ಕೊರೊನಾ ಅಂಕಿಅಂಶಗಳನ್ನು ಮುಚ್ಚಿಡಲಾಗುತ್ತಿದೆ: ಪ್ರಿಯಾಂಕಾ ಗಾಂಧಿ ಟೀಕೆ
ನವದೆಹಲಿ, ಜೂನ್ 7: ಕೊರೊನಾವೈರಸ್ ಅಂಕಿಅಂಶಗಳಲ್ಲಿ ವ್ಯತ್ಯಾಸವನ್ನು ಮಾಡಿ ಕೇಂದ್ರ ಸರ್ಕಾರ ಮಾಹಿತಿಗಳನ್ನು ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ಈ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜೀವ ಉಳಿಸುವ ವಿಚಾರದಲ್ಲಿ ಪ್ರಚಾರಕ್ಕೆ ಒತ್ತು ನೀಡುತ್ತಿದೆ. ಇದು ಅಪಾರ ಪ್ರಮಾಣದ ಹಾನಿಗೆ ಕಾರಣವಾಗಲಿದೆ ಎಂದಿದ್ದಾರೆ.
ಪ್ರಿಯಾಂಕ ಗಾಂಧಿ ತಮ್ಮ "ಯಾರು ಜವಾಬ್ದಾರರು?" ಅಭಿಯಾನವನ್ನು ಮುಂದುವರಿಸಿದ್ದು ಈ ಮೂಲಕ ಕೊರೊನಾವೈರಸ್ ನಿರ್ವಹಣೆಯ ವಿಚಾರವಾಗಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಸರ್ಕಾರ ನೀಡಿರುವ ಅಂಕಿಅಂಶಗಳ ವಿಚಾರವಾಗಿ ಕಾಂಗ್ರೆಸ್ನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ಫೇಸ್ಬುಕ್, ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಪ್ರಿಯಾಂಕ ಗಾಂಧಿ ಪೋಸ್ಟ್ ಹಾಕಿದ್ದು ಜನರ ಜೀವಗಳನ್ನು ರಕ್ಷಿಸುವುದಕ್ಕಿಂತ ಪ್ರಧಾನ ಮಂತ್ರಿಗಳ ಇಮೇಜ್ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ ಎಂದಿದ್ದಾರೆ. ಜೊತೆಗೆ ಈ ಅಂಕಿಅಂಶಗಳನ್ನು ಕೇಂದ್ರ ಸರ್ಕಾರ ಪ್ರಚಾರದ ಸಾಧನವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

"ಕೊರೊನಾವೈರಸ್ ಆರಂಭವಾದಾಗಿನಿಂದಲೂ ಕೊರನಾ ವೈರಸ್ನ ನಿಗ್ರಹಕ್ಕೆ ಪ್ರಮುಖ ಅಸ್ತ್ರವಾಗಬೇಕಿದ್ದ ಅಂಕಿಅಂಶಗಳನ್ನು ಪ್ರಚಾರದ ಅಸ್ತ್ರವನ್ನಾಗಿ ಬಳಸಿಕೊಳ್ಳುವುದರ ಕಡೆಗೆ ಮೋದಿ ಸರ್ಕಾರ ಗಮನಹರಿಸುತ್ತಿದೆ" ಎಂದು ಪ್ರಿಯಾಂಕ ಗಾಂಧಿ ತಮ್ಮ ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಮತ್ತೊಂದೆಡೆ ಎನ್ಸಿಪಿ ಕೂಡ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಸರ್ಕಾರ ಟ್ವಿಟ್ಟರ್ ಜೊತೆಗೆ 'ಬ್ಲ್ಯೂಟಿಕ್'ಗಾಗಿ ಹೋರಾಟವನ್ನು ನಡೆಸುವ ಬದಲಿಗೆ ಕೊರೊನಾವೈರಸ್ ವಿರುದ್ಧ ಹೋರಾಟವನ್ನು ನಡೆಸಲು ಜನರಿಗೆ ಲಸಿಕೆಯನ್ನು ನೀಡುವತ್ತ ಗಮನ ಹರಿಸಬೇಕಿದೆ ಎಂದು ಎನ್ಸಿಪಿಯ ರಾಷ್ಟ್ರೀಯ ವಕ್ತಾರ ನವಾಬ್ ಮಲಿಕ್ ಹೇಳಿಕೆ ನೀಡಿದ್ದಾರೆ.












Click it and Unblock the Notifications