ರೈಲು ತಡವಾದರೆ ಅಧಿಕಾರಿಗಳ ಬಡ್ತಿಗೆ ತಡೆ
ಬೆಂಗಳೂರು, ಜೂನ್ 4: ನಿಗದಿತ ಸಮಯಕ್ಕೆ ರೈಲ್ವೆ ಸೇವೆಯನ್ನು ಸಾರ್ವಜನಿಕರಿಗೆ ಕಲ್ಪಿಸಲು ರೈಲ್ವೆ ಇಲಾಖೆ ಹರಸಾಹಸ ಪಡುತ್ತಿವೆ. ರೈಲುಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ ಎನ್ನುವುದು ಬಹುತೇಕ ಪ್ರಯಾಣಿಕರ ದೂರು. ಇನ್ನುಮುಂದೆ ರೈಲು ತಡವಾಗಿ ಬಂದರೆ ಅದಕ್ಕೆ ಕಾರಣವಾಗುವ ಅಧಿಕಾರಿಗಳ ಬಡ್ತಿಗೆ ತೊಡಕಾಗಲಿದೆ.
ರೈಲು ವಿಳಂಬವಾಗದಂತೆ ಶಿಸ್ತನ್ನು ರೂಢಿಸಿಕೊಳ್ಳಲು ಒಂದು ತಿಂಗಳ ಗಡುವು ನೀಡಲಾಗಿದೆ. ನಂತರದ ದಿನಗಳಲ್ಲಿ ತಪ್ಪು ಮಾಡುವ ಅಧಿಕಾರಿಗಳ ಬಡ್ತಿಯನ್ನು ತಡೆ ಹಿಡಿಯಲಾಗುವುದು ಎಂದು ರೈಲ್ವೆ ಸಚಿವ ಪಿಯುಷ್ ಗೋಯೆಲ್ ಎಚ್ಚರಿಕೆ ನೀಡಿದ್ದಾರೆ. ಕಳೆದ ವಾರ ನಡೆದ ರೈಲ್ವೆ ವಲಯಗಳ ಪ್ರಧಾನ ವ್ಯವಸ್ಥಾಪಕ ಸಭೆಯಲ್ಲಿ ಈ ಸಂಗತಿಯನ್ನು ಸಚಿವರು ಹೇಳಿದ್ದಾರೆ,
ಕಾಯ್ದಿರಿಸಿದ ರೈಲ್ವೆ ಟಿಕೆಟ್ ಖಚಿತತೆ ಮಾಹಿತಿಗೆ ಹೊಸ ಸಾಫ್ಟ್ವೇರ್
2017-18ನೇ ಸಾಲಿನಲ್ಲಿ ಶೇ.30ರಷ್ಟು ರೈಲುಗಳು ತಡವಾಗಿ ಬಂದಿವೆ. ಶೇ.49ರಷ್ಟು ಅಧಿಕಾರಿಗಳ ಅಶಿಸ್ತು ದಾಖಲಾಗಿದೆ. ಭಾರತೀಯ ರೈಲ್ವೆಯ ಐಆರ್ಟಿಸಿ ಬದಲಾಗಿದ್ದು, ಹೊಸ ರೂಪ ಪಡೆದುಕೊಂಡಿದೆ. ಇನ್ನುಮುಂದೆ ಜನರಿಗೆ ಸೀಟು ಲಭ್ಯವಾಗುವ ಶೇಕಡಾವಾರು ಚಾನ್ಸ್ ಬಗ್ಗೆಯೂ ಮುನ್ಸೂಚನೆ ನೀಡಲಿದೆ. ಕಾಯ್ದಿರಿಸಿದ ಟಿಕೆಟ್ ಕುರಿತು ಇನ್ನು ಮಾಹಿತಿ ಸುಲಭವಾಗಿ ದೊರೆಯಲಿದೆ.
ವೇಟಿಂಗ್ ಲಿಸ್ಟ್ ಅಥವಾ ಆರ್ಎಸಿಯಲ್ಲಿರುವ ಪ್ರಯಾಣಿಕರಿಗೆ ಸೀಟು ಖಾತ್ರಿಯಾಗುವ ಸಂಭವನೀಯತೆಯನ್ನು ತಿಳಿಸುವಂಥ ತಂತ್ರಾಂಶವನ್ನು ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರ ಅಭಿವೃದ್ಧಿ ಪಡಿಸಿದೆ. ಈ ತಂತ್ರಾಂಶವು ಸೀಟು ಖಾತ್ರಿಗೊಳ್ಳುವ ಸಂಭವನೀಯತೆ ಎಷ್ಟು ಎಂಬುದರ ಮಾಹಿತಿ ಒದಗಿಸುತ್ತದೆ.