ಹೃದಯಾಘಾತವಾಗಿ ಶಿವಲಿಂಗದ ಮೇಲೆ ಬಿದ್ದು ಸಾವನ್ನಪ್ಪಿದ ಅರ್ಚಕ
ಹೈದರಾಬಾದ್, ಜೂ 16: ನಾಲ್ಕು ದಶಕಗಳಿಂದ ಶಿವನನ್ನು ಪೂಜಿಸಿಕೊಂಡು ಬರುತ್ತಿದ್ದ ಹಿರಿಯ ಅರ್ಚಕರೊಬ್ಬರು, ಶಿವಲಿಂಗಕ್ಕೆ ಅಭಿಷೇಕ ನಡೆಸುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ, ಶಿವಲಿಂಗದ ಮೇಲೆಯೇ ಬಿದ್ದು ಸಾವನ್ನಪ್ಪಿದ ತೀರಾ ಅಪರೂಪದ ಘಟನೆ, ಆಂಧ್ರದ ಪುರಾಣಪ್ರಸಿದ್ದ ಶಿವನ ದೇವಾಲಯವೊಂದರಲ್ಲಿ ನಡೆದಿದೆ.
ಜೂನ್ ಹನ್ನೊಂದು ಸೋಮವಾರದಂದು ಈ ಘಟನೆ ಸಂಭವಿಸಿದ್ದು, ಗರ್ಭಗುಡಿಯಲ್ಲಿನ ಸಿಸಿಟಿವಿ ಫುಟೇಜ್ ನಲ್ಲಿ ಈ ದೃಶ್ಯ ಸೆರೆಯಾಗಿದೆ. 75ವರ್ಷದ ಕಂಡುಕರಿ ರಾಮರಾವ್ ಕಳೆದ ನಾಲ್ಕು ದಶಕಗಳಿಂದ ಶಿವನನ್ನು ಪೂಜಿಸಿಕೊಂಡು ಬರುತ್ತಿದ್ದು, ಇವರ ತಾತ ಕೂಡಾ ಶಿವರಾತ್ರಿಯ ದಿನದಂದು ಇದೇ ರೀತಿ ಕೊನೆಯುಸಿರುಯೆಳೆದಿದ್ದರು.
ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿನ ಭೀಮಾವರಂನಲ್ಲಿನ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ಆರುಗಂಟೆಗೆ ಗರ್ಭಗುಡಿಯಲ್ಲಿ ಶಿವಲಿಂಗಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ, ಹಾಲಿನ ಅಭಿಷೇಕ ನಡೆಸಿದಾಗ ಒಮ್ಮೆ ಅರ್ಚಕ ರಾಮರಾವ್ ಕುಸಿದುಬೀಳುತ್ತಾರೆ.

ಕೂಡಲೇ ಅವರನ್ನು ಇನ್ನೊಬ್ಬರು ಅರ್ಚಕರು ಮೇಲೆಕ್ಕೆತ್ತಿ ನಿಲ್ಲಿಸುತ್ತಾರೆ, ಆದರೆ ಕ್ಷಣಾರ್ಧದಲ್ಲಿ ಮತ್ತೆ ಅರ್ಚಕ ರಾಮರಾವ್ ಶಿವಲಿಂಗದ ಮೇಲೆ ಬಿದ್ದು ಪ್ರಾಣಬಿಟ್ಟಿದ್ದಾರೆ. ಈ ಎಲ್ಲಾ ದೃಶ್ಯಗಳು ದೇವಾಲಯದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆಂಧ್ರಪದೇಶ ಮತ್ತು ಸಾಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ದೇವಾಲಯದ ಆಡಳಿತ ಮಂಡಳಿಯ ಪ್ರಕಾರ, ರಾಮರಾವ್ ಅವರು ಗರ್ಭಗುಡಿಯಲ್ಲಿ ಸಾವನ್ನಪ್ಪಿಲ್ಲ, ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗುವ ವೇಳೆ ದಾರಿ ಮಧ್ಯೆ ಇವರು ಕೊನೆಯುಸಿರುಯೆಳೆದಿದ್ದಾರೆಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಆದರೆ, ಭಕ್ತರು ಅರ್ಚಕ ರಾಮರಾವ್ ಗರ್ಭಗುಡಿಯಲ್ಲಿ ಸಾವನ್ನಪ್ಪಿದ್ದು, ಇಂತಹ ಮರಣ ಎಲ್ಲರಿಗೂ ಬರದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಶಿವನಿಗೆ ಪ್ರಿಯವಾದ ದ್ವಾದಶಿ ಸೋಮವಾರದಂದು ಅರ್ಚಕರು ಸಾವನ್ನಪ್ಪಿದ್ದು ಮಂಗಳಕರವೆಂದು ಹೇಳಲಾಗುತ್ತಿದೆ.
ಭೀಮಾವರಂನಲ್ಲಿರುವ ಈ ಶಿವನ ದೇವಾಲಯ ಆಂಧ್ರದ ಐದು ಪ್ರಸಿದ್ದ ಈಶ್ವರನ ದೇವಾಲಯಗಳಲ್ಲೊಂದು. ಚಾಲುಕ್ಯ ಸಾಮ್ರಾಜ್ಯದ ರಾಜಾ ಭೀಮೇಶ್ವರ ಈ ದೇವಾಲಯವನ್ನು ನಿರ್ಮಿಸಿದ್ದು ಎನ್ನುತ್ತದೆ ಈ ದೇವಾಲಯದ ಇತಿಹಾಸ.












Click it and Unblock the Notifications