ದೀಪಾವಳಿ ಸಮಯದಲ್ಲೂ ಭಕ್ತಾದಿಗಳಿಗೆ ಜಗನ್ನಾಥನ ದರ್ಶನ ಭಾಗ್ಯವಿಲ್ಲ
ಪುರಿ, ಅಕ್ಟೋಬರ್ 14: ಹಿಂದುಗಳ ಪವಿತ್ರ ಯಾತ್ರಾಸ್ಥಳ ಪುರಿಯಲ್ಲಿ ಇನ್ನೂ ಕೋವಿಡ್ 19 ಮಾರ್ಗಸೂಚಿಗಳು ಬಿಗಿಯಾಗಿವೆ. ದಸರಾ ಸಂದರ್ಭದಲ್ಲಿ ಪುರಿ ಜಗನ್ನಾಥ ದೇಗುಲ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿಲ್ಲ.
ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ (ಎಸ್ಜೆಟಿಎ) ಗುರುವಾರ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಪುರಿಯಲ್ಲಿರುವ ಪ್ರಸಿದ್ಧ ದೇಗುಲವು ಭಕ್ತಾದಿಗಳಿಗಾಗಿ ಕ್ರಮವಾಗಿ ದಸರಾ (ಅಕ್ಟೋಬರ್ 15) ಮತ್ತು ದೀಪಾವಳಿ (ನವೆಂಬರ್ 4) ಹಬ್ಬದ ದಿನಗಳಲ್ಲಿ ಮುಚ್ಚಿರುತ್ತದೆ ಎಂದು ತಿಳಿಸಲಾಗಿದೆ.
ಹಬ್ಬ ಹಾಗೂ ಮುಂತಾದ ಶುಭ ಸಂದರ್ಭಗಳಲ್ಲಿ ಹೆಚ್ಚಿನ ಜನ ಸಂದಣಿ ಇರುವೆಡೆಗಳಲ್ಲಿ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.

ಹೊಸ ಮಾರ್ಗಸೂಚಿ ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ. ಅ.15ರ ಮಧ್ಯಾಹ್ನ 12ರಿಂದ ಅಕ್ಟೋಬರ್ 16(ಭಾಸನಿ) ತನಕ ಹಾಗೂ ನವೆಂಅಬ್ರ್ 4( ದೀಪಾವಳಿ) ಹಾಗೂ ನವೆಂಬರ್ 15 (ಮಹಾ ಏಕಾದಶಿ) ಮತ್ತು ನವೆಂಬರ್ 19 (ಕಾರ್ತಿಕ ಹುಣ್ಣಿಮೆ) ದಿನಗಳಂದು ದೇಗುಲದ ಬಾಗಿಲುಗಳು ಬಂದ್ ಆಗಿರಲಿವೆ.
ಅಕ್ಟೋಬರ್ 20ರಂದು ಕುಮಾರ ಪೂರ್ಣಿಯಾ ದಿನದಂದು ದೇಗುಲದ ಬಾಗಿಲು ತೆರೆಯಲಿದ್ದು, ಸಾರ್ವಜನಿಕರಿಗೆ ದರ್ಶನಕ್ಕೆ ಮುಕ್ತವಾಗಿರಲಿದೆ.
ಮಿಕ್ಕಂತೆ, ಎಲ್ಲಾ ಭಾನುವಾರ ಹಾಗೂ ರಜಾದಿನಗಳಂದು ದೇಗುಲವು ಬಂದ್ ಆಗಿರಲಿದೆ. ದೇಗುಲದ ಆವರಣವನ್ನು ಸೋಂಕು ಮುಕ್ತಗೊಳಿಸಲು ಸೂಕ್ತ ಕ್ರಮ ಜರುಗಿಸಲಾಗಿದೆ. ಭಕ್ತಾದಿಗಳು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೊರೊನಾ ಲಸಿಕೆ ಪಡೆದುಕೊಳ್ಳುವುದು, ಕೋವಿಡ್ 19 ನೆಗಟಿವ್ ಪ್ರಮಾಣ ಪತ್ರ ಹೊಂದಿರುವುದು ಮುಂತಾದ ಅಗತ್ಯ ಕ್ರಮಗಳನ್ನು ತಪ್ಪದೇ ಪಾಲಿಸುವಂತೆ ದೇಗುಲ ನಿರ್ವಹಣಾ ಮಂಡಳಿ ಮನವಿ ಮಾಡಿಕೊಂಡಿದೆ.
ದರ್ಶನ ಸಮಯ: ಬೆಳಗ್ಗೆ 7 ರಿಂದ 9 ಗಂಟೆ ಮಾತ್ರ. ಕೋವಿಡ್ 19 ನಿಯಮ ಅನುಸರಿಸಿ ಭಕ್ತಾದಿಗಳು ಜಗನ್ನಾಥ ಸ್ವಾಮಿಯ ದರ್ಶನ ಪಡೆದುಕೊಳ್ಳಬಹುದು.
ಹಿರಿಯ ನಾಗರಿಕರು, ಮಕ್ಕಳು, ಅನಾರೋಗ್ಯ ಪೀಡಿತರು, ಗರ್ಭಿಣಿಯರು, , ಕೊರೊನಾ ಲಸಿಕೆ ಪಡೆಯದಿರುವವರು ದೇಗುಲದಿಂದ ದೂರ ಉಳಿದರೆ ಒಳ್ಳೆಯದು ಎಂದು ಸೂಚಿಸಲಾಗಿದೆ.
ಇನ್ನು ದೇಗುಲ ಭೇಟಿಗೂ ಮುನ್ನ 72 ಗಂಟೆಗಳ ಅವಧಿಯ ಆರ್ ಟಿ ಪಿಸಿಆರ್ ಪರೀಕ್ಷೆ ನಡೆಸಿ ಫಲಿತಾಂಶ ವರದಿ ಹೊಂದಿರಬೇಕು ಎಂಬ ನಿಯಮವನ್ನು ಬದಲಿಸಲಾಗಿದ್ದು, 96 ಗಂಟೆಗಳಿಗೂ ಮುಂಚಿನ ಪ್ರಮಾಣ ಪತ್ರ ಹೊಂದಿರಬೇಕು. ಕೊರೊನಾ ಲಸಿಕೆ ಎರಡು ಡೋಸ್ ಪಡೆದವರು ದೇಗುಲ ದರ್ಶನ ಸಂದರ್ಭದಲ್ಲಿ ಪ್ರಮಾಣ ಪತ್ರ ತೋರಿಸಬೇಕಾಗುತ್ತದೆ.












Click it and Unblock the Notifications