10 ಘಟಾನುಘಟಿಗಳ ಹಣೆಬರಹ ಬುಧವಾರ ನಿರ್ಧಾರ
ನವದೆಹಲಿ, ಮೇ 6: ಹದಿನಾರನೇ ಲೋಕಸಭೆಗೆ ನಡೆಯುತ್ತಿರುವ ಚುನಾವಣೆಯ ಎಂಟನೇ ಹಂತದ ಮತದಾನ ಬುಧವಾರ ಮೇ ಏಳರಂದು ನಡೆಯಲಿದೆ. 64 ಲೋಕಸಭಾ ಕ್ಷೇತ್ರಗಳ ಜೊತೆ, ಸೀಮಾಂಧ್ರದ 175 ವಿಧಾನಸಭಾ ಕ್ಷೇತ್ರದ ಚುನಾವಣೆಯೂ ಮೇ 7ರಂದು ನಡೆಯಲಿದೆ.
ಏಳು ರಾಜ್ಯಗಳಲ್ಲಿ ವ್ಯಾಪಿಸಿಕೊಂಡಿರುವ ಒಟ್ಟು 64 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುವ ಮತದಾನದಲ್ಲಿ 897 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚುನಾವಣೆ ನಡೆಯುತ್ತಿರುವ ಪ್ರದೇಶಗಳು ಹೀಗಿವೆ: ಸೀಮಾಂಧ್ರ (25), ಬಿಹಾರ (7) ಉತ್ತರಪ್ರದೇಶ (15) , ಪಶ್ಚಿಮ ಬಂಗಾಳ (6) , ಉತ್ತರಾಖಂಡ (05) ಹಿಮಾಚಲ ಪ್ರದೇಶ (04) ಮತ್ತು ಜಮ್ಮು ಕಾಶ್ಮೀರದ (02) ಕ್ಷೇತ್ರಗಳಲ್ಲಿ ಬುಧವಾರ ಚುನಾವಣೆ ನಡೆಯಲಿದೆ. (ರಾಹುಲ್ ಗಾಂಧಿ ಸೋಲಿಗೆ ಈ ಅಷ್ಟಾಂಶ ಸಾಕು)
ಕಣದಲ್ಲಿರುವ 897 ಅಭ್ಯರ್ಥಿಗಳ ಪೈಕಿ 177 ಅಭ್ಯರ್ಥಿಗಳ ವಿರುದ್ದ ಕ್ರಿಮಿನಲ್ ಕೇಸುಗಳಿವೆ. ಬುಧವಾರ ನಡೆಯುವ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಸೋಮವಾರ (ಮೇ 5) ತೆರೆಬಿದ್ದಿದೆ. ಇದಾದ ನಂತರ ಇನ್ನು ಒಂದು ಹಂತದ ಮತದಾನ ಬಾಕಿ ಉಳಿಯಲಿದ್ದು ಅದು ಮೇ 12ರಂದು ನಡೆಯಲಿದೆ. ಮೇ 16ರಂದು ಎಲ್ಲಾ 543 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ.

ಎಂಟನೇ ಹಂತದ ಚುನಾವಣೆ
ಮೇ ಏಳರ ಚುನಾವಣೆಯಲ್ಲಿ ಲೋಕಸಭಾ ಸದಸ್ಯತ್ವಕ್ಕೆ ಹತ್ತು ಖ್ಯಾತನಾಮರು ಕಣ್ಣಿಟ್ಟಿದ್ದಾರೆ. ಆ 10 ಮಂದಿ ಯಾರು? ಮುಂದಿನ ಸ್ಲೈಡುಗಳಲ್ಲಿ ನೋಡಿ..

ರಾಹುಲ್ ಗಾಂಧಿ
ಉತ್ತರಪ್ರದೇಶದ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ದ, ಬಿಜೆಪಿಯಿಂದ ಸ್ಮೃತಿ ಇರಾನಿ ಮತ್ತು ಆಮ್ ಆದ್ಮಿ ಪಕ್ಷದಿಂದ ಕುಮಾರ್ ವಿಶ್ವಾಸ್ ಸ್ಪರ್ಧಿಸುತ್ತಿದ್ದಾರೆ.

ವರುಣ್ ಗಾಂಧಿ
ಉತ್ತರಪ್ರದೇಶದ ಸುಲ್ತಾನಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ವರುಣ್ ಗಾಂಧಿ ಅವರಿಗೆ ಕಾಂಗ್ರೆಸ್ಸಿನ ಅಮಿತಾ ಸಿಂಗ್ ಮತ್ತು ಬಹುಜನ ಸಮಾಜ ಪಕ್ಷದ ಪವನ್ ಪಾಂಡೆ ಸ್ಪರ್ಧೆ ನೀಡಲಿದ್ದಾರೆ.

ಬಿ ಸಿ ಖಂಡೂರಿ
ಉತ್ತರಾಖಂಡದ ಪೌರಿ ಕ್ಷೇತ್ರದಿಂದ ಬಿಜೆಪಿಯ ಬಿ ಸಿ ಖಂಡೂರಿ ಸ್ಪರ್ಧಿಸಲಿದ್ದಾರೆ. ಇವರ ವಿರುದ್ದ ಕಾಂಗ್ರೆಸ್ ಪಕ್ಷದ ಹಾಲಿ ಸಚಿವ ಹರಕ್ ಸಿಂಗ್ ರಾವತ್ ಕಣದಲ್ಲಿದ್ದಾರೆ.

ರಾಮ್ ವಿಲಾಸ್ ಪಾಸ್ವಾನ್
ಬಿಹಾರದ ಹಾಜಿಪುರದಿಂದ ಎಲ್ಜೆಪಿ ಪಕ್ಷದಿಂದ ರಾಮ್ ವಿಲಾಸ್ ಪಾಸ್ವಾನ್ ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಬಿಎಸ್ಪಿಯಿಂದ ಧನೇಶ್ವರ್ ರಾಮ್, ಕಾಂಗ್ರೆಸ್ಸಿನಿಂದ ಸಂಜೀವ್ ಪ್ರಸಾದ್ ಟೋನಿ, ಜೆಡಿಯುನಿಂದ ರಾಮ್ ಸುಂದರ್ ದಾಸ್ ಸ್ಪರ್ಧೆ ನೀಡಲಿದ್ದಾರೆ. ಪಾಸ್ವಾನ್ ಹೆಸರಿನ ಐದು ಮಂದಿ ಪಕ್ಷೇತರ ಅಭ್ಯರ್ಥಿಗಳು ಇಲ್ಲಿ ಕಣದಲ್ಲಿದ್ದಾರೆ.

ಶಾಂತ ಕುಮಾರ್
ಹಿಮಾಚಲ ಪ್ರದೇಶದ ಕಂಗ್ರಾ ಕ್ಷೇತ್ರದಿಂದ ಹಿರಿಯ ಬಿಜೆಪಿ ನಾಯಕ ಶಾಂತ ಕುಮಾರ್ ಸ್ಪರ್ಧಿಸಲಿದ್ದಾರೆ. ಇವರ ವಿರುದ್ದ ಕಾಂಗ್ರೆಸ್ಸಿನಿಂದ ಚಂದರ್ ಕುಮಾರ್ ಮತ್ತು ಆಮ್ ಆದ್ಮಿ ಪಕ್ಷದಿಂದ ರಾಜನ್ ಸುಶಾಂತ್ ಸ್ಪರ್ಧಿಸುತ್ತಿದ್ದಾರೆ.

ಮೂನ್ ಮೂನ್ ಸೇನ್
ಪಶ್ಚಿಮ ಬಂಗಾಳದ ಬಂಕುರಾ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಟಿಕೆಟಿನಿಂದ ಸ್ಪರ್ಧಿಸುತ್ತಿರುವ ಮೂನ್ ಮೂನ್ ಸೇನ್ ಅವರಿಗೆ ಹತ್ತು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸಿಪಿಐ(ಎಂ) ಅಭ್ಯರ್ಥಿ ಬಸುದೇಬ್ ಆಚಾರ್ಯ ಅವರಿಂದ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.

ಪ್ರತಿಭಾ ಸಿಂಗ್
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಪತ್ನಿ ಪ್ರತಿಭಾ ಸಿಂಗ್ ರಾಜ್ಯದ ಮಂಡಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಜಯ್ ರಾಮ್ ಕಣದಲ್ಲಿದ್ದಾರೆ.

ರಾಬ್ರಿ ದೇವಿ
ಬಿಹಾರದ ಸರಣ್ ಕ್ಷೇತ್ರದಿಂದ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಲಾಲೂ ಪ್ರಸಾದ್ ಯಾದವ್ ಪತ್ನಿ ರಾಬ್ರಿ ದೇವಿ ಆರ್ಜೆಡಿ ಟಿಕೆಟಿನಿಂದ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ದ ಬಿಜೆಪಿಯಿಂದ ರಾಜೀವ್ ಪ್ರತಾಪ್ ರೂಢಿ ಸ್ಪರ್ಧಿಸಲಿದ್ದಾರೆ.

ವಿಜಯಮ್ಮ
ವಿಶಾಖಪಟ್ಟಣಂ ಕ್ಷೇತ್ರದಿಂದ YSR ಕಾಂಗ್ರೆಸ್ಸಿನಿಂದ ವೈ ಎಸ್ ವಿಜಯಲಕ್ಷ್ಮಿ ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಬಿಜೆಪಿಯಿಂದ ಕಂಬಪಟ್ಟಿ ಹರಿಬಾಬು ಸ್ಪರ್ಧೆ ನೀಡಲಿದ್ದಾರೆ.

ಬೇನಿ ಪ್ರಸಾದ್ ವರ್ಮಾ
ಕೇಂದ್ರ ಸಚಿವ ಬೇನಿ ಪ್ರಸಾದ್ ವರ್ಮಾ ಉತ್ತರಪ್ರದೇಶದ ಗೊಂಡಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಕೀರ್ತಿವರ್ಧನ್, ಸಮಾಜವಾದಿ ಪಕ್ಷದಿಂದ ನಂದಿತಾ ಕಣದಲ್ಲಿದ್ದಾರೆ.












Click it and Unblock the Notifications