ಗೋವಾ-ಪಂಜಾಬ್ ಆಯ್ತು, ಈಗ ಗುಜರಾತ್ 'ಎಎಪಿ'ಯ ಹೊಸ ಟಾರ್ಗೆಟ್!
ಅಹಮದಾಬಾದ್. ಫೆಬ್ರವರಿ 7: ಗೋವಾ ಮತ್ತು ಪಂಜಾಬಿನಲ್ಲಿ ಯಶಸ್ವಿಯಾಗಿ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷ ಪ್ರಧಾನಿ ನರೇಂದ್ರ ಮೋದಿ ನಾಡು ಗುಜರಾತಿನಲ್ಲಿ ಝಂಡಾ ಊರಲು ಹೊರಟಿದೆ. ಗುಜರಾತಿನಲ್ಲಿ ಈ ವರ್ಷಾಂತ್ಯಕ್ಕೆ ಚುನಾವಣೆ ನಡೆಯಲಿರುವ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಲಿದೆ.
ಸದ್ಯ ಮುಗಿದಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಗೆಲ್ಲುವ ವಿಶ್ವಾಸದಲ್ಲಿದೆ. ಗೋವಾದಲ್ಲಿ ಗೆಲುವು ಸಾಧಿಸಿತ್ತೋ ಬಿಡುತ್ತೋ ಆದರೆ ಖಾತೆ ತೆರೆಯುವ ಲಕ್ಷಣವಂತೂ ಇದೆ. ಈ ಎಲ್ಲಾ ಚುನಾವಣೆಗಳ ನಂತರ ಇದೀಗ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತಿನತ್ತ ದೃಷ್ಟಿ ನೆಟ್ಟಿದ್ದಾರೆ. ಹೇಗಾದರೂ ಮಾಡಿ ಗುಜರಾತನ್ನು ಕೈವಶ ಮಾಡಿಕೊಂಡು ಮೋದಿಗೆ ಸರಿಯಾಗಿ ಹೊಡೆತ ನೀಡಬೇಕು ಎಂಬ ಯೋಜನೆ ಕೇಜ್ರಿವಾಲ್ ತಲೆಯಲ್ಲಿದೆ.[ಎನ್ ಡಿಟಿವಿ ಮತದಾನೋತ್ತರ ಸಮೀಕ್ಷೆ: ಪಂಜಾಬಿನಲ್ಲಿ ಎಎಪಿಗೆ ಅಧಿಕಾರ]
ವರ್ಷಾಂತ್ಯಕ್ಕೆ ಗುಜರಾತಿನಲ್ಲಿ ಚುನಾವಣೆ ನಡೆಯಲಿದ್ದು ಅದಕ್ಕೆ ಈಗಿಂದೀಗಲೇ ಸಿದ್ಧತೆ ಆರಂಭಿಸಿದೆ ಎಎಪಿ. ಮಾರ್ಚ್ 26ರಂದು ದೊಡ್ಡ ಸಮಾವೇಶವೊಂದನ್ನು ನಡೆಸಿ ರಾಜ್ಯದಲ್ಲಿ ತನ್ನ ಬಲ ಪ್ರದರ್ಶಿಸಲು ಎಎಪಿ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ 'ಆಝಾದಿ ಅಂದೋಲನ' ಎಂಬ ಸಂಘಟನೆ ತಳಮಟ್ಟದಲ್ಲಿ ಕೆಲಸ ಆರಂಭಿಸಿದೆ. ಜನರನ್ನು ಸಂಘಟಿಸುವ ಕೆಲಸದಲ್ಲಿ ಸಂಘಟನೆ ನಿರತವಾಗಿದ್ದು, ರಾಜ್ಯದ ಮುಖ್ಯಮಂತ್ರಿ ವಿಜಯ್ ರೂಪಾಣಿಗೆ ಘೇರಾವ್ ಹಾಕಬೇಕು ಎಂದು ನಿರ್ಧರಿಸಿದೆ.[ಪಂಜಾಬ್ ಚುನಾವಣೆಯಲ್ಲಿ 'ಎಎಪಿ'ಯ ಗುಪ್ತ ಕ್ಯಾಮೆರಾಗಳ ಕಣ್ಗಾವಲು]
ಇಲ್ಲೀವರೆಗೆ ಗುಜರಾತಿನಲ್ಲಿ ಕಾಂಗ್ರೆಸ್ ಮತ್ತ ಬಿಜೆಪಿ ನಡುವೆ ನೇರಾ ಮುಖಾಮುಖಿ ನಡೆಯುತ್ತಾ ಬಂದಿದೆ. ಇದೀಗ ಎಎಪಿ ಬಿಜೆಪಿಯ ವೈಫಲ್ಯಗಳ ಪಟ್ಟಿ ಸಿದ್ದಮಾಡಿಕೊಂಡಿದ್ದು, ಆರೋಗ್ಯ, ಶಿಕ್ಷಣ ಮತ್ತು ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣಾ ಅಖಾಡಕ್ಕೆ ಇಳಿಯಲಿದೆ.
ಪಂಜಾಬಿನ ಚುನಾವಣಾ ಫಲಿತಾಂಶ ನೋಡಿಕೊಂಡು ಗುಜರಾತಿನಲ್ಲಿ ಸಮಾವೇಶ ಮಾಡುವುದು ಎಎಪಿಯ ಯೋಜನೆಯಾಗಿದೆ. ಒಂದೊಮ್ಮೆ ಪಂಜಾಬಿನಲ್ಲಿ ಎಎಪಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಗುಜರಾತ್ ಸಮಾವೇಶಕ್ಕೆ ಮತ್ತಷ್ಟು ಬಲ ಬರುತ್ತದೆ ಎಂದು ಎಎಪಿ ಅಂದುಕೊಂಡಿದೆ. ಗೋವಾದಲ್ಲೂ ಹೆಚ್ಚಿನ ಮತದಾನ ಆಗಿರುವುದರಿಂದ ಅಲ್ಲೂ ಎಎಪಿ ತನಗೆ ಒಳಿತಾಗಬಹುದು ಎಂಬ ನಿರೀಕ್ಷೆಯಲ್ಲಿದೆ.