ಖಾಮೋಶ್, ಬೇರೆ ಪಕ್ಷಗಳೇ ರಜನಿ ಪಕ್ಷವನ್ನು ಸೇರಲಿ!
ಬೆಂಗಳೂರು, ಮೇ 25 : "ರಜನಿಕಾಂತ್ ಯಾವುದೇ ಪಕ್ಷವನ್ನು ಸೇರುವುದು ಬೇಡ. ಅವರೇ ಹೊಸ ಪಕ್ಷ ಕಟ್ಟಲಿ. ಆ ಪಕ್ಷವನ್ನು ಇತರ ಪಕ್ಷಗಳು ಬಂದು ಸೇರಿಕೊಳ್ಳಲಿ, ಖಾಮೋಶ್" ಎಂದು ಏಕ್ ಮಾರ್ ದೋ ತುಕಡಾ ಮಾತುಗಳಿಂದ ಖ್ಯಾತರಾಗಿರುವ ಶತ್ರುಘ್ನ ಸಿನ್ಹಾ ಅವರು ರಜನಿಕಾಂತ್ ಅವರಿಗೆ ನೀಡಿರುವ ಬಿಟ್ಟಿ ಸಲಹೆ.
ರಜನಿಕಾಂತ್ ಅವರ ಹಳೆಯ ಗೆಳೆಯರಾಗಿರುವ ಅವರು, ಟ್ವಿಟ್ಟರಿನಲ್ಲಿ ಒಂದರಹಿಂದೊಂದರಂತೆ ಟ್ವೀಟ್ ಮಾಡುತ್ತ, ರಜನಿಕಾಂತ್ ಅವರು ರಾಜಕೀಯಕ್ಕೆ ಬರಲೇಬೇಕು, ಆದರೆ ಯಾವುದೇ ಪಕ್ಷವನ್ನು ಸೇರುವುದು ಬೇಡ ಎಂದು ಪರೋಕ್ಷವಾಗಿ ಭಾರತೀಯ ಜನತಾ ಪಕ್ಷಕ್ಕೆ ಇರುಸುಮುರುಸಾಗುವಂತೆ ಮಾಡಿದ್ದಾರೆ.[ರಜನಿಕಾಂತ್ ರಾಜಕೀಯಕ್ಕೆ ಏಕೆ ಧುಮುಕಬೇಕು : 5 ಕಾರಣ]
ಬಿಜೆಪಿಯಲ್ಲಿದ್ದುಕೊಂಡೇ ಪಕ್ಷಕ್ಕೆ ಇರುಸುಮುರುಸಾಗುವಂತೆ ಹೇಳಿಕೆ ನೀಡುವುದು ಶತ್ರಘ್ನ ಸಿಹ್ನಾ ಅವರಿಗೆ ಹೊಸದೇನಲ್ಲ. ಬಿಜೆಪಿಯ ನಾಯಕರನ್ನು ತೆಗಳುವ ವಿರೋಧಿಗಳನ್ನು ಬೆಂಬಲಿಸುತ್ತ, ಧೈರ್ಯವಿದ್ದರೆ ನನ್ನನ್ನು ಪಕ್ಷದಿಂದ ಕಿತ್ತೊಗೆಯಿರಿ ಎಂದು ಸವಾಲೊಡ್ಡುವುದೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ.
ಇಂತಿರುವ ಬಿಹಾರಿಬಾಬು ಶತ್ರುಘ್ನ ಸಿನ್ಹಾ ಅವರು, ರಾಜಕೀಯಕ್ಕೆ ಧುಮುಕಲು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ, ತಮ್ಮದೇ ಸ್ಟೈಲಿನಲ್ಲಿ ಹೇಳಿಕೆ ನೀಡುತ್ತ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿರುವ, ರಾಜಕೀಯ ದಿಗ್ಗಜರನ್ನೂ ಕಾಯುವಂತೆ ಮಾಡಿರುವ ರಜನಿಗೆ ಏನೇನು ಸಲಹೆ ನೀಡಿದ್ದಾರೆ... ಮುಂದೆ ಓದಿ.
ರಾಜಕೀಯದಲ್ಲಿ ಎತ್ತರೆತ್ತರಕ್ಕೇರಬೇಕು
ತಮಿಳುನಾಡಿನ ಟೈಟಾನಿಕ್ ಹೀರೋ, ಭಾರತದ ಮಗ ರಜನಿಕಾಂತ್ ಎಂಬ ಸೂಪರ್ ಸ್ಟಾರ್ ರಾಜಕೀಯರಂಗದಲ್ಲಿ ಉದಯವಾಗಬೇಕು. ರಜನಿಕಾಂತ್ ಅವರು ರಾಜಕೀಯದಲ್ಲಿ ಎತ್ತರೆತ್ತರಕ್ಕೇರಬೇಕು. ಇದೇ ಸರಿಯಾದ ಸಮಯ, ಇದಕ್ಕಿಂತ ಸಮಯ ಇನ್ನೊಂದಿಲ್ಲ.
ಇಡೀ ದೇಶ ರಜನಿಗಾಗಿ ಕಾದಿದೆ
ಅವರ ಅಭಿಮಾನಿಗಳು ಮಾತ್ರವಲ್ಲ, ಇಡೀ ದೇಶ ರಜನಿಕಾಂತ್ ಅವರ ಆಗಮನಕ್ಕಾಗಿ ಉಸಿರು ಬಿಗಿಹಿಡಿದು ಕಾದು ಕುಳಿತಿದೆ. ದೇಶ ಮತ್ತು ಜನತೆಯ ಭವಿಷ್ಯತ್ತನ್ನು ಗಮನದಲ್ಲಿಟ್ಟುಕೊಂಡು ರಜನಿಕಾಂತ್ ಅವರು ಆದಷ್ಟು ಬೇಗ ಸಕ್ರೀಯ ರಾಜಕಾರಣಕ್ಕೆ ಅವರು ಧುಮುಕಲೇಬೇಕು.[ಶಿಸ್ತು ಉಲ್ಲಂಘಿಸಿದರೆ ಅಭಿಮಾನಿ ಸಂಘದಿಂದ ಗೇಟ್ ಪಾಸ್: ರಜನಿಕಾಂತ್]
ಬೇರೆಯವರೇ ನಿಮ್ಮನ್ನು ಸೇರಲಿ
ಭಾರತದ ಜನರೆಲ್ಲ ನಿಮ್ಮೊಂದಿಗಿದ್ದಾರೆ ಮತ್ತು ನಿಮ್ಮ ಪಕ್ಷವನ್ನು ಸೇರಲು ಕೌತುಕದಿಂದ ಕಾದಿದ್ದಾರೆ. ನೀವು ಬೇರೆಯವರನ್ನು ಸೇರುವ ಬದಲು, ಬೇರೆಯವರೇ ನಿಮ್ಮನ್ನು ಸೇರಲಿ. ನಿಮ್ಮ ಮನೆಯವರನ್ನು, ಪ್ರೀತಿಪಾತ್ರರನ್ನು, ಹಿತೈಷಿಗಳನ್ನು, ತಜ್ಞರನ್ನು ಸಂಪರ್ಕಿಸಿ ನಿರ್ಧಾರ ತೆಗೆದುಕೊಳ್ಳಿ. ಸೂಕ್ತ ನಿರ್ಧಾರ ಆದಷ್ಟು ಬೇಗನೆ ತೆಗೆದುಕೊಂಡರೆ ಒಳ್ಳೆಯದು.[ಬಿಜೆಪಿ ಬಾಗಿಲು ತೆರೆದಿದೆ, ಬರಬೇಕೋ ಬಿಡಬೇಕೋ ರಜನಿ ನಿರ್ಧರಿಸಲಿ: ಅಮಿತ್ ಶಾ]
ನನ್ನನ್ನು ಸಂಪೂರ್ಣವಾಗಿ ನಂಬಿ
ಒಬ್ಬ ಸ್ನೇಹಿತನಾಗಿ, ಬೆಂಬಲಿಗನಾಗಿ, ಹಿತೈಷಿಯಾಗಿ ಮತ್ತು ಮಾರ್ಗದರ್ಶಿಯಾಗಿ ನಾನು ಯಾವತ್ತಿಗೂ ನಿಮ್ಮೊಂದಿಗಿದ್ದೇನೆ. ಈಗಲೂ ಕೂಡ ನಾನು ಯಾವಾಗಲೂ ಸಹಾಯಕ್ಕೆ ಸಿದ್ಧನಿದ್ದೇನೆ. ನಾನು ನಂಬಿಗಸ್ತ. ನನ್ನನ್ನು ಸಂಪೂರ್ಣವಾಗಿ ನಂಬಿ. ನಾನು ಯಾವುದೇ ಸಮಯದಲ್ಲಿಯೂ ಲಭ್ಯ. ನೀವು ಮಾತ್ರ ರಾಜಕೀಯಕ್ಕೆ ಬನ್ನಿ.[ನಾನು ಅಪ್ಪಟ್ಟ ತಮಿಳಿಗ : ಸ್ವಾಮಿಗೆ ತಿರುಗೇಟು ಕೊಟ್ಟ ರಜನಿ]