ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಆದರೆ... ರಾಹುಲ್ ವಾಗ್ಬಾಣ
ನವದೆಹಲಿ, ಜೂನ್ 21: ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
"ನೈಸರ್ಗಿಕ ವಿಕೋಪ ನಿರ್ವಹಣೆ ಕಾನೂನಿನ ಪ್ರಕಾರ, ಪರಿಹಾರವನ್ನು ಭೂಕಂಪ, ಪ್ರವಾಹದಂಥ ನೈಸರ್ಗಿಕ ವಿಕೋಪಗಳಿಂದಾದ ಸಾವುಗಳಿಗೆ ನೀಡಲಾಗುತ್ತದೆ. ಹೀಗಿದ್ದಾಗ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವುದು ತರವಲ್ಲ" ಎಂದು ಕೇಂದ್ರ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಸರ್ಕಾರ ನೀಡುವ ಪರಿಹಾರ, ಆ ಕುಟುಂಬಕ್ಕೆ ಸಣ್ಣದಾದ ನೆರವು ನೀಡಬಹುದು. ಅದನ್ನೂ ಮೋದಿ ಸರ್ಕಾರ ನೀಡಲು ಸಿದ್ಧವಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕೊರೊನಾ ಸೋಂಕಿನ ಹರಡುವಿಕೆ ತಡೆಗೆ ಸಾಕಷ್ಟು ವೆಚ್ಚಗಳಾಗಿವೆ, ತೆರಿಗೆಗಳನ್ನೂ ಕೆಲವೆಡೆ ತಗ್ಗಿಸಲಾಗಿದೆ. ಈ ಸಮಯದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಲಕ್ಷಾಂತರ ಮಂದಿಗೆ ಪರಿಹಾರ ನೀಡಲು ಸಾಧ್ಯವಿಲ್ಲ" ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.
"ಆರಂಭದಲ್ಲಿ ಕೋವಿಡ್ ಸಾಂಕ್ರಾಮಿಕದಿಂದ ಬಳಲಿದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲಿಲ್ಲ. ನಂತರ ಇದ್ದಕ್ಕಿದ್ದಂತೆ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿತು. ಆಗಲೂ ಸರ್ಕಾರ ಅಸೂಕ್ಷ್ಮತೆ ತೋರಿತ್ತು. ಸಾಂಕ್ರಾಮಿಕ ರೋಗದ ಬಗ್ಗೆ ಸುಳ್ಳು ಅಂಕಿ ಅಂಶಗಳನ್ನು ನೀಡುವ ಮೂಲಕ ಸರ್ಕಾರ ಕ್ರೌರ್ಯ ಪ್ರದರ್ಶಿಸಿತ್ತು. ಮತ್ತೆ ಅದೇ ಧಾಟಿಯನ್ನು ಮುಂದುವರೆಸಿದೆ" ಎಂದು ದೂರಿದ್ದಾರೆ.












Click it and Unblock the Notifications