ಗಲಭೆ ಪೀಡಿತ ಮಂದಸೌರ್ ಗೆ ಆರ್ ಎಎಫ್ ರವಾನೆ
ಗಲಭೆ ಪೀಡಿತ ಮಧ್ಯಪ್ರದೇಶದ ಮಂದಸೌರ್ ನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಕ್ಷಿಪ್ರ ಕಾರ್ಯಾಚರಣೆ ಪಡೆ ರವಾನೆ. ರೈತರ ಪ್ರತಿಭಟನೆಯಿಂದಾಗಿ ಹೈರಾಣಾಗಿರುವ ಮಂದಸೌರ್. ಜೂನ್ 7ರಂದು ನಡೆದ ಪೊಲೀಸ್ ಗೋಲಿಬಾರ್ ನಲ್ಲಿ ಐವರು ರೈತರು ಸಾವಿಗೀಡಾಗಿದ್ದರು.
ನವದೆಹಲಿ/ಮಂದಸೌರ್, ಜೂನ್ 8: ಗಲಭೆ ಪೀಡಿತ ಮಂದಸೌರ್ ಜಿಲ್ಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್ ಎಎಫ್) ನಿಯೋಜಿಸಲಾಗಿದೆ.
ಜೂ. 7ರಂದು ನಡೆದಿದ್ದ ರೈತರ ಪ್ರತಿಭಟನೆ ಹಿಂಸಾರೂಪಕ್ಕೆ ತಾಳಿದ್ದ ಹಿನ್ನೆಲೆಯಲ್ಲಿ ಪೊಲೀಸರು ಗೋಲೀಬಾರ್ ನಡೆಸಿದ್ದರು. ಆ ಗೋಲಿಬಾರ್ ನಲ್ಲಿ ಐವರು ರೈತರು ಮೃತಪಟ್ಟಿದ್ದರು.[ರಾಹುಲ್ ಗಾಂಧಿ ಮಂಡಸೌರ್ ಪ್ರವೇಶಕ್ಕೆ ಪೊಲೀಸ್ ನಕಾರ]
ಈ ಹಿನ್ನೆಲೆಯಲ್ಲಿ, ಅಲ್ಲಿನ ಪರಿಸ್ಥಿತಿ ಮತ್ತಷ್ಟು ಪ್ರಕ್ಷುಬ್ಧವಾಗಿದೆ. ಹಾಗಾಗಿ, ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಲು 100 ಸೈನಿಕರುಳ್ಳ ಆರ್ ಎಎಫ್, ಜಿಲ್ಲಾ ಕೇಂದ್ರಕ್ಕೆ ರವಾನಿಸಲಾಗಿದೆ. ಅಲ್ಲಿಂದ ಸೈನಿಕರು, ಗಲಭೆ ಪೀಡಿತವಾಗಿರುವ ಪಿಪ್ಲಿಯಾಮಂಡಿ ಪ್ರಾಂತ್ಯಕ್ಕೂ ಹೋಗಲಿದ್ದಾರೆ.
ಆರ್ ಎಎಫ್ ಜತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಗಲಭೆ ಪೀಡಿತ ಸ್ಥಳದಲ್ಲಿ ಮೊಕ್ಕಾಂ ಹೂಡಿ, ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನಿಸಲಿದ್ದಾರೆ.
ಗೋಲಿಬಾರ್ ನಡೆದ ಹಿನ್ನೆಲೆಯಲ್ಲಿ ಗುರುವಾರ ಮಂದಸೌರ್ ಜಿಲ್ಲೆಯ ಜಿಲ್ಲಾಧಿಕಾರಿ ಸ್ವತಂತ್ರ ಕುಮಾರ್ ಸಿಂಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಒ.ಪಿ. ತ್ರಿಪಾಠಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.