ಬಯಲು ಶೌಚಕ್ಕೆ ತೆರಳಿದ ಮಹಿಳೆಯರ ಫೋಟೋ ತೆಗೆಯದಂತೆ ತಡೆದ ವ್ಯಕ್ತಿ ಕೊಲೆ
ಜೈಪುರ್, ಜೂನ್ 17: ಬಯಲಿನಲ್ಲಿ ಶೌಚ ಮಾಡುತ್ತಿದ್ದ ಮಹಿಳೆಯ ಫೋಟೋ ತೆಗೆಯಲು ಯತ್ನಿಸುತ್ತಿದ್ದವರನ್ನು ತಡೆಯಲು ಯತ್ನಿಸಿದ ಐವತ್ತೈದು ವರ್ಷದ ವ್ಯಕ್ತಿಯನ್ನು ಹೊಡೆದು ಕೊಲ್ಲಲಾಗಿದೆ.
ಬಯಲಿನಲ್ಲಿ ಶೌಚ ಮಾಡುತ್ತಿದ್ದ ಮಹಿಳೆಯ ಫೋಟೋ ಕ್ಲಿಕ್ಕಿಸಲು ಮುನ್ಸಿಪಲ್ ಕೌನ್ಸಿಲ್ ನ ಅದಿಕಾರಿಗಳು ಪ್ರಯತ್ನಿಸಿದ್ದಾರೆ. ಆಗ ಅವರನ್ನು ತಡೆಯಲು ಯತ್ನಿಸಿದ ವ್ಯಕ್ತಿಗೆ ಕೋಲಿನಿಂದ ಬಡಿದಿದ್ದಾರೆ. ಒದ್ದಿದ್ದಾರೆ, ಗುದ್ದಿದ್ದಾರೆ. ಆ ನಂತರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಆತ ಹೃದಯ ವೈಫಲ್ಯದಿಂದ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಸಲಾಗಿದೆ. ಆರೋಪಿಗಳ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಲಾಗಿದೆ. ಆದರೆ ಈ ವರೆಗೆ ಯಾರನ್ನೂ ಬಂಧಿಸಿಲ್ಲ. ಶುಕ್ರವಾರ ಬೆಳಗ್ಗೆ ಬಗ್ವಾಸ ಕಚಿ ಬಸ್ತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಪ್ರತಾಪ್ ಘರ್ ನ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೆಳಗಿನ ಪ್ರವಾಸದಲ್ಲಿದ್ದರು. ಆ ವೇಳೆ ಮಹಿಳೆಯರು ಬಯಲು ಪ್ರದೇಶದಲ್ಲಿ ಶೌಚ ಮಾಡುತ್ತಿರುವುದರ ಫೋಟೋ ತೆಗೆಯಲು ಮುಂದಾಗಿದ್ದಾರೆ. ಆಗ ಜಾಫರ್ ಖಾನ್ ಎಂಬಾತ ಮಧ್ಯಪ್ರವೇಶಿಸಿ, ಫೋಟೋ ತೆಗೆಯಬೇಡಿ ಎಂದಿದ್ದಾರೆ.
ಆಗ ಅಧಿಕಾರಿಗಳು ಆತನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಮೃತರ ಸಹೋದರ ನೂರ್ ಮೊಹಮ್ಮದ್ ದೂರು ದಾಖಲಿಸಿದ್ದಾರೆ. ನಗರ ಪರಿಷದ್ ನ ಕಮಿಷನರ್ ಅಶೋಕ್ ಜೈನ್ ಎಂಬುವರು ಸೇರಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ.












Click it and Unblock the Notifications