾದ ಸವಾಲುಗಳಿಂದ ಹೊರ ಬರಲು ಅದು ನೆರವು ನೀಡುತ್ತದೆ ಎಂದು ರಾಜನಾಥ್ ಸಿಂಗ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ತಪ್ಪುಗಳಿಂದ ಇನ್ನೂ ಪಾಠ ಕಲಿತಿಲ್ಲ
ರಾಹುಲ್ ಗಾಂಧಿ ಅವರು ತಮ್ಮ ತಪ್ಪುಗಳಿಂದ ಇನ್ನೂ ಪಾಠ ಕಲಿತಿಲ್ಲ. ಅವರು ನಮ್ಮ ಸೇನೆಯನ್ನು, ಯೋಧರನ್ನು, ನಂಬಲಸಾಧ್ಯವಾದ ಶ್ವಾನಪಡೆಯನ್ನು, ಯೋಗ ಸಂಪ್ರದಾಯವನ್ನು ಮತ್ತು ನಮ್ಮ ದೇಶವನ್ನು ಅವಮಾನಿಸಿದ್ದಾರೆ. ತಮ್ಮ ನಾಯಕನನ್ನಾಗಿ ಈ ಮನುಷ್ಯನೊಂದಿಗೆ ಕೆಲಸ ಮಾಡಬೇಕಾದ ಯುವ ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ವಿಷಾದವೆನಿಸುತ್ತದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.












Click it and Unblock the Notifications