ರಾಜಕಾರಣಕ್ಕೆ ಪ್ರಿಯಾಂಕ: ಶಾ, ಮೋದಿಗೆ ರಾಹುಲ್ 'ಸರ್ಜಿಕಲ್ ಸ್ಟ್ರೈಕ್'
Recommended Video

ಇಂದು ಬರುತ್ತಾರೆ, ನಾಳೆ ಬರುತ್ತಾರೆ ಎಂದು ಜಾತಕಪಕ್ಷಿಯ ರೀತಿಯಲ್ಲಿ ಕಾಯುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಕೊನೆಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ನೇಮಕ ಮಾಡಿದ್ದಾರೆ.
ಮೇಲ್ನೋಟಕ್ಕೆ ಪ್ರಿಯಾಂಕ ಅವರನ್ನು ಪೂರ್ವ ಉತ್ತರಪ್ರದೇಶದ ಉಸ್ತುವಾರಿಯಾಗಿಯನ್ನಾಗಿ ನೇಮಕ ಮಾಡಲಾಗಿದ್ದರೂ, ಪ್ರಮುಖವಾಗಿ ಬಿಜೆಪಿಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶವನ್ನು ರವಾನಿಸುವಲ್ಲಿ ರಾಹುಲ್ ಯಶಸ್ವಿಯಾಗಿದ್ದಾರೆಂದೇ ವ್ಯಾಖ್ಯಾನಿಸಲಾಗುತ್ತಿದೆ.
ಉತ್ತರಪ್ರದೇಶದ ಪೂರ್ವ ಭಾಗವನ್ನು ಪ್ರಿಯಾಂಕಗೆ ನೀಡಿರುವ ಜೊತೆಗೆ, ಬಿಜೆಪಿ ಮತ್ತು ಅದಕ್ಕಿಂತಲೂ ಹೆಚ್ಚಾಗಿ ನಿಮ್ಮ ಸಹವಾಸ ಬೇಡವೆಂದು ದೂರವಿಟ್ಟಿದ್ದ ಬಿಎಸ್ಪಿ ಮತ್ತು ಸಮಾಜವಾದಿ ಪಕ್ಷಕ್ಕೂ ಬಿಸಿ ಮುಟ್ಟಿಸುವಲ್ಲಿ ರಾಹುಲ್ ಗಾಂಧಿ ಅಥವಾ ಅವರ ಸಲಹೆಗಾರರು ಸೈ ಎನಿಸಿಕೊಂಡಿದ್ದಾರೆ.
ಮೋದಿಯವರನ್ನು ಹೇಗಾದರೂ ಹಣೆಯಲೇ ಬೇಕು ಎಂದು ಒಂದೆಡೆ ಪ್ರಾದೇಶಿಕ ಪಕ್ಷಗಳು ಕೋಲ್ಕತ್ತಾದಲ್ಲಿ ಹೂಂಕರಿಸಿದ್ದರೆ, ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಸಾಧ್ಯವಾದ ಕಡೆಯಲೆಲ್ಲಾ ಹೊಂದಾಣಿಕೆಯ ಮಂತ್ರ ಜಪಿಸಿ, ಒಗ್ಗಟ್ಟಿನಲ್ಲಿ ಬಲವಿದೆ ಎಂದು ಸಾರುತ್ತಿದೆ.
ಒಬ್ಬ ಮೋದಿಯ ವಿರುದ್ದ ದೇಶದಲ್ಲಿ ಇರುವ ಎಲ್ಲಾ ಪಕ್ಷಗಳು (ಎನ್ಡಿಎ ಮೈತ್ರಿಕೂಟ ಹೊರತು ಪಡಿಸಿ) ಒಂದಾಗುತ್ತಿರುವುದು ಅಪರೂಪದ ರಾಜಕೀಯ ಚಿತ್ರಣವೇ ಸರಿ. ಇದು ಮೋದಿ ವಿರೋಧಿಗಳಿಗೆ ವರವಾಗುತ್ತೋ, ಶಾಪವಾಗುತ್ತೋ ನಿರ್ಣಿಯಿಸುವವನು ಮತದಾರ. ಪ್ರಿಯಾಂಕ ರಂಗ ಪ್ರವೇಶದಿಂದ ಕಾಂಗ್ರೆಸ್ಸಿಗೆ ಆಗುವ ಲಾಭವೇನು, ಬಿಜೆಪಿ ತನ್ನ ರಣತಂತ್ರವನ್ನು ಬದಲಿಸಬೇಕಾಗುತ್ತದಾ?

ಅಜ್ಜಿ ಇಂದಿರಾ ಗಾಂಧಿಯನ್ನೇ ಹೋಲುವುದು
ಪ್ರಿಯಾಂಕಗೆ ಇರುವ ಮೊಟ್ಟಮೊದಲ ಪ್ಲಸ್ ಪಾಯಿಂಟ್ ಎಂದರೆ ಅಜ್ಜಿ ಇಂದಿರಾ ಗಾಂಧಿಯನ್ನೇ ಹೋಲುವುದು. ದೇಶದ ಗ್ರಾಮೀಣ ಭಾಗದಲ್ಲಿ, ಅದರಲ್ಲೂ 'ಉಳುವವನೇ ಹೊಲದೊಡೆಯ' ಎನ್ನುವ ಕಾನೂನು ಜಾರಿಗೆ ಬಂದ ಮೇಲೆ, ಇಂದಿರಮ್ಮನ ಹೆಸರು ಇಂದೂ ಚಿರಸ್ಥಾಯಿಯಾಗಿ ಉಳಿದಿರುವುದು ಗೊತ್ತೇ ಇದೆ. ಮೋದಿ ವಿಶ್ವದ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿದ್ದರೂ, ಇಂದಿರಾ ನೆನಪಿಸಿಕೊಳ್ಳುವ ಆ ಹೃದಯಗಳನ್ನು ತಟ್ಟಲು ಮೋದಿ ಶಕ್ತರಾಗಿದ್ದಾರಾ ಎನ್ನುವ ಪ್ರಶ್ನೆಯನ್ನು ಬಿಜೆಪಿಯವರು ತಮಗೆ ತಾವೇ ಕೇಳಿಕೊಳ್ಳಬೇಕಾಗಿದೆ.

ಇನ್ನೊಂದು ಬ್ಯೂಟಿ ಎಂದರೆ ಜನರ ಜೊತೆ ಬೆರೆಯುವುದು
ಪ್ರಿಯಾಂಕಗೆ ಇರುವ ಇನ್ನೊಂದು ಬ್ಯೂಟಿ ಎಂದರೆ ಜನರ ಜೊತೆ ಬೆರೆಯುವುದು. ಏನೇ ಭದ್ರತಾ ವಿಚಾರವಿದ್ದರೂ, ಅದನ್ನೆಲ್ಲಾ ಮೀರಿ ನೇರವಾಗಿ ಯುವತಿಯರು ಮತ್ತು ವಯಸ್ಕ ಮಹಿಳೆಯರನ್ನು ಆಕರ್ಷಿಸುವ ಕಲೆ ಅವರಿಗೆ ಸಿದ್ದಿಸಿದೆ. ಅದು ಕಳೆದ ಚುನಾವಣೆಯಲ್ಲಿ, ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಪ್ರೂವ್ ಆಗಿದೆ ಕೂಡಾ, ಅದಿನ್ನು ದೇಶದ ಇತರ ಕಡೆ ಪಸರಿಸುವುದು ಖಂಡಿತ, ಇಂದಿರಾ ಗಾಂಧಿಯವರ ರೀತಿಯಲ್ಲೇ ಮಾತನಾಡುವುದೂ ಪ್ರಿಯಾಂಕಗೆ ಇರುವ ಇನ್ನೊಂದು ಅಡ್ವಾಂಟೇಜ್.

ಕಾಂಗ್ರೆಸ್ ಕಾರ್ಯಕರ್ತರಿಗೆ ಒಂದು ರೀತಿಯ ಟಾನಿಕ್
ಪ್ರಿಯಾಂಕ ರಾಜಕೀಯಕ್ಕೆ ಎಂಟ್ರಿ ಎಲ್ಲಕ್ಕಿಂತಲೂ ಹೆಚ್ಚಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಒಂದು ರೀತಿಯ ಟಾನಿಕ್ ನೀಡಿದಂತಾಗಿರುವುದಂತೂ ಖಂಡಿತ. ರಾಹುಲ್ ಕಾರ್ಯವೈಖರಿಯಿಂದ ಮತ್ತು ಹಿಂದಿನ ಸತತ ಸೋಲಿನಿಂದ ಕಾಂಗ್ರೆಸ್ ಕಂಗೆಟ್ಟಿದ್ದಾಗ, ಕಾರ್ಯಕರ್ತರು ' ವಿ ವಾಂಟ್ ಪ್ರಿಯಾಂಕ' ಎನ್ನುವ ಘೋಷಣೆಯನ್ನು ರಾಹುಲ್ ಮುಂದೆಯೇ ಕೂಗಿದ್ದರು. ಈಗ, ಪ್ರಿಯಾಂಕ ಅವರನ್ನು ಸಕ್ರಿಯ ರಾಜಕಾರಣಕ್ಕೆ ಅಧಿಕೃತವಾಗಿ ಘೋಷಣೆ ಮಾಡಿದಾಗ, ಕಾರ್ಯಕರ್ತರ ಹುರುಪೇ ಬೇರೆ ಎನ್ನುವುದು ಅಮಿತ್ ಶಾಗೆ ಅರ್ಥವಾಗದ ವಿಚಾರವೇನೂ ಅಲ್ಲ.

ಪ್ರಿಯಾಂಕ ನೇಮಕದ ಹಿಂದೆ ಭಾರೀ ಲೆಕ್ಕಾಚಾರ
ಪೂರ್ವ ಉತ್ತರಪ್ರದೇಶದ ಉಸ್ತುವಾರಿಯನ್ನಾಗಿ ಪ್ರಿಯಾಂಕ ನೇಮಕದ ಹಿಂದೆ, ಭಾರೀ ಲೆಕ್ಕಾಚಾರವೇ ಇದೆ. ಈ ಭಾಗದಲ್ಲಿ ಬರುವ 24 ಜಿಲ್ಲೆಗಳಲ್ಲಿ ಪ್ರಮುಖವಾದದ್ದು ಅಮೇಥಿ, ಅಂಬೇಡ್ಕರ್ ನಗರ, ಅಯೋಧ್ಯಾ, ಅಜಂಗಢ, ಬಲಿಯಾ, ಬಸ್ತಿ, ಗೋರಖಪುರ, ಖುಷಿನಗರ, ಮಿರ್ಜಾಪುರ, ಸುಲ್ತಾನ್ ಪುರ, ವಾರಣಾಸಿ. ಇವೆಲ್ಲವೂ ಬಿಜೆಪಿ-ಎಸ್ಪಿ-ಬಿಸ್ಪಿ ಪ್ರಾಭ್ಯಲ್ಯವಿರುವ ಕ್ಷೇತ್ರವೇ ಹೊರತು ಕಾಂಗ್ರೆಸ್ ಹಿಡಿತದಲ್ಲಿರುವ ಜಿಲ್ಲೆಗಳಲ್ಲ ( ಅಮೇಥಿ ಜಿಲ್ಲೆ ಹೊರತು ಪಡಿಸಿ). ಆ ಮೂಲಕ, ಉತ್ತರಪ್ರದೇಶದ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳಿಗೂ ರಾಹುಲ್ ಟಾಂಗ್ ನೀಡಿದ್ದಾರೆ.

ಪೂರ್ವ ಉತ್ತರಪ್ರದೇಶ
ಮೇಲ್ವರ್ಗದ ಸಮುದಾಯದವರಿಗೂ ಮೀಸಲಾತಿ ಮೋದಿ ಸರಕಾರ ಘೋಷಿಸಿದ ಮೇಲೆ, ರಾಹುಲ್ ಗಾಂಧಿ ತಮ್ಮ ಸಹೋದರಿಯನ್ನು ಪೂರ್ವ ಉತ್ತರಪ್ರದೇಶದ ಉಸ್ತುವಾರಿಯನ್ನಾಗಿ ನೇಮಿಸಿರುವ ಹಿಂದೆ ಇರುವ ರಾಜಕೀಯ ತಂತ್ರವೆಂದರೆ, ಅದು ಬಿಜೆಪಿ ಮತಬ್ಯಾಂಕ್ ಅನ್ನು ಹೊಡೆಯುವುದು. ಈ ಭಾಗದಲ್ಲಿ ಈ ಸಮುದಾಯದ ಮತಗಳು ನಿರ್ಣಾಯಕ.

ಪೂರ್ವ ಉತ್ತರಪ್ರದೇಶದ ವ್ಯಾಪ್ತಿಯ ಕ್ಷೇತ್ರಗಳು
ಕಳೆದ ಲೋಕಸಭಾ ಚುನಾವಣೆಯಲ್ಲಿ ಪೂರ್ವ ಉತ್ತರಪ್ರದೇಶದ ವ್ಯಾಪ್ತಿಯ ಕ್ಷೇತ್ರದಿಂದ ಘಟಾನುಗಟಿ ಮುಖಂಡರು ಆಯ್ಕೆಯಾಗಿದ್ದರು. ವಾರಣಾಸಿಯಿಂದ ಮೋದಿ, ಗೋರಖಪುರದಿಂದ ಯೋಗಿ ಆದಿತ್ಯನಾಥ್, ಅಜಂಗಢ ನಿಂದ ಮುಲಾಯಂ ಸಿಂಗ್, ಸುಲ್ತಾನ್ ಪುರ್ ದಿಂದ ವರುಣ್ ಗಾಂಧಿ, ಅಯೋಧ್ಯ (ಫೈಜಾಬಾದ್) ಕ್ಷೇತ್ರಗಳು ಬರುವುದರಿಂದ, ಜೊತೆಗೆ ಅಮೇಠಿ, ರಾಯಬರೇಲಿ ಕ್ಷೇತ್ರವೂ ಬರುವುದರಿಂದ, ಪ್ರಿಯಾಂಕ ಅವರನ್ನು ಈ ಭಾಗಕ್ಕೆ ಆಯ್ಕೆಮಾಡಿ, ರಾಹುಲ್ ವಿಶಿಷ್ಟ ರಾಜಕೀಯ ನಡೆಯಿಟ್ಟಿದ್ದಾರೆ.












Click it and Unblock the Notifications