ರಾಹುಲ್ ಗಾಂಧಿಗೆ ಮಾನಸಿಕ ಅಸ್ಥಿರತೆ: ಉಮಾ ಭಾರತಿ ಲೇವಡಿ
ಭೋಪಾಲ್, ಆಗಸ್ಟ್ 27: ಆರೆಸ್ಸೆಸ್ ಅನ್ನು ಮುಸ್ಲಿಂ ಬ್ರದರ್ಹುಡ್ಗೆ ಹೋಲಿಸಿದ್ದಲ್ಲದೆ, 1984ರಲ್ಲಿ ನಡೆದ ಸಿಖ್ ವಿರೋಧಿ ನರಮೇಧದಲ್ಲಿ ಕಾಂಗ್ರೆಸ್ ಪಾತ್ರವಿರಲಿಲ್ಲ ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂದು ಕೇಂದ್ರ ಸಚಿವೆ ಉಮಾ ಭಾರತಿ ವಾಗ್ದಾಳಿ ನಡೆಸಿದ್ದಾರೆ.
'ರಾಹುಲ್ ಏನು ಮಾತನಾಡುತ್ತಾರೆ, ಏನು ಮಾಡುತ್ತಾರೆ ಎಂಬುದನ್ನು ಸಂಸತ್ನಲ್ಲಿ ನಾವೆಲ್ಲರೂ ನೋಡಿದ್ದೇವೆ. ಆದರೆ, ಲಂಡನ್ನಲ್ಲಿ ಅವರು ನೀಡಿದ ಹೇಳಿಕೆ ಕಾಂಗ್ರೆಸ್ಸಿಗರಿಗೂ ಆಘಾತ ಮೂಡಿಸಿದೆ. 1984ರ ಸಿಖ್ ವಿರೋಧಿ ನರಮೇಧದಲ್ಲಿ ಕಾಂಗ್ರೆಸ್ ಪಾತ್ರ ಇರಲಿಲ್ಲ ಎಂಬ ರಾಹುಲ್ ಹೇಳಿಕೆ ಅಪ್ಪಟ ಸುಳ್ಳು.
ಏಕೆಂದರೆ ಗಲಭೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳೂ ದಾಖಲಾಗಿರುವುದು ಕಾಂಗ್ರೆಸ್ ನಾಯಕರ ವಿರುದ್ಧವೇ. ರಾಹುಲ್ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಮತ್ತು ಅವರಿಗೆ ಬುದ್ದಿ ನೀಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಉಮಾ ಭಾರತಿ ಹೇಳಿದ್ದಾರೆ.

ಲಂಡನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಆರೆಸ್ಸೆಸ್ಅನ್ನು ಮುಸ್ಲಿಂ ಬ್ರದರ್ಹುಡ್ ಸಂಘಟನೆಗೆ ಹೋಲಿಸಿದ್ದರು. ಸಂಘ ಪರಿವಾರವು ಭಾರತದ ಪರಿಸರವನ್ನೇ ಬದಲಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.
ಮೋತಿಲಾಲ್ ನೆಹರೂ, ಜವಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರಂತಹ ಕಟ್ಟಾಳುಗಳಿದ್ದ ಬೃಹತ್ ಇತಿಹಾಸವನ್ನು ಕಾಂಗ್ರೆಸ್ ಹೊಂದಿದೆ. ಆದರೆ, ಇಂದು ಮಾನಸಿಕ ಅಸ್ಥಿರತೆ ಹೊಂದಿರುವ ವ್ಯಕ್ತಿ ಪಕ್ಷವನ್ನು ನಡೆಸುತ್ತಿದ್ದಾರೆ ಎಂದು ಉಮಾ ಭಾರತಿ ಲೇವಡಿ ಮಾಡಿದ್ದಾರೆ.
1984ರಲ್ಲಿ ವಾಸ್ತವವಾಗಿ ಏನಾಗಿತ್ತು ಎನ್ನುವುದು ರಾಹುಲ್ ಗಾಂಧಿ ಅವರಿಗೆ ತಿಳಿದಿಲ್ಲ. ಎಲ್ಲಿ ಏನನ್ನು ಹೇಳುತ್ತಿದ್ದೇನೆ ಎಂಬ ಅರಿವೇ ಇಲ್ಲದ ವ್ಯಕ್ತಿ ಮಾನಸಿಕವಾಗಿ ಆರೋಗ್ಯವಂತನಾಗಿಲ್ಲ ಎಂದು ಉಮಾ ಪುನರುಚ್ಚರಿಸಿದರು.












Click it and Unblock the Notifications