ಪಂಜಾಬ್: ಕಾಂಗ್ರೆಸಿನಲ್ಲಿ ಸಿದ್ದು-ಅಮರಿಂದರ್ ಜಟಾಪಟಿ
ಚಂಡೀಗಢ, ಜನವರಿ 23: ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ನಾಯಕ ನವಜ್ಯೋತ್ ಸಿಂಗ್ ಸಿದ್ದು ಆಗಮನ ಹೊಸ ನಿರೀಕ್ಷೆ ಹುಟ್ಟಿಸಿದೆ. ಆದರೆ ಸಿದ್ದು ಆಗಮನದ ಬೆನ್ನಿಗೆ ಪಕ್ಷದೊಳಗೆ ಬಣ ರಾಜಕೀಯವೂ ಆರಂಭವಾಗಿದ್ದು, ಇದು ಮುಸುಕಿನ ಗುದ್ದಾಟಕ್ಕೆ ನಾಂದಿ ಹಾಡಿದೆ.
ಪಕ್ಷದೊಳಗೆ ಅಮರಿಂದರ್ ಸಿಂಗ್ ಮತ್ತು ಸಿದ್ದು ಬಣಗಳು ಹುಟ್ಟಿಕೊಂಡಿದ್ದು ಎರಡೂ ಬಣಗಳ ನಡುವೆ ಶೀತಲ ಸಮರ ಜಾರಿಯಲ್ಲಿದೆ.[ಪಂಜಾಬ್ : ನಾಮಪತ್ರ ಸಲ್ಲಿಸಿದ ಮಾಜಿ ಕ್ರಿಕೆಟರ್ ಸಿಧು]
ಮಾಜಿ ಕ್ರಿಕೆಟಿಗ ನವಜ್ಯೋತ್ ಸಿಂಗ್ ಸಿದ್ದು ಕಾಂಗ್ರೆಸಿಗೆ ಬಂದ ನಂತರ ಒಂದಷ್ಟು ನಾಯಕರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಒಂದೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರನ್ನೇ ಮುಖ್ಯಮಂತ್ರಿ ಮಾಡಬೇಕು ಎಂಬ ಬೇಡಿಕೆಯನ್ನು ಇವರು ಮುಂದಿಡುತ್ತಿದ್ದಾರೆ. ಸಿದ್ದು ಅಮೃತಸರ ಮೂಲದವರು ಎಂಬುದೂ ಅವರ ಮುಖ್ಯಮಂತ್ರಿ ರೇಸಿಗೆ ಸಹಕಾರಿಯಾಗಿದೆ.

ಆದರೆ ಸಿದ್ದು ಬೆಂಬಲಕ್ಕೆ ಒಂದಷ್ಟು ಜನ ನಿಲ್ಲುತ್ತಿದ್ದಂತೆ ಇತ್ತ ಹಿರಿಯ ನಾಯಕ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ಪರವಾಗಿಯೂ ಬಣಗಳು ಹುಟ್ಟಿಕೊಂಡಿದ್ದು, ನಿಧಾನಕ್ಕೆ ಸಿದ್ದುವನ್ನು ವಿರೋಧಿಸಲು ಆರಂಭಿಸಿವೆ. ಸದ್ಯ ಸಿದ್ದು -ಅಮರಿಂದರ್ ತಿಕ್ಕಾಟ ತೆರೆಮರೆಯಲ್ಲೇ ನಡೆಯುತ್ತಿದೆ ಆದರೆ ಯಾವಾಗ ಸ್ಪೋಟವಾಗುತ್ತದೆ ಗೊತ್ತಿಲ್ಲ.[ಪಂಜಾಬ್ ಚುನಾವಣೆ: ನಿಮಗೆ ತಿಳಿದಿರಬೇಕಾದ ಅಂಶಗಳು]
ಸದ್ಯ ಇಲ್ಲಿವರೆಗೆ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಆದರೆ ಮೂಲಗಳ ಪ್ರಕಾರ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನವಜ್ಯೋತ್ ಸಿಂಗ್ ಸಿದ್ಧುರನ್ನು ಉಪಮುಖ್ಯಮಂತ್ರಿ ಮಾಡಲಾಗುವುದು ಎಂದು ಈಗಾಗಲೇ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ ಸಿದ್ಧು ಅಭಿಮಾನಿಗಳು ಮಾತ್ರ ಅಮೃತಸರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದು ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಸದ್ಯ ರಾಜ್ಯದ ಇಬ್ಬರು ನಾಯಕರ ನಡುವೆ ನಡೆಯುತ್ತಿರುವ ಬೆಳವಣಿಗೆಗಳು ಕಾಂಗ್ರೆಸ್ ಹೈಕಮಾಂಡಿಗೆ ತಲೆನೋವು ತಂದಿದೆ. ಎಲ್ಲಿ ಚುನಾವಣೆಗೆ ಮೊದಲು ಇಬ್ಬರು ನಾಯಕರು ಬೀದಿಯಲ್ಲಿ ಕಿತ್ತಾಡಲು ಆರಂಭಿಸಿ ಕಾಂಗ್ರೆಸ್ಗೆ ಮುಳುಗು ನೀರು ಬಿಡುತ್ತಾರೋ ಎಂಬ ಭಯ ಕಾಂಗ್ರೆಸ್ ನಾಯಕರಲ್ಲಿ ಮನೆ ಮಾಡಿದೆ.












Click it and Unblock the Notifications