ಉಗ್ರರ ತಲೆಲೆಕ್ಕ: ಹೇಳೋರಿಲ್ಲ, ಕೇಳೋರಿಲ್ಲ, ತಲೆಗೊಂದು ಮಾತಾಡ್ತಾರಲ್ಲ?
Recommended Video
ಈ ದೇಶದಲ್ಲಿ ನಾಮ್ ದಾರ್ ಯಾರೋ ಕಾಮ್ ದಾರ್ ಯಾರೋ, ಲೋಕಸಭಾ ಚುನಾವಣೆಯ ಈ ಹೊಸ್ತಿಲಲ್ಲಿ ಪುಲ್ವಾಮಾ ಘಟನೆ, ನಂತರದ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಬಿದ್ದ ಉಗ್ರರ ಹೆಣಗಳನ್ನು ಇಟ್ಟುಕೊಂಡು, ರಾಜಕಾರಣಿಗಳು, ಸೇನೆ ಮತ್ತು ಸೈನಿಕರನ್ನು ಎಳೆದು ಎಳೆದು ತರುತ್ತಿದ್ದಾರೆ.
ನಮ್ಮ ದೇಶದ ರಾಜಕಾರಣಿಗಳಿಗೆ ನಿಜವಾಗಿಯೂ ಎಷ್ಟು ಉಗ್ರರು ಸತ್ತರು ಎನ್ನುವ ಕುತೂಹಲವಿದೆಯಾ? ಖಂಡಿತ ಇದ್ದ ಹಾಗೇ ಕಾಣುವುದಿಲ್ಲ. ಆದರೆ, ಈ ವಿಚಾರವನ್ನು ಇಟ್ಟುಕೊಂಡು ಒಬ್ಬರು, ಇನ್ನೊಬ್ಬರನ್ನು ಟೀಕಿಸುತ್ತಾ ಎಷ್ಟು ಮೈಲೇಜ್ ಪಡೆದುಕೊಳ್ಳಬಹುದು ಎನ್ನುವುದಷ್ಟೇ ಇವರ ಚಿಂತೆ. ಇದು ರಾಜಕೀಯದ ಗಂಧಗಾಳಿ ಗೊತ್ತಿಲ್ಲದವನಿಗೂ ಅರ್ಥವಾಗುವಂತಹ ವಿಚಾರ.
ಹೆಣ ಎಣಿಸುವುದು ನಮ್ಮ ಕೆಲಸವಲ್ಲ, ಸರಕಾರದ್ದು : ಏರ್ ಚೀಫ್ ಮಾರ್ಷಲ್
ನಮಗೆ ನೀಡಿದ ಗುರಿಯನ್ನು ನಾವು ಮುಟ್ಟಿದ್ದೀವಾ ಎನ್ನುವದಷ್ಟೇ ನಮ್ಮ ಟಾರ್ಗೆಟ್, ಉಗ್ರರ ಹೆಣ ಲೆಕ್ಕಹಾಕುವುದು ನಮ್ಮ ಕೆಲಸವಲ್ಲ ಎಂದು ಏರ್ ಚೀಫ್ ಮಾರ್ಷಲ್ ಅತ್ಯಂತ ಸ್ಪಷ್ಟ ಮಾತಿನಿಂದ ಹೇಳಿದ್ದರೂ, ಬಿಜೆಪಿ ಮತ್ತು ಕಾಂಗ್ರೆಸ್ಸಿನ ರಾಜಕೀಯ ಮುಂದುವರಿಯುತ್ತಲೇ ಇದೆ. ಕಾಂಗ್ರೆಸ್ ಮುಖಂಡ ನವಜೋತ್ ಸಿದ್ದು, ಇನ್ನೂ ಒಂದು ಹೆಜ್ಜೆ ಕೆಳಗೆ ಇಳಿದು, ಸೇನೆಯನ್ನು ಕುಚೋದ್ಯ ಮಾಡಿದ್ದಾರೆ.
ರಮ್ಯಾ, ಮೋದಿಯನ್ನು ನಂಬುವುದಿಲ್ಲವಂತೆ: "ಕತ್ತೆ ಬಾಲ ಕುದುರೆ ಜುಟ್ಟು" ಅಂದ್ರು ಟ್ವಿಟ್ಟಿಗರು
ನಮ್ಮ ದೇಶದ ಮುಖಂಡರ ಹೇಳಿಕೆಯನ್ನು ಹಿಡಿದುಕೊಂಡು, ಪಾಕ್ ಮಾಧ್ಯಮಗಳು ಹಬ್ಬ ಮಾಡುತ್ತಿವೆ. ಅಸಲಿಗೆ, ಏರ್ ಸ್ಟ್ರೈಕ್ ನಡೆದಿದೆಯೋ ಇಲ್ಲವೋ, ಬಾಲಕೋಟ್ ಪ್ರದೇಶ ಹಾನಿಯಾಗಿದೆಯೋ ಇಲ್ಲವೋ, ಉಗ್ರರು ಸತ್ತರೋ, ಇಲ್ಲವೋ ಎನ್ನುವ ನಮ್ಮ ರಾಜಕೀಯ ಮುಖಂಡರ ಸಂಶಯವೇ ಪಾಕಿಸ್ತಾನಕ್ಕೆ ಈಗ ಅಸ್ತ್ರವಾಗಿ ಪರಿಣಮಿಸಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ತಪ್ಪಿತಸ್ಥ ಎಂದು ಸಾರಲು ಸಾಧ್ಯವಾದ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ.
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಆರೋಪ
ಚುನಾವಣೆ ಹತ್ತಿರ ಬರುತ್ತಿರುವುದರಿಂದ, ಬಿಜೆಪಿ ಈ ವಿಚಾರವನ್ನು ಬಳಸಿಕೊಳ್ಳುತ್ತಿದೆ ಎನ್ನುವುದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಆರೋಪ. ಹಾಗಿದ್ದರೆ, ಮೊದಲನೇ ಸರ್ಜಿಕಲ್ ಸ್ಟ್ರೈಕ್ ವೇಳೆ ಯಾವ ಚುನಾವಣೆ ಎದುರಾಗಿತ್ತು. ಆಗಲೂ, ಸಾಕ್ಷಿ ಕೇಳಿದವರು, ಈಗಲೂ ಕೇಳುತ್ತಿದ್ದಾರೆ ಎನ್ನುವುದು ಜನರಿಗೆ ಅರ್ಥವಾಗದ ವಿಚಾರವೇನೂ ಅಲ್ಲ. ಅದಕ್ಕೋ ಏನೋ, ನನ್ನನ್ನು ದ್ವೇಷಿಸಲು ಹೋಗಿ, ದೇಶದ ಸೈನಿಕರನ್ನು ಅವಮಾನಿಸಬೇಡಿ ಎಂದು ಮೋದಿ ಪದೇಪದೇ ಹೇಳುತ್ತಿರುವುದು.
ಬಿಜೆಪಿ ಅಧ್ಯಕ್ಷ ಆಮಿತ್ ಶಾ, 250 ಉಗ್ರರು ಸತ್ತಿದ್ದಾರೆ ಎನ್ನುವ ಅಸಂಬದ್ದ ಹೇಳಿಕೆ
ಏರ್ ಸ್ಟ್ರೈಕ್ ಅನ್ನು ರಾಜಕೀಯಕ್ಕೆ ಬಳಸಬಾರದು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರೇ ಹೇಳುತ್ತಾ, ಈಗ ಅವರೇ ಗೊತ್ತುಗುರಿಯಿಲ್ಲದ ಹೇಳಿಕೆಯನ್ನು ನೀಡುತ್ತಿದ್ದಾರೆ. ಬಿಜೆಪಿ ಅಧ್ಯಕ್ಷ ಆಮಿತ್ ಶಾ, 250 ಉಗ್ರರು ಸತ್ತಿದ್ದಾರೆ ಎನ್ನುವ ಅಸಂಬದ್ದ ಹೇಳಿಕೆಯನ್ನು ನೀಡಿದ್ದಾರೆ. ಅದ್ಯಾವಾಗ ಅವರು ಉಗ್ರರ ತಲೆ ಲೆಕ್ಕ ಹಾಕಲು ಹೋಗಿದ್ರೋ, ದೇವರೇ ಬಲ್ಲ.
ಪಾಕಿಸ್ತಾನವನ್ನು ಹದ ಹೊಡೆದ ಭಾರತದ ಬಳಿ ಉಗ್ರರ ಹೆಣ ಕೇಳ್ತಾರಲ್ಲ!
ಮರಗಳ ಮೇಲೆ ಬಾಂಬ್ ಹಾಕಿದ್ರೋ, ಉಗ್ರರ ಮೇಲೆ ಬಾಂಬ್ ಹಾಕಿ ಬಂದಿದ್ದಾರಾ
ಬಿಜೆಪಿ ಸೈನಿಕರ ಶ್ರಮ, ಬಲಿದಾನದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಕೆಲವೇ ಕೆಲವು ದಿನಗಳ ಹಿಂದೆ ಆರೋಪಿಸಿದ್ದ ಕಾಂಗ್ರೆಸ್ಸಿಗರೇ, ಈಗ ಅದೇ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ವಿರುದ್ದ ತಿರುಗಿಬೀಳಲು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಉದಾಹರಣೆಗೆ ಸಿದ್ದು ಅವರ ಹೇಳಿಕೆಯನ್ನೇ ತೆಗೆದುಕೊಳ್ಳಿ. ಮರಗಳ ಮೇಲೆ ಬಾಂಬ್ ಹಾಕಿದ್ರೋ, ಉಗ್ರರ ಮೇಲೆ ಬಾಂಬ್ ಹಾಕಿ ಬಂದಿದ್ದಾರಾ ಎನ್ನುವ ಮೂಲಕ ಸೇನೆಯ ಜೊತೆಗೆ ಭಾರತೀಯರೂ ತಲೆತಗ್ಗಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ.
ಭಾರತ ಸರ್ಕಾರದ ವಿಶ್ವಾಸಾರ್ಹತೆಯ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರಿದ್ದ ವಾಹನದ ಮೇಲೆ ನಡೆದ ಉಗ್ರದಾಳಿ 'ಆಕಸ್ಮಿಕ'. ಪುಲ್ವಾಮಾ 'ದುರ್ಘಟನೆ'ಯ ನಂತರ ನಡೆದ ನಮ್ಮ ವಾಯುಸೇನೆ ನಡೆಸಿದ ಏರ್ ಸ್ಟ್ರೈಕ್ ಬಗ್ಗೆ ವಿದೇಶಿ ಮಾಧ್ಯಮಗಳೂ ಅನುಮಾನ ವ್ಯಕ್ತಪಡಿಸಿವೆ. ಅಷ್ಟೇ ಅಲ್ಲ, ಭಾರತ ಸರ್ಕಾರದ ವಿಶ್ವಾಸಾರ್ಹತೆಯ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ ಎಂದು ಇನ್ನೋರ್ವ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳುತ್ತಿದ್ದಾರೆ.
ಅಂದು ಬಾಲಕೋಟ್ ನಲ್ಲಿ ಏನಾಯ್ತು? ಜೈಷ್ ಮದರಸಾ ವಿದ್ಯಾರ್ಥಿ ಬಿಚ್ಚಿಟ್ಟ ಸತ್ಯ
ಶತ್ರು ರಾಷ್ಟ್ರದೊಳಗೆ ನುಗ್ಗಲು ನಾವು ಶಕ್ತರಾಗಿದ್ದೇವೆ ಎನ್ನುವ ಸಂದೇಶ
ಪ್ರಧಾನಿ ಮೋದಿಯಾಗಲಿ, ಅಮಿತ್ ಶಾ ಆಗಲಿ ಅಥವಾ ಸರಕಾರವಾಗಲಿ ಎಷ್ಟು ಜನ ಉಗ್ರರು ಸತ್ತರು ಎನ್ನುವುದರ ಬಗ್ಗೆ ಹೇಳಿಕೆಯನ್ನು ನೀಡಲಿಲ್ಲ. ಇಲ್ಲಿ ಎಷ್ಟು ಜನ ಉಗ್ರರನ್ನು ಸಾಯಿಸಲಾಯಿತು ಎನ್ನುವುದಕ್ಕಿಂತ, ಶತ್ರು ರಾಷ್ಟ್ರದೊಳಗೆ ನುಗ್ಗಲು ನಾವು ಶಕ್ತರಾಗಿದ್ದೇವೆ ಎನ್ನುವ ಸಂದೇಶ ಪಾಕಿಸ್ತಾನಕ್ಕೆ ಹೋಗಬೇಕಾಗಿತ್ತು, ಅದು ಹೋಗಿದೆ ಎಂದು ಸಚಿವ ಎಸ್ ಎಸ್ ಅಹುವಾಲಿಯಾ ಸಮಜಾಯಿಸಿ ನೀಡುತ್ತಿದ್ದಾರೆ.
ರಫೇಲ್ ಯುದ್ದವಿಮಾನಗಳು ಇದ್ದಿದ್ದರೆ, ಫಲಿತಾಂಶ ಬೇರೆ ರೀತಿ ಇರುತ್ತಿತ್ತು
ಏರ್ ಸ್ಟ್ರೈಕ್ ಅನ್ನು ಖುದ್ದು ಪ್ರಧಾನಿಯವರೇ ಪ್ರಶ್ನಿಸುತ್ತಿದ್ದಾರೆ. ಭಾರತದ ವಾಯುಸೇನೆಯಲ್ಲಿ ರಫೇಲ್ ಯುದ್ದವಿಮಾನಗಳು ಇದ್ದಿದ್ದರೆ, ಫಲಿತಾಂಶ ಬೇರೆ ರೀತಿ ಇರುತ್ತಿತ್ತು. ಬಾಲಕೋಟ್ ಘಟನೆಯ ಬಗ್ಗೆ ಅವರಿಗೆ ಅನುಮಾನವಿದೆಯೇ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತ್ತ ಉಗ್ರರ ಲೆಕ್ಕ ಕೇಳಿದರೆ ತಪ್ಪೇನು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಹೇಳಿದ್ದಾರೆ.
ಪಾಕ್, PoK ಯಲ್ಲಿ 16 ಉಗ್ರನೆಲೆ ಇನ್ನೂ ಜೀವಂತ: ಗುಪ್ತಚರ ಇಲಾಖೆ
ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಹೇಳಿಕೆಗಳು
ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆಯೊಂದನ್ನು ನೀಡಿ, ಮುನ್ನೂರು ಸೀಟು ಪಡೆಯಲು ಇನ್ನೆಷ್ಟು ಯೋಧರನ್ನು ಬಲಿ ತೆಗೆದುಕೊಳ್ಳುತ್ತೀರಾ, ಇನ್ನೆಷ್ಟು ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತೀರಾ, ಧಿಕ್ಕಾರವಿರಲಿ ನಿಮ್ಮ ರಾಜಕೀಯಕ್ಕೆ ಎಂದು ಮೋದಿ/ಶಾ ವಿರುದ್ದ ಕಿಡಿಕಾರಿದ್ದು ಗೊತ್ತೇ ಇದೆ. ವಿದೇಶಿ ಮಾಧ್ಯಮಗಳು ಏರ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತ ಪಡಿಸುತ್ತಿದೆ. ಈ ಬಗ್ಗೆ ತಿಳಿದುಕೊಳ್ಳುವ ಹಕ್ಕು ನಮಗಿದೆ, ಎಷ್ಟು ಉಗ್ರರು ಸತ್ತರು, ಯಾವ ಯಾವ ಪ್ರದೇಶಕ್ಕೆ ಬಾಂಬ್ ಹಾಕಲಾಯಿತು. ಸರಿಯಾದ ಟಾರ್ಗೆಟ್ ನಲ್ಲೇ ಬಾಂಬ್ ಬಿದ್ದಿದೆಯಾ ಎನ್ನುವ ಪ್ರಶ್ನೆಯನ್ನು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಎತ್ತಿದ್ದಾರೆ.
ಏರ್ ಸ್ಟ್ರೈಕ್ ನಿಂದ ಎಲ್ಲಾ ಉಗ್ರರು ಹತರಾದರೆ, ಅದೂ ಇಲ್ಲ
ನಮಗೆ ಸೇನೆಯ ಮೇಲೆ ನಂಬಿಕೆಯಿದೆ, ನಿಮ್ಮ ಮೇಲಿಲ್ಲ. ಸ್ವಾತಂತ್ರ್ಯಾನಂತರ ಸೇನೆ ಉತ್ತಮ ಟ್ರ್ಯಾಕ್ ರೆಕಾರ್ಡ್ ಅನ್ನು ಹೊಂದಿದೆ, ದೇಶಕ್ಕಾಗಿ ಹಲವು ಯುದ್ದವನ್ನೂ ಗೆದ್ದಿದೆ. ಇನ್ನೊಂದು ಕಡೆ ನೀವು, ಎಲ್ಲಾ ವಿಚಾರದಲ್ಲೂ ಸುಳ್ಳು ಹೇಳಿಕೊಂಡು ಬಂದಿದ್ದೀರಾ. 2014ರ ಚುನಾವಣೆಯ ವೇಳೆ ಉಗ್ರರನ್ನು ಮಟ್ಟಹಾಕುವುದಾಗಿ ಹೇಳಿದ್ದಿರಿ. ಆದರೆ, ಪಾಕಿಸ್ತಾನಕ್ಕೆ ಹೋಗಿ ಶರೀಫ್ ಅವರನ್ನು ಆಲಂಗಿಸಿ, ಬಿರಿಯಾನಿ ತಿಂದು ಬಂದ್ರಿ. ಈ ಬಾರಿ ಯಾಕೆ ನಾವು ನಿಮ್ಮನ್ನು ನಂಬಬೇಕು. ಈಗ ಏರ್ ಸ್ಟ್ರೈಕ್ ನಿಂದ ಎಲ್ಲಾ ಉಗ್ರರು ಹತರಾದರೆ, ಅದೂ ಇಲ್ಲ ಎಂದು ರಮ್ಯಾ ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಿದ್ದಾರೆ.
ರಮ್ಯಾ, ಮೋದಿಯನ್ನು ನಂಬುವುದಿಲ್ಲವಂತೆ: "ಕತ್ತೆ ಬಾಲ ಕುದುರೆ ಜುಟ್ಟು" ಅಂದ್ರು ಟ್ವಿಟ್ಟಿಗರು
ಉಗ್ರರ ತಲೆಲೆಕ್ಕ ಹಾಕುವ ಮೊದಲು, ಇವರ ಬಾಯಿಯನ್ನು ಮೊದಲು ಮುಚ್ಚಿಸಬೇಕು
ನಮ್ಮೆಲ್ಲಾ ರಾಜಕಾರಣಿಗಳಿಗೆ ದೇಶ ಕಾಯುವ ಯೋಧರ ಪರಿಶ್ರಮವದ ಅರಿವಿದೆಯಾ? ಬಾಯಿಗೆ ಬಂದಂತೆ ಹೇಳಿಕೆಯನ್ನು ನೀಡಿ, ಸೈನಿಕರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಇವರುಗಳಿಗೆ ಅಧಿಕಾರಕ್ಕೇರಲು ಯಾವ ವಿಚಾರವಾದರೂ ಸರಿ. ಕನಿಷ್ಠ ಪಕ್ಷ ಯಾವ ವಿಚಾರದಲ್ಲಾದರೂ ಒಗ್ಗಟ್ಟಾಗಿರಬೇಕು ಎನ್ನುವ ಅರಿವಿಲ್ಲದವರು, ನಮ್ಮನ್ನು ಆಳುತ್ತಿದ್ದಾರೆ. ಉಗ್ರರ ತಲೆಲೆಕ್ಕ ಹಾಕುವ ಮೊದಲು, ಇವರ ಬಾಯಿಯನ್ನು ಮೊದಲು ಮುಚ್ಚಿಸಬೇಕು.