ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ತಗ್ಗಿದ ಮಳೆಯ ಅಬ್ಬರ
Recommended Video
ಬೆಂಗಳೂರು, ಜು.20: ಕಳೆದ ಒಂದು ತಿಂಗಳಿನಿಂದ ಕರಾವಳಿ, ದಕ್ಷಿಣ ಒಳನಾಡು, ಮಲೆನಾಡಿನಲ್ಲಿ ಸುರಿಯುತ್ತಿದ್ದ ಮುಂಗಾರು ಮಳೆಯ ಅಬ್ಬರ ಇದೀಗ ಸ್ವಲ್ಪ ಶಾಂತವಾಗಿದೆ. ಕಳೆದ ಎರಡು ದಿನಗಳಿಂದ ಮಳೆ ಕಡಿಮೆಯಾಗಿದ್ದ ದಿನದಲ್ಲಿ ಆಗಾಗ ಮೂರ್ನಾಲ್ಕು ಉತ್ತಮ ಮಳೆಯಾಗುತ್ತಿದೆ.
ಗುರುವಾರ ಮಂಗಳೂರಿನಲ್ಲಿ 12 ಸೆ.ಮೀ ಮಳೆಯಾಗಿದೆ. ಪಣಂಬೂರು, ಮೂಡಬಿದಿರೆ, ಕೊಲ್ಲೂರು, ಭಾಗಮಂಡಲ, ಆಗುಂಬೆಯಲ್ಲಿ ತಲಾ 9 ಸೆಂ.ಮೀ ಮಳೆಯಾಗಿದೆ. ಇನ್ನು 48 ಗಂಟೆಗಳಲ್ಲಿ ಕರಾವಳಿ ಭಾಗದಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕ ಕರಾವಳಿಯಲ್ಲಿ ವರುಣನ ಅಬ್ಬರಕ್ಕೆ ಕೊಂಚ ಬಿಡುವು?
ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆ ಈಗಲೂ ಸುರಿಯುತ್ತಿದೆ ಆದರೆ ಕೊಂಚ ಬಿಡುವು ನೀಡಿದೆ. ಚಿತ್ರದುರ್ಗ, ಹಾಸನ, ಕೋಲಾರ, ತುಮಕೂರು ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದೆ, ಬೆಂಗಳೂರಿನಲ್ಲಿ ಎಂದಿನಂತೆ ಮೋಡಕವಿದ ವಾತಾವರಣವಿರಲಿದ್ದು ಜಿನುಗು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಮುಂಗಾರು ಮಾರುತಗಳು ಮತ್ತೆ ಚುರುಕಾಗುವ ಮುನ್ಸೂಚನೆ ಇದೆ. ಆದ್ದರಿಂದ ಬೀದರ್, ಬೆಳಗಾವಿ, ಕಲಬುರ್ಗಿ ಜಿಲ್ಲೆಗಳೂ ಸಹ ಇಂದೂ ಮಳೆ ಕಾಣಿಸಿಸಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.
ಮಹಾರಾಷ್ಟ್ರ, ಗೋವಾ ಕಡೆಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ತಮಿಳುನಾಡು, ರಾಜಸ್ತಾನ, ಅಸ್ಸಾಂ, ಪಶ್ಚಿಮ ಬಂಗಾಳ, ಉತ್ತರಾಖಂಡ, ಗುಜರಾತ್, ತೆಲಂಗಾಣದಲ್ಲಿ ಭಾರಿ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.