ಈ ಸರಗಳ್ಳರ ಎದುರು ಹಾಲಿವುಡ್ ಸಾಹಸ ದೃಶ್ಯ ಏನಿಲ್ಲ!
ಪಠಾಣ್ ಕೋಟ್(ಪಂಜಾಬ್), ಆಗಸ್ಟ್.24: ಸರಗಳ್ಳತನ ಮಾಡಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದವರನ್ನು ಪೊಲೀಸರು ಮತ್ತು ಗ್ರಾಮಸ್ಥರು ಬೆನ್ನಟ್ಟುತ್ತಾರೆ. ನದಿಯ ಸಮೀಪ ಬಂದಾಗ ವಾಹನವನ್ನು ಅಲ್ಲೇ ಬಿಟ್ಟು ಸೇತುವೆಯಿಂದ ಕೆಳಕ್ಕೆ ಹಾರಿ ಪರಾರಿಯಾಗುತ್ತಾರೆ. ಇದು ಯಾವ ಬಾಲಿವುಡ್ ಅಥವಾ ಹಾಲಿವುಡ್ ಸಿನಿಮಾದ ದೃಶ್ಯವಲ್ಲ. ಪಂಜಾಬ್ ನ ಪಠಾಣ್ ಕೋಟ್ ನಲ್ಲಿ ನಡೆದ ನೈಜ ಘಟನೆ.
ಮೊದಲು ದ್ವಿಚಕ್ರ ವಾಹನವನ್ನು ಬದಿಗೆಸೆದು ನಂತರ 100 ಅಡಿ ಎತ್ತರದಿಂದ ಚಕ್ಕಿ ನದಿಗೆ ಜಂಪ್ ಮಾಡಿದ್ದಾರೆ. ಆದರೆ ಛಲಬಿಡದ ಪೊಲೀಸರು ಆರೋಪಿಗಳನ್ನು ಬಂಧಿಸಿ ಕದ್ದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ನದಿಗೆ ಹಾರಿ ಪರಾರಿಯಾಗಿದ್ದ ದಿಲೀಪ್ ಕುಮಾರ್ ಮತ್ತು ಜೀತೇಂದ್ರ ಕುಮಾರ್ ನನ್ನು ಬಂಧಿಸಿದ್ದು ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ.[ಬೆಂಗಳೂರು : ಧವನಂ ಜ್ಯುವೆಲ್ಲರ್ಸ್ ಅಂಗಡಿಗೆ ಕನ್ನ]
ಆದರೆ ಇತ್ತ ಬೆಂಗಳೂರಿನ ಕತೆ ಬೇರೆಯೇ ಆಗಿದೆ. ಜೂನ್ ತಿಂಗಳಲ್ಲಿ ನಡೆದ ಸರಣಿ ಸರಗಳ್ಳತನಗಳು ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದವು. ಒಂದು ಗಂಟೆ ಅವಧಿಯಲ್ಲಿ 10 ಕಡೆ ಸರಗಳ್ಳತನ ಮಾಡಿದವರು ಇನ್ನು ಬಲೆಗೆ ಬಿದ್ದಿಲ್ಲ. ಸಿಸಿ ಕ್ಯಾಮರಾದಲ್ಲಿ ಆರೋಪಿಗಳ ಗುರುತು ದಾಖಲಾಗಿದ್ದರೂ ಪೊಲೀಸರಿಗೆ ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ.
ಬೆಂಗಳೂರಲ್ಲಿ ಸರಗಳ್ಳತನ ಮಾಮೂಲಿ ಎಂಬಂತೆ ಆಗಿ ಹೋಗಿದೆ. ಬೆಳಗ್ಗೆ ವಾಯು ವಿವಾಹರಕ್ಕೆ ತೆರಳಿದವರ ಕತ್ತಿಗೆ ಕೈ ಹಾಕಿ ಸರ ಎಗರಿಸುವವರು ಕ್ಷಣಮಾತ್ರದಲ್ಲಿ ಮಾಯವಾಗುತ್ತಾರೆ. ಕಳೆದ ವಾರ ಸಹ 6 ಸರಗಳ್ಳತನ ಪ್ರಕರಣದಾಗಿದೆ. ಎನ್.ಎಸ್.ಮೇಘರಿಕ್ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಪ್ರಕರಣಗಳ ನಿಯಂತ್ರಣಕ್ಕೆ ಮತ್ತಷ್ಟು ಕ್ರಮ ತೆಗೆದುಕೊಳ್ಳಲಾಗಿದೆ.
ಕಳೆದ ವಾರ ಬೆಂಗಳೂರು ದಕ್ಷಿಣ ಪೊಲೀಸರು ಇಬ್ಬರು ಸರಗಳ್ಳರನ್ನು ಬಂಧಿಸಿ 23 ಪ್ರಕರಣಗಳನ್ನು ಪತ್ತೆ ಹಚ್ಚಿದ್ದರು. ಆದರೆ ಜೂನ್ ತಿಂಗಳ ಆರಂಭದಲ್ಲಿ ಸರ ಎಗರಿಸಿ ಪರಾರಿಯಾದವರ ಪತ್ತೆ ಇನ್ನು ಆಗಿಲ್ಲ.
ಮುಂಬೈನ ಇರಾನಿ ತಂಡದವರು ಈ ಕೃತ್ಯ ಮಾಡಿರಬಹುದು ಎಂಬ ಶಂಕೆ ಹಿಂದೆ ವ್ಯಕ್ತವಾಗಿತ್ತು. ನಗರದ ಕೆಲವರ ಸಹಕಾರವಿಲ್ಲದೇ ಇರಾನಿ ತಂಡದವರು ಇಲ್ಲಿಗೆ ಆಗಮಿಸಿ ಸರಣಿ ಸರಗಳ್ಳತನ ಮಾಡಲು ಸಾಧ್ಯವೇ? ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಸೋಮವಾರ ಬೆಳಗ್ಗೆ ಸಹ ಮಲ್ಲೇಶ್ವರಂ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಸರ ಕಳ್ಳತನ ಮಾಡಿದ ಚಾಲಾಕಿ ಪರಾರಿಯಾಗಿದ್ದಾನೆ.