ನಿರ್ಗಮಿತ ಸಮಯ ಪುದುಚೇರಿ ಜನರಿಗೆ ಕಿರಣ್ ಬೇಡಿ ಕೊಟ್ಟ ಸಂದೇಶ
ಪುದುಚೇರಿ, ಫೆಬ್ರುವರಿ 17: ಪುದುಚೇರಿ ಸರ್ಕಾರದ ಬಿಕ್ಕಟ್ಟಿನ ನಡುವೆ ಲೆಫ್ಟಿನಂಟ್ ಗವರ್ನರ್ ಕಿರಣ್ ಬೇಡಿ ಅವರನ್ನು ವಜಾಗೊಳಿಸಿದ್ದು, ತೆಲಂಗಾಣ ರಾಜ್ಯಪಾಲ ಡಾ. ತಮಿಳುಸಾಯಿ ಸುಂದರ್ ರಾಜನ್ ಅವರಿಗೆ ಹೆಚ್ಚುವರಿ ಹೊಣೆ ಹೊರಿಸಲಾಗಿದೆ. ಈ ಬೆಳವಣಿಗೆ ಬೆನ್ನಲ್ಲಿ ನಿರ್ಗಮಿತರಾಗುತ್ತಿರುವ ಕಿರಣ್ ಬೇಡಿ ಅವರು ಪುದುಚೇರಿ ಜನರಿಗೆ ಧನ್ಯವಾದ ಹೇಳಿದ್ದಾರೆ.
ಈ ಕೇಂದ್ರಾಡಳಿತ ಪ್ರದೇಶದಲ್ಲಿ ನನ್ನ ಪಯಣದ ಭಾಗವಾದ ಜನರಿಗೆ ಹಾಗೂ ಅಧಿಕಾರಿಗಳಿಗೆ ಧನ್ಯವಾದ ಎಂದು ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಿರಣ್ ಬೇಡಿ, "ಪುದುಚೇರಿಯಲ್ಲಿ ಲೆಫ್ಟಿನಂಟ್ ಗವರ್ನರ್ ಆಗಿ ಕೆಲಸ ಮಾಡಿ ಜೀವಮಾನದ ಅನುಭವ ಕೊಟ್ಟ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಇದರೊಂದಿಗೆ ನನ್ನ ಜೊತೆ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದ. ಈ ಸಮಯದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ತಕ್ಕಂತೆ ಟೀಮ್ ರಾಜ್ ನಿವಾಸ್ ಪ್ರಾಮಾಣಿಕವಾಗಿ ಕೆಲಸ ಮಾಡಿದೆ ಎಂಬುದನ್ನು ಮನಃಪೂರ್ವಕವಾಗಿ ಹೇಳುತ್ತೇನೆ" ಎಂದಿದ್ದಾರೆ.
"ಪುದುಚೇರಿಗೆ ಉಜ್ವಲ ಭವಿಷ್ಯವಿದೆ. ಆ ಭವಿಷ್ಯ ಜನರ ಕೈಯಲ್ಲಿದೆ" ಎಂದು ಉಲ್ಲೇಖಿಸಿದ್ದಾರೆ.

ಪುದುಚೇರಿಯಲ್ಲಿ ಸರ್ಕಾರದ ಬಿಕ್ಕಟ್ಟಿನ ನಡುವೆ ಲೆಫ್ಟನೆಂಟ್ ಗವರ್ನರ್ ಕಿರಣ್ ಬೇಡಿ ಅವರನ್ನು ವಜಾಗೊಳಿಸಿ ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದೇಶ ಹೊರಡಿಸಿದ್ದರು. ಕಿರಣ್ ಬೇಡಿಯವರ ಅಧಿಕಾರವನ್ನು ತಡೆ ಹಿಡಿಯುವ ಬಗ್ಗೆ ನಿರ್ದೇಶನ ನೀಡಲಾಗಿದ್ದು, ಪುದುಚೇರಿಯ ಕಾರ್ಯಗಳನ್ನು ನೋಡಿಕೊಳ್ಳುವುದಕ್ಕಾಗಿ ರಾಜ್ಯಪಾಲ ಡಾ. ತಮಿಳುಸಾಯಿ ಸುಂದರ್ ರಾಜನ್ ಅವರನ್ನು ನೇಮಿಸಲಾಗಿದೆ.












Click it and Unblock the Notifications