Michaung Cyclone: ಮುಂದಿನ 24 ಗಂಟೆ ಭಾರೀ ಮಳೆ, ಶಾಲಾ-ಕಾಲೇಜುಗಳಿಗೆ ರಜೆ
ಚೆನೈ, ಡಿಸೆಂಬರ್ 03: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ಇಂದಿನಿಂದ (ಡಿಸೆಂಬರ್ 3) ತಮಿಳುನಾಡಿನ ಉತ್ತರ ಭಾಗ ಮತ್ತು ಆಂಧ್ರ ಪ್ರದೇಶದ ದಕ್ಷಿಣ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 24 ಗಂಟೆಗಳಲ್ಲಿ ಮಿಚುವಾಂಗ್ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಪುದುಚೇರಿಯ ಪೂರ್ವ-ಆಗ್ನೇಯಕ್ಕೆ ಸುಮಾರು 440 ಕಿಲೋ ಮೀಟರ್ ಮತ್ತು ಚೆನ್ನೈನ ಆಗ್ನೇಯಕ್ಕೆ 420 ಕಿಲೋ ಮೀಟರ್, ಆಂಧ್ರ ಪ್ರದೇಶದ ನೆಲ್ಲೂರಿನ ಆಗ್ನೇಯಕ್ಕೆ 740 ಕಿಲೋ ಮೀಟರ್ ದೂರದಲ್ಲಿ ಚಂಡಮಾರುತ ರೂಪಗೊಂಡಿದೆ.

ಚಂಡಮಾರುತದ ಗಾಳಿಯು ಗಂಟೆಗೆ 80 ರಿಂದ 90 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದ್ದು, ಈ ವೇಗ ಗಂಟೆಗೆ 100 ಕಿಲೋ ಮೀಟರ್ಗೆ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಕರಾವಳಿ ಭಾಗದ ಜನರು ಎಚ್ಚರಿಕೆ ವಹಿಸಬೇಕು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇನ್ನು ಭಾರೀ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಡಿಸೆಂಬರ್ 4 ರಂದು ವಿಲ್ಲುಪುರಂ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಅಲ್ಲದೇ ಚೆನ್ನೈ, ತಿರುವಲ್ಲೂರು, ಚೆಂಗಲ್ಪಟ್ಟು ಹಾಗೂ ಕಾಂಚೀಪುರಂ ಜಿಲ್ಲೆಗಳ ಕೆಲವು ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ.
ತಮಿಳುನಾಡು ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯ ಮತ್ತು ಜಿಲ್ಲಾ ಮಟ್ಟದ ತುರ್ತು ಕಾರ್ಯಾಚರಣೆ ಕೇಂದ್ರಗಳು ಹೆಚ್ಚುವರಿ ಸಿಬ್ಬಂದಿಯೊಂದಿಗೆ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ. ಸಹಾಯಕ್ಕಾಗಿ 1070 (ರಾಜ್ಯ), 1077 (ಜಿಲ್ಲೆ) ಮತ್ತು 94458 69848 (WhatsApp) ನಲ್ಲಿ ಸಂಪರ್ಕಿಸಬಹುದು ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

ತಮಿಳುನಾಡು ವಿಪತ್ತು ನಿರ್ವಹಣಾ ಪಡೆಯ 14 ತಂಡಗಳು, 350 ಸಿಬ್ಬಂದಿ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಒಂಬತ್ತು ತಂಡಗಳು ಮೈಲಾಡುತುರೈ, ನಾಗಪಟ್ಟಿಣಂ, ತಿರುವಳ್ಳೂರು, ಕಡಲೂರು, ವಿಲ್ಲುಪುರಂ, ಕಾಂಚೀಪಟುಪುರಂ, ಚೆನ್ನೈ ಮತ್ತು ಚೆಂಗಲ್ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಕರಾವಳಿ ಪ್ರದೇಶಗಳಲ್ಲಿ ಬೀಡುಬಿಟ್ಟಿವೆ.
ಇನ್ನು ಚೆನ್ನೈ ಒಂದರಲ್ಲೇ 162 ಪರಿಹಾರ ಕೇಂದ್ರಗಳು ಸಿದ್ಧವಾಗಿದ್ದು, ಒಂದು ಪರಿಹಾರ ಕೇಂದ್ರದಲ್ಲಿ 348 ಜನರಿಗೆ ವಸತಿ ಕಲ್ಪಿಸಲಾಗಿದೆ. ಅಲ್ಲದೆ, 714 ನೀರಿನ ಪಂಪ್ಗಳು ತಗ್ಗು ಪ್ರದೇಶಗಳಲ್ಲಿ ಬಳಕೆಗೆ ಸಿದ್ಧವಾಗಿವೆ. ಅಲ್ಲದೇ ಬೆಳೆ ನಾಶದ ಬಗ್ಗೆ ಯೋಚಿಸಿರುವ ಸರ್ಕಾರ ಗದ್ದೆಗಳಲ್ಲಿ ದಾಸ್ತಾನು ಮಾಡಿರುವ ಭತ್ತ ಒದ್ದೆಯಾಗದಂತೆ ನೋಡಿಕೊಳ್ಳುವಂತೆ ಹಾಗೂ ಲಭ್ಯವಿರುವ ಭತ್ತವನ್ನು ಸ್ಥಿತಿಗತಿ ಲೆಕ್ಕಿಸದೆ ಖರೀದಿಸುವಂತೆ ನಾಗರಿಕ ಸರಬರಾಜು ಇಲಾಖೆಗೆ ಸೂಚಿಸಿದೆ.












Click it and Unblock the Notifications