Rain Alert: ಚಂಡಮಾರುತದ ಬಿರುಗಾಳಿ ತೀವ್ರತೆ: ವೈಪರೀತ್ಯದ ಸದ್ಯದ ಸ್ಥಿತಿಗತಿ, ಭಾರೀ ಮಳೆ ಮುನ್ಸೂಚನೆ
ಬೆಂಗಳೂರು, ಏಪ್ರಿಲ್ 14: ಕರ್ನಾಟಕ ಸೇರಿದಂತೆ ಭಾರತದ ದಕ್ಷಿಣ ಕರಾವಳಿ ರಾಜ್ಯಗಳಲ್ಲಿ ಮಳೆ ಆಗುತ್ತಿದೆ. ಉಳಿದೆ ಉಷ್ಣ ಅಲೆ ಮುಂದುವರಿದಿದೆ. ಸದ್ಯ ಬದಲಾದ ಹವಾಮಾನ ವೈಪರೀತ್ಯವು ಕಳೆದ ಎರಡು ವಾರಗಳಿಂದ ಮುಂದುವರಿದಿದೆ. ಸಮುದ್ರ ಮೇಲ್ಮೈನಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಸುಮಾರು 3 ಕಿಲೋ ಮೀಟರ್ ಎತ್ತರದಲ್ಲಿದ್ದ ಚಂಡಮಾರುತದ ಪರಿಚಲನೆ ಕೊಂಚ ಇಳಿಕೆ ಆಗಿದೆ. ಆದರೆ ವಿಪರ್ಯಾಸವೆಂದರೆ ಒಂದು ಕಡೆ ಉಂಟಾಗಿದ್ದ ವೈಪರಿತ್ಯ ಇದೀಗ ಮೂರು ಕಡೆ ವಿಸ್ತರಣೆ ಆಗಿದೆ. ಹೀಗಾಗಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಆಗಲಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಇತ್ತೀಚೆಗೆ ಬಂಗಾಳಕೊಲ್ಲಿ ಭಾಗದಲ್ಲಿ ಹಾಗೂ ಕನ್ಯಾಕುಮಾರಿ ಮತ್ತು ಮಿಳುನಾಡು ಮಧ್ಯೆ ಎದುರಾಗಿದ್ದ ವಾಯುಭಾರ ಕುರಿತ ತೀವ್ರತೆ ಇಳಿಕೆ ಆಗಿದೆ. ಅದರ ನಂತರ ಪಶ್ಚಿಮ ರಾಜಸ್ಥಾನದಿಂದ ಪೂರ್ವ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ಮರಾಠವಾಡ, ಕರ್ನಾಟಕದ ಒಳನಾಡು, ತಮಿಳುನಾಡಿನ ಮೂಲಕ ಮನ್ನಾರ್ ಕೊಲ್ಲಿಯವರೆಗೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಒಂದು ಸ್ಟ್ರಪ್ ನಿರ್ಮಾಣವಾಗಿದೆ.

ಇದಷ್ಟೇ ಅಲ್ಲದೇ ಆಗ್ನೇಯ ಮಧ್ಯಪ್ರದೇಶದಿಂದ ವಿದರ್ಭದಾದ್ಯಂತ ತೆಲಂಗಾಣದ ಮಧ್ಯ ಭಾಗಗಳಿಗೆ 0.9 ಕಿ.ಮೀ ಎತ್ತರದಲ್ಲಿ ಸುಳಿಗಾಳಿ ಎದ್ದಿದೆ. ಇತ್ತ ಆಂಧ್ರ ಪ್ರದೇಶದ ಕರಾವಳಿ, ಮಧ್ಯ ಭಾಗಗಳು ಮತ್ತು ಯಾನಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮುದ್ರ ಮಟ್ಟದಿಂದ 01 ಕಿಲೋ ಮೀಟರ್ ಎತ್ತರದಲ್ಲಿ ಮೇಲಿನ ವಾಯು ಚಂಡಮಾರುತದ ಪ್ರಸರಣ ಕಡಿಮೆ ಆಗಿದೆ. ಆದರೆ ಸಣ್ಣ ಪ್ರಮಾಣದ ಗಾಳಿಯ ತೀವ್ರತೆ ಮುಂದುವರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ವೈಪರೀತ್ಯಗಳು ಸದ್ಯ ಕಡಿಮೆ ತೀವ್ರತೆ ಹೊಂದಿವೆ. ಇವು ದಿನದಿಂದ ದಿನಕ್ಕೆ ತೀವ್ರಗೊಂಡಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ ಯಾವೆಲ್ಲ ಪ್ರದೇಶಗಳಲ್ಲಿ ಹವಾಮಾನ ಬದಲಾವಣೆ ಉಂಟಾಗಿದೆಯೋ ಆ ಪ್ರದೇಶ ಸೇರಿ ಅರ್ಧ ಭಾರತಕ್ಕೆ ಭಾರೀ ಮಳೆ ಸುರಿಸಲಿವೆ. ಪೂರ್ವ ಮುಂಗಾರು ಮಳೆ ಅಬ್ಬರ ಜೋರಾಗಲಿದೆ.

ಕಳೆದ ನಾಲ್ಕು ದಿನಗಳಿಂದ ಕರ್ನಾಟಕ, ಕೇರಳ, ತಮಿಳುನಾಡಿನ ಭಾಗದಲ್ಲಿ ಸುರಿಯುತ್ತಿದ್ದ ಮಳೆ ಕಡಿಮೆ ಆಗಿದೆ. ಇದರ ಬೆನ್ನಲ್ಲೆ ಹವಾಮಾನ ಇಲಾಖೆ ಉತ್ತರ ಭಾರತದವರೆಗೆ ಹಲವು ರಾಜ್ಯಗಳಿಗೆ ಒಣಹವೆ, ಉಷ್ಣ ಅಲೆ ಎಚ್ಚರಿಕೆ ನೀಡಿದೆ. ಇದೀಗ ಸಮುದ್ರ ಮಾತ್ರವಲ್ಲದೇ, ಭೂಮಿ ಮೇಲ್ಮೈನ ವಾತಾವರಣದಲ್ಲೂ ಬದಲಾವಣೆ ಆಗಿದೆ. ಇದರಿಂದ ಆಯಾ ಭಾಗಗಳಲ್ಲಿ ಕೊಂಚ ಮಳೆ ಸಾಧ್ಯತೆ ಇದೆ.
ವೈಪರೀತ್ಯ ತೀವ್ರಗೊಂಡರೆ ರೆಡ್ ಅಲರ್ಟ್ ಘೋಷಣೆ?
ಈ ಸ್ಟ್ರಫ್, ಸುಳಿಗಾಳಿ ಇನ್ನಷ್ಟು ತೀವ್ರಗೊಂಡರೆ, ಸ್ಪಷ್ಟ ವಾಯುಭಾರಕುಸಿತವಾಗಿ ಬದಲಾಗಲಿವೆ. ನಂತರ ಅದು ತೀವ್ರಗೊಂಡಲ್ಲಿ ಚಂಡಮಾರುತವಾಗಿ ಬದಲಾಗುತ್ತದೆ. ಹೀಗೆ ಹಲವು ಹಂತಗಳ ಬದಲಾವಣೆ ಒಂದೇ ದಿನದಲ್ಲಿ ಆಗಬಹುದು, ಅಥವಾ ಮೂರು ನಾಲ್ಕು ದಿನಗಳು ಹಿಡಿಯಬಹುದು. ಹೀಗೆ ಪ್ರಭಾವ ಹೆಚ್ಚಾದಲ್ಲಿ 20 ಸೆಂಟಿ ಮಿಟರ್ಗೂ ಹೆಚ್ಚು ಮಳೆ ಆಗಬಹುದು. ಆಗ ಐಎಂಡಿ ರೆಡ್ ಅಲರ್ಟ್ ನೀಡುವ ಜೊತೆಗೆ ಮೀನುಗಾರರಿಗೆ, ಸಂಬಂಧಿಸಿದ ಕರಾವಳಿ ಜಿಲ್ಲಾಡಳಿತಕ್ಕೆ ಅಗತ್ಯ ಸೂಚನೆ ರವಾನಿಸುತ್ತದೆ.
ಆದರೆ ಸದ್ಯ ಕರ್ನಾಟಕ ಸೇರಿದಂತೆ ಯಾವ ರಾಜ್ಯದಲ್ಲೂ ರಣಭೀಕರ ಮಳೆ ಆಗುತ್ತಿಲ್ಲ. ಅಲ್ಲಲ್ಲಿ ಹಗುರ, ಸಾಧಾರಣದಿಂದ ವ್ಯಾಪಕ ಮಳೆ ಆಗುತ್ತಿದೆ. ಇದರೊಂದಿಗೆ ಅನೇಕ ರಾಜ್ಯಗಳಲ್ಲಿ ಉಷ್ಣ ಅಲೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ತಿಳಿಸಿದೆ.
ಮೂರು ದಿನ ಭಾರೀ ಮಳೆ
ಕರ್ನಾಟಕದಲ್ಲಿ ಮುಂದಿನ ಏಪ್ರಿಲ್ 20ರಿಂದ ಭಾರೀ ಮಳೆ ಆಗುವ ನಿರೀಕ್ಷೆ ಇದೆ. ಅಲ್ಲಿಯವರೆಗೆ ಬಿಸಿಲಿನ ಆರ್ಭಟ ಕಂಡು ಬರಲಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ವ್ಯಾಪಕ ಮಳೆ ಸಂಭವ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.












Click it and Unblock the Notifications