ಅಲ್ಲಿ ರಾಮಭಕ್ತ, ಇಲ್ಲಿ ಶಿವಭಕ್ತ!: ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ 'ಭಕ್ತ'ನ ಅವತಾರ
ಭೋಪಾಲ್, ಅಕ್ಟೋಬರ್ 9: ಮಧ್ಯಪ್ರದೇಶದಲ್ಲಿ ಸತತ ಮೂರು ಅವಧಿಗಳಿಂದ ಅಧಿಕಾರ ಹಿಡಿಯಲು ಸಾಧ್ಯವಾಗದೆ ಕಂಗೆಟ್ಟಿರುವ ಕಾಂಗ್ರೆಸ್, ಈ ಬಾರಿ ಶತಾಯಗತಾಯ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಹೀಗಾಗಿ 2003ರಿಂದ ಹಿಂದುತ್ವ ಕಾರ್ಯಸೂಚಿಯ ವಿರುದ್ಧ ಹೋರಾಟ ಮಾಡುವ ಚುನಾವಣಾ ತಂತ್ರ ನಿಭಾಯಿಸುತ್ತಿದ್ದ ಪಕ್ಷವೀಗ ಯೂಟರ್ನ್ ತೆಗೆದುಕೊಂಡಿದೆ.
ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಅಲ್ಲಿನ ಪಕ್ಷ 'ಟೆಂಪಲ್ ರನ್' ತಂತ್ರದ ಮೊರೆ ಹೊಕ್ಕಿದೆ. ವಿಶೇಷವಾಗಿ ರಾಹುಲ್ ಗಾಂಧಿ ಅವರನ್ನು 'ದೈವ ಭಕ್ತ'ರಂತೆ ಚಿತ್ರಿಸುವ ಮೂಲಕ ತಾವು ಹಿಂದುತ್ವದ ವಿರೋಧಿಗಳಲ್ಲ ಮತ್ತು ಹಿಂದೂಗಳ ಪರ ಎಂದು ಬಿಂಬಿಸುವ ಪ್ರಯತ್ನಕ್ಕೆ ಮುಂದಾಗಿದೆ.
ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಭಾವನೆಯನ್ನು ತೊಲಗಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮುಖಂಡರು ದೇವಸ್ಥಾನಗಳಿಗೆ ಸತತ ಭೇಟಿ ನೀಡಿ ಪೂಜೆ ಸಲ್ಲಿಸುವ ಚಟುವಟಿಕೆಗಳನ್ನು ಹೆಚ್ಚು ಮಾಡಿದ್ದರು. ಗುಜರಾತ್, ಉತ್ತರ ಪ್ರದೇಶ ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭಗಳಲ್ಲಿ ಇದು ಸಾಮಾನ್ಯ ಎನಿಸಿತ್ತು. ತಮ್ಮ ದೇವಸ್ಥಾನ ಭೇಟಿಯನ್ನು ರಾಹುಲ್, ಮಧ್ಯಪ್ರದೇಶದ ಚುನಾವಣೆಗೂ ವಿಸ್ತರಿಸಿದ್ದಾರೆ.

ಒಂದು ಕಡೆ ರಾಮಭಕ್ತ, ಇನ್ನೊಂದೆಡೆ ಶಿವಭಕ್ತ
ಮಾನಸ ಸರೋವರದಲ್ಲಿನ ಪಕ್ಷದ ಪ್ರಚಾರ ಪೋಸ್ಟರ್ಗಳಲ್ಲಿ ರಾಹುಲ್ ಗಾಂಧಿ 'ಶಿವ ಭಕ್ತ'ನಾಗಿ ಕಾಣಿಸಿಕೊಂಡಿದ್ದರೆ, ಚಿತ್ರಕೂಟದಲ್ಲಿ 'ರಾಮ ಭಕ್ತ'ನಾಗಿದ್ದಾರೆ. ಜಬಲ್ಪುರ ಕ್ಷೇತ್ರದಲ್ಲಿ ಅವರು ಮಾತೆ ನರ್ಮದಾಳ ಪರಮಭಕ್ತ. ದೇವರ ಎದುರು ಕೈಮುಗಿದು ನಿಂತ ಭಕ್ತನಂತೆ ರಾಹುಲ್ ಅವರನ್ನು ಚಿತ್ರಿಸಿರುವ ಪೋಸ್ಟರ್ಗಳು ಎಲ್ಲೆಡೆ ರಾರಾಜಿಸುತ್ತಿವೆ.
| Array |
ಪಂಡಿತ್ ಆದ ರಾಹುಲ್ ಗಾಂಧಿ
ಮಧ್ಯಪ್ರದೇಶದಲ್ಲಿ ಹಿಂದೂಗಳ ಮತಗಳನ್ನು ಸೆಳೆಯಲು ಕಾಂಗ್ರೆಸ್ ಗೋರಕ್ಷಣೆ, ಪ್ರತಿ ಪಂಚಾಯಿತಿಯಲ್ಲಿ ಗೋಶಾಲೆಗಳ ನಿರ್ಮಾಣದ ಭರವಸೆ ನೀಡಿದೆ. ಮಧ್ಯಪ್ರದೇಶದಲ್ಲಿ ಶ್ರೀರಾಮ ಕಳೆದ ದಿನಗಳನ್ನು ನೆನಪಿಸುವ ಪಾದಯಾತ್ರೆಯನ್ನು ಸಹ ಆಯೋಜಿಸಿದೆ. ಅಲ್ಲದೆ, ತನ್ನ ಪೋಸ್ಟರ್ಗಳಲ್ಲಿ ಕಾಂಗ್ರೆಸ್, ರಾಹುಲ್ ಗಾಂಧಿ ಅವರನ್ನು 'ಪಂಡಿತ್' ಎಂಬುದಾಗಿ ಚಿತ್ರಿಸಿವೆ. ಈ ಮೂಲಕ ಅವರ ಮುತ್ತಜ್ಜ ಜವಹರಲಾಲ್ ನೆಹರೂ ಅವರ 'ಪಂಡಿತ್' ವಿಶೇಷಣವನ್ನು ಬಳಸಿಕೊಳ್ಳುತ್ತಿದೆ.

ರಾಮನ ಹೆಜ್ಜೆ ಗುರುತು
ಚಿತ್ರಕೂಟದಲ್ಲಿನ ಕಮತಾನಾಥ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ರಾಹುಲ್ ಗಾಂಧಿ ಅವರ ಅಧಿಕೃತ ಪ್ರಚಾರ ಆರಂಭವಾಗಿದೆ. ಈ ಪ್ರದೇಶದಲ್ಲಿ ರಾಮ ವನವಾಸದ 14 ವರ್ಷಗಳ ಪೈಕಿ 11 ವರ್ಷಗಳನ್ನು ಕಳೆದಿದ್ದ ಎನ್ನುವುದು ಪ್ರತೀತಿ. ಕಾಂಗ್ರೆಸ್ ಮುಖಂಡ ಹರಿಶಂಕರ್ ಶುಕ್ಲಾ ನೇತೃತ್ವದ ತಂಡವೊಂದು ಸಾಧುಗಳ ಜತೆಗೂಡಿ ಈಗ ಚಿತ್ರಕೂಟದಿಂದ ಅಮರಕಂಟಕ್ವರೆಗೆ ಶ್ರೀರಾಮನ ಪ್ರಯಾಣದ ಮಾರ್ಗವನ್ನು ಕಂಡುಕೊಳ್ಳುವ ಕೆಲಸ ಮಾಡುತ್ತಿದೆ.
| Array |
ಧಾರ್ಮಿಕ ಪ್ರವಾಸಿ ತಾಣ!
ತನ್ನನ್ನು ಅಧಿಕಾರಕ್ಕೆ ತಂದರೆ ಮಧ್ಯಪ್ರದೇಶವನ್ನು 'ಧಾರ್ಮಿಕ ಕೇಂದ್ರ'ವನ್ನಾಗಿ ಪರಿವರ್ತಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಬಿಜೆಪಿ ಧರ್ಮವನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತದೆ. ಆದರೆ, ಕಾಂಗ್ರೆಸ್ ನಿಜಕ್ಕೂ ರಾಜ್ಯವನ್ನು ಧಾರ್ಮಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಿದೆ ಎಂದು ಹೇಳಿಕೊಂಡಿದೆ.
|
ಬಿಜೆಪಿಗೇ ಶ್ರೇಯಸ್ಸು
ಕಳೆದ ಐದು ವರ್ಷಗಳಲ್ಲಿ ರಾಹುಲ್ ಗಾಂಧಿ ಅವರು ಬಿಜೆಪಿಯ ಭಾಷೆಯಲ್ಲಿ ಉತ್ತರ ನೀಡಲು ಕಲಿತಿದ್ದಾರೆ. ಇನ್ನೂ ಹೆಚ್ಚಿನ ಹಿಂದುತ್ವದೊಂದಿಗೆ ಬಿಜೆಪಿಯ ಹಿಂದುತ್ವ ಅಜೆಂಡಾಕ್ಕೆ ಎದಿರೇಟು ನೀಡುತ್ತಿದ್ದಾರೆ. ಅವರು ಭ್ರಷ್ಟಾಚಾರ, ಹಣದುಬ್ಬರ, ನಿರುದ್ಯೋಗ ಮಾತ್ರವಲ್ಲದೆ, ಹಿಂದುತ್ವದ ವಿಚಾರದಲ್ಲಿಯೂ ಹೆಚ್ಚು ಪರಿಣಾಮಕಾರಿಯಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ಅವರನ್ನು ಹಿಂದೂವಾಗಿ ಪರಿವರ್ತಿಸಿದ ಶ್ರೇಯಸ್ಸು ಬಿಜೆಪಿಗೆ ಸೇರುತ್ತದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.












Click it and Unblock the Notifications