ಹತ್ತು ರುಪಾಯಿಯ ಮಕ್ಕಳಾಟಕ್ಕೆ ಬಲಿಯಾಯಿತು ಜೀವ
ಪುಣೆ, ಜನವರಿ 17: ಹತ್ತು ರುಪಾಯಿ ವಿಚಾರವಾಗಿ ಅವಮಾನ ಮಾಡಿದ ಕಾರಣಕ್ಕೆ ಪುಣೆಯ ಮೂವತ್ತು ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಂದರಮ್ಮ ಪ್ರಶುರಾಮ್ ಶೆಲಾರ್ ಆ ಮಹಿಳೆಯ ಹೆಸರು. ಆಕೆಯ ಗಂಡ ಕಾರ್ಮಿಕ. ಸುಂದರಮ್ಮ ತನ್ನ ಮಗ ರಾಹುಲ್ ಗೆ ದುಡ್ಡು ಕೊಟ್ಟು ಜನವಾಡಿ ಪ್ರದೇಶದ ದಿನಸಿ ಅಂಗಡಿಗೆ ಕಳುಹಿಸಿದ್ದಾರೆ.
ಆತ ಅಂಗಡಿಗೆ ಹೋಗುವಾಗ ನೆರೆಮನೆಯವರ ಹನ್ನೆರಡು ವರ್ಷದ ಮಗಳೊಬ್ಬಳು ಆತನಿಂದ ನೋಟು ಕಸಿದುಕೊಂಡಿದ್ದಾಳೆ. ಆಗ ರಾಹುಲ್ ಮನೆಗೆ ಹಿಂತಿರುಗಿ ತನ್ನ ತಾಯಿಗೆ ದೂರು ಹೇಳಿದ್ದಾನೆ. ಆಗ ಸುಂದರಮ್ಮ ನೆರೆಮನೆಯವರ ಜತೆಗೆ ಈ ಬಗ್ಗೆ ಕೇಳಲು ಹೋಗಿದ್ದಾರೆ. ಆಗ ಆಕೆಯನ್ನು ಅವಾಚ್ಯವಾಗಿ ನಿಂದಿಸಿ, ಹೊಡೆದು ಕೊನೆಗೆ ಸಾಯಿಸುವುದಾಗಿ ನೆರೆಮನೆಯವರು ಬೆದರಿಕೆ ಹಾಕಿದ್ದಾರೆ.[ಈ ಫೋಟೋ ನೋಡಪ್ಪಾ ಮಗು, ಇವರು ನಿನ್ನ ತಂದೆಯಾ?]
ಅಕ್ಕಪಕ್ಕದ ಮನೆಯವರ ಎದುರು ಹೀಗೆ ಅವಮಾನ ಆಯಿತಲ್ಲ ಎಂದು ಕುಗ್ಗಿಹೋದ ಸುಂದರಮ್ಮ, ಮನೆಗೆ ಹಿಂತಿರುಗಿದವರೇ ಡೀಸೆಲ್ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಂಡಿದ್ದಾರೆ. ಆ ನಂತರ ಸುಟ್ಟ ಗಾಯಗಳೊಂದಿಗೆ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಡೀ ಪ್ರಕರಣಕ್ಕೆ ಕಾರಣಳಾದ ಹುಡುಗಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಆ ಹುಡುಗಿಯ ಪೋಷಕರನ್ನು ಸಹ ಬಂಧಿಸಲಾಗಿದೆ.