IN PICS: ಜಮ್ಮು-ಕಾಶ್ಮೀರ ಕಣಿವೆಯಲ್ಲಿ ಕಲ್ಲಾಗುವಷ್ಟು ಚಳಿ
ಉತ್ತರ ಭಾರತದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಫೋಟೋಗಳನ್ನು ನೋಡಿದರೆ ಮೈ ನಡುಗಿ ಹೊದಿಕೆ ಹೊದಿಯುವ ಎನಿಸುತ್ತದೆ. ಇನ್ನು ಅಲ್ಲಿನ ಹಿಮಪಾತದ ಪರಿಯನ್ನು ಊಹಿಸಿಕೊಳ್ಳಿ. ಮರ-ಗಿಡ, ಬೆಟ್ಟಗಳ ಸಾಲು ಕೂಡ ಮಂಜು ಹೊದ್ದು ನಿಂತಿವೆ. ಜಮ್ಮು-ಕಾಶ್ಮೀರದಲ್ಲಂತೂ ಪ್ರವಾಸೋದ್ಯಮ ಶಿಸ್ತಾಗಿ ಮಲಗಿಕೊಂಡು ಬಿಟ್ಟಿದೆ.
ದಾಲ್ ಸರೋವರದಲ್ಲಿ ಪ್ರವಾಸಿಗಳ ಬೇಡಿಕೆ ಪೂರೈಸಲು ಹೆಣಗುತ್ತಿದ್ದ ದೋಣಿಗಳು ದಡದಲ್ಲಿ ನಿಂತುಬಿಟ್ಟಿವೆ. ಬಿಳಿ ಬಣ್ಣದ ಉಣ್ಣೆ ತೊಟ್ಟು ನಿಂತ ಸುಂದರಿಯಂತೆ ಕಾಣುತ್ತಿದೆ ಜಮ್ಮು-ಕಾಶ್ಮೀರ. ಅಲ್ಲಿನ ಪ್ರಸಿದ್ಧ ಕ್ಷೇತ್ರ ಕಟ್ರಾದ ವೈಷ್ಣೋದೇವಿ ಮಂದಿರವು ಸಹ ಹಿಮಪಾತದ ಪ್ರಭಾವದಿಂದ ಹೊರತಾಗಿಲ್ಲ.[ಟ್ರಂಪ್ ಮೇಲಿನ ಸಿಟ್ಟು ಬಟ್ಟೆ ಮೇಲೆ ಯಾಕೆ?]
ಕಟ್ರಾದಿಂದ ವೈಷ್ಣೋದೇವಿಗೆ ಹೆಲಿಕಾಪ್ಟರ್ ನಲ್ಲಿ ತೆರಳಲು ಇರುವ ಹೆಲಿಪ್ಯಾಡ್ ನಲ್ಲಿ ಮಂಜು ತೆರವುಗೊಳಿಸುತ್ತಿರುವ ಕಾರ್ಮಿಕರು ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಚಳಿಗಾಲದ ಹಿಮಪಾತ ಬಿಗ್ಗಿ ಬಿಗಿಯಾಗಿ ಭೂಮಿಯನ್ನು ಅಪ್ಪಿಕೊಂಡಿರುವುದಂತೂ ಹೌದು. ಒಮ್ಮೆ ಶಿಮ್ಲಾಗಾದರೂ ಹೋಗಿಬರ್ತೀರಾ ನೋಡಿ. ಅನುಭವಿಸಲು -ಹೇಳಿಕೊಳ್ಳಲು ಒಂದು ಸೊಗಸಾದ ಅನುಭವ ಜತೆಯಾಗುತ್ತದೆ.
ಜಮ್ಮು-ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಹಿಮಪಾತದ ಚೆಲುವು, ದಟ್ಟತೆ ಬಿಂಬಿಸುವ ಕೆಲವು ಸೊಗಸಾದ ಫೋಟೋಗಳು ಇಲ್ಲಿವೆ. ನೋಡಿ ಆನಂದಿಸಿ, ನಿಮಗೆ ಇಷ್ಟವಾದರೆ ಅಭಿಪ್ರಾಯ ತಿಳಿಸಿ. ಜತೆಗೆ ನಿಮ್ಮೂರಿನ ಚಳಿಗಾಲದ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.[2016ರಲ್ಲಿ ಗಮನ ಸೆಳೆದ 24 ಚಿತ್ರಗಳು]
ಹಿಮಪಾತದ ಮಧ್ಯೆ ಚುಕುಬುಕು ಚುಕುಬುಕು
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿನ ಫೋಟೋ ಇದು. ಶ್ರೀನಗರ-ಖಾಜಿಗಂಡ್ ರೈಲ್ವೆ ಹಳಿ ಮೇಲೆ ದಟ್ಟವಾದ ಮಂಜು ಬಿದ್ದಿದ್ದು, ಸುತ್ತಲೂ ಮಂಜೇ ಮಂಜು. ಹಿಮಪಾತ ಆದ ನಂತರ ಸುತ್ತಲೂ ಬಿದ್ದ ಮಂಜಿನ ನಡುವೆ ರೈಲು ಬರುತಿದೆ ನೋಡಿ.
ಹೆದ್ದಾರಿಯ ಕಾರುಗಳ ಮೇಲೆ ಮಂಜೋ ಮಂಜು
ಜಮ್ಮು-ಶ್ರೀನಗರದ ಹೆದ್ದಾರಿ, ಜಮ್ಮುವಿನಿಂದ 95 ಕಿ.ಮೀ ದೂರವಿರುವ ಕುದ್ ನಲ್ಲಿ ಭಾರಿ ಹಿಮಪಾತದ ಮಧ್ಯೆ ಬಿಳಿ ಉಣ್ಣೆಯನ್ನು ಮೈಮೇಲೆ ಹೊತ್ತು ನಿಂತಂತೆ ಕಂಡ ಕಾರುಗಳ ಸಾಲು
ಹಿಮ ಕಣಿವೆ
ಸೆರಾಜ್ ಕಣಿವೆಯ ಮಂಡಿಯಲ್ಲಿ ನಿರಂತರವಾದ ಹಿಮಪಾತ. ಮರ, ಗಿಡ, ಬೆಟ್ಟಗಳ ಸಾಲು ಎಲ್ಲೆಲ್ಲೂ ಹಿಮ. ಎಲ್ಲೆಲ್ಲೂ ಬಿಳಿ ಬಿಳಿ ಬಣ್ಣ, ಅದೇ ತುಂಬಿಕೊಂಡಂತಿದೆ ನೋಡುಗರ ಕಣ್ಣ.
ಹೆಲಿಪ್ಯಾಡ್ ನ ಮಂಜು ತೆರವಿನಲ್ಲಿ ಕಾರ್ಮಿಕರು
ಜಮ್ಮುವಿನಲ್ಲಿ ಕಟ್ರಾದ ವೈಷ್ಣೋದೇವಿ ದರ್ಶನಕ್ಕೆ ಹೆಲಿಕಾಪ್ಟರ್ ವ್ಯವಸ್ಥೆ ಇದೆ. ಆ ಹೆಲಿಪ್ಯಾಡ್ ನಲ್ಲೂ ಹಿಮವೇ ತುಂಬಿಕೊಂಡಿದ್ದು, ಅಲ್ಲಿ ಹಿಮವನ್ನು ತೆರವುಗೊಳಿಸುತ್ತಿದ್ದ ಕಾರ್ಮಿಕರು ಕಂಡಿದ್ದು ಹೀಗೆ.
ಮಾತೆ ವೈಷ್ಣೋದೇವಿ
ಜಮ್ಮುವಿನಲ್ಲಿರುವ ವೈಷ್ಣೋದೇವಿ ಕ್ಷೇತ್ರದಲ್ಲಿ ನಿರಂತರವಾಗಿ ಹಿಮಪಾತವಾಗುತ್ತಿದೆ. ಮಂಜಿನ ನಡುವೆ ಮಾತೆ ವೈಷ್ಣೋ ದೇವಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು ಹೀಗೆ.
ದಾಲ್ ಸರೋವರ ದೋಣಿಗಳು
ಶ್ರೀನಗರದ ದಾಲ್ ಸರೋವರದ ದೋಣಿಗಳನ್ನು ನಿಲ್ಲಿಸಲಾಗಿದೆ. ಅವುಗಳ ಮೇಲೆಲ್ಲ ಹಿಮ. ಸುತ್ತಲೂ ಮಂಜು. ಅದರ ಮಧ್ಯೆ ದಡದಲ್ಲಿ ಬೆಚ್ಚನೆ ಬಟ್ಟೆ ಧರಿಸಿ ನಡೆದುಹೋಗುತ್ತಿರುವ ವ್ಯಕ್ತಿ.
ಮಾತೆ ಕ್ಷೇತ್ರದಲ್ಲೂ ಮಂಜಿನ ರಾಶಿ
ಕಟ್ರಾದ ಮಾತಾ ವೈಷ್ಣೋ ದೇವಿ ಕ್ಷೇತ್ರವು ಮಂಜಿನಿಂದ ಆವೃತವಾಗಿ ಕಾಣುತ್ತಿದ್ದದು ಹೀಗೆ.