ಕಾಶ್ಮೀರ, ಪಾಕಿಸ್ತಾನದ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ವೈರಲ್
ನವದೆಹಲಿ, ಆಗಸ್ಟ್ 28: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ-ಮಾನ ರದ್ದು ಮಾಡಿದ ವಿಷಯದ ಬಗ್ಗೆ ಹಲವು ದಿನಗಳ ಬಳಿಕ ಸ್ಪಷ್ಟ ನಿಲುವು ತಳೆದಂತಿರುವ ರಾಹುಲ್ ಗಾಂಧಿ ಈ ಬಗ್ಗೆ ಇಂದು ಟ್ವೀಟ್ ಮಾಡಿದ್ದಾರೆ.
'ಹಲವು ಕಾರಣಗಳಿಗೆ ಸರ್ಕಾರದೊಂದಿಗೆ ಭಿನ್ನಮತ ಹೊಂದಿದ್ದೇನೆ, ಆದರೆ ಕಾಶ್ಮೀರ ನಮ್ಮದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ, ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನ ಸೇರಿದಂತೆ ಯಾವುದೇ ರಾಷ್ಟ್ರ ಮಧ್ಯಸ್ಥಿಕೆ ವಹಿಸುವ ಅವಶ್ಯಕತೆ ಇಲ್ಲ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ವಿಧಿ 370 ರದ್ದತಿಗೆ ಬೆಂಬಲ ಸೂಚಿಸಲು ಕಾರಣ ಬಿಚ್ಚಿಟ್ಟ ಮಾಯಾವತಿ
ಕಾಶ್ಮೀರದಲ್ಲಿ ಹಿಂಸಾಚಾರ ಇದೆ. ಈ ಹಿಂಸಾಚಾರಕ್ಕೆ ಪಾಕಿಸ್ತಾನವೇ ಕಾರಣ ಎಂದು ಹೇಳಿರುವ ರಾಹುಲ್ ಗಾಂಧಿ, ಪಾಕಿಸ್ತಾನವು ಭಯೋತ್ಪಾದಕರ ಪ್ರಮುಖ ಬೆಂಬಲಿಗ ರಾಷ್ಟ್ರ, ಇದರ ಬೆಂಬಲದಿಂದಲೇ ಕಾಶ್ಮೀರದಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಈ ಎರಡು ಟ್ವೀಟ್ ಭಾರಿ ವೈರಲ್ ಆಗಿದ್ದು, 'ರಾಹುಲ್ ಗಾಂಧಿಗೆ ಈಗಲಾದರೂ ಬುದ್ಧಿ ಬಂದಿದೆ' ಎಂದು ಕಾಂಗ್ರೆಸ್ ವಿರೋಧಿಗಳು ಮೂದಲಿಸಿದ್ದಾರೆ. ಕಾಂಗ್ರೆಸ್ ಪರವಾದವರು, 'ಕಾಶ್ಮೀರದ ಬಗ್ಗೆ ಕಾಂಗ್ರೆಸ್ ಮುಂಚಿನಿಂದಲೂ ಇದೇ ನಿಲವನ್ನು ಹೊಂದಿದೆ' ಎಂದಿದ್ದಾರೆ.
ಕಾಶ್ಮೀರಕ್ಕೆ ಬರಬೇಡಿ: ರಾಹುಲ್ ಗಾಂಧಿಗೆ ಮನವಿ
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ರದ್ದು ಮಾಡುವ ವಿಷಯದ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಸಿದ್ದಾಗ ಕಾಂಗ್ರೆಸ್ ಪಕ್ಷವು ಸ್ಪಷ್ಟ ನಿಲವನ್ನು ವಿಷಯದ ಬಗ್ಗೆ ತಳೆಯಲು ವಿಫಲವಾಗಿತ್ತು. ಪಕ್ಷದ ನಾಯಕರು ಒಬ್ಬೊಬ್ಬರು ಒಂದೊಂದು ಮಾದರಿ ಹೇಳಿಕೆಗಳನ್ನು ನೀಡಿದ್ದರು. ಆದರೆ ಈಗ ರಾಹುಲ್ ಗಾಂಧಿ ಟ್ವೀಟ್ ಬಳಿಕ ಕಾಶ್ಮೀರ ವಿಷಯದಲ್ಲಿ ಕಾಂಗ್ರೆಸ್ನ ನಿಲವು ಸ್ಪಷ್ಟವಾಗುತ್ತಿದೆ.
ಶಶಿ ತರೂರ್ ಸಹ ರಾಹುಲ್ ಗಾಂಧಿ ಅವರ ಟ್ವೀಟ್ ಅನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ನಿಲವು ಸ್ಪಷ್ಟವಾಗಿದ್ದು, ಜಮ್ಮು ಕಾಶ್ಮೀರ ಭಾರತದ ಭಾಗ, ಆದರೆ ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನವನ್ನು ರದ್ದು ಮಾಡಿದ ರೀತಿ ಸರಿಯಿಲ್ಲವೆಂಬದಷ್ಟೆ ಕಾಂಗ್ರೆಸ್ನ ವಾದ ಎಂದು ಹೇಳಿದ್ದಾರೆ.