ಸನಾ ಇರ್ಷಾದ್ಗೆ ಪ್ರೆಸ್ ಕ್ಲಬ್ ಬೆಂಬಲ; ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಒತ್ತಾಯ
ನವದೆಹಲಿ, ಅ. 24: ಪತ್ರಕರ್ತೆ ಸನಾ ಇರ್ಷಾದ್ ಮಟ್ಟುಗೆ ದೇಶ ಬಿಟ್ಟು ತೆರಳದಂತೆ ನಿರ್ಬಂದ ವಿಧಿಸಿರುವ ಘಟನೆಯ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟವಾಗಿರಬೇಕು ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಹೇಳಿದೆ.
ಪುಲಿಟ್ಜರ್ ಪ್ರಶಸ್ತಿ ವಿಜೇತ ಫೋಟೋ ಜರ್ನಲಿಸ್ಟ್ ಸನಾ ಇರ್ಷಾದ್ ಮಟ್ಟು ಅವರು ಪ್ರಶಸ್ತಿ ಸ್ವೀಕರಿಸಲು ಅಮೆರಿಕಕ್ಕೆ ತೆರಳದಂತೆ ತಡೆದಿರುವ ನಿರ್ಧಾರದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ) ಪತ್ರ ಬರೆದು ಒತ್ತಾಯಿಸಿದೆ.
ಪುಲಿಟ್ಚರ್ ಪುರಸ್ಕೃತ ಕಾಶ್ಮೀರೀ ಪತ್ರಕರ್ತೆ ಸನಾಗೆ ವಿದೇಶಕ್ಕೆ ಹಾರಲು ತಡೆ
"ಒಂದೆಡೆ, ಕಾಶ್ಮೀರವನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ತರಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಮತ್ತೊಂದೆಡೆ ಇಂತಹ ಕ್ರಮಗಳು ಕಾಶ್ಮೀರದಿಂದ ಜನರನ್ನು ದೂರವಿಡುವ ಕೆಲಸ ಮಾಡುವಲ್ಲಿ ಸಹಾಯ ಮಾಡುತ್ತದೆ" ಎಂದು ಪ್ರೆಸ್ ಕ್ಲಬ್ ಆರೋಪಿಸಿದೆ.
"ನಾಲ್ಕು ತಿಂಗಳಲ್ಲಿ ಇದು ಎರಡನೇ ಬಾರಿಗೆ ಆಕೆಯ ವಿದೇಶ ಪ್ರಯಾಣವನ್ನು ನಿಲ್ಲಿಸಿರುವುದಕ್ಕೆ ನಾವು ಕಳವಳ ವ್ಯಕ್ತಪಡಿಸುತ್ತೆವೆ. ಪುಲಿಟ್ಜರ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಲು ಆಕೆಗೆ ಅವಕಾಶ ನೀಡಿದರೆ, ಆಕೆ ದೇಶದ ಘನತೆಯನ್ನು ಹೆಚ್ಚಿಸುತ್ತಿದ್ದಳು" ಎಂದು ಹೇಳಿದೆ.
ಜೊತೆಗೆ ಆಕೆಯ ಪ್ರಯಾಣಕ್ಕಾಗಿ ಅಮೆರಿಕಾ ಸರ್ಕಾರವು ಮಾನ್ಯವಾದ ವೀಸಾವನ್ನು ನೀಡಿದೆ. ಈ ವಿಚಾರದಲ್ಲಿ ಸರ್ಕಾರ ಸ್ಪಷ್ಟವಾಗಿರಬೇಕು ಎಂದು ಪತ್ರಕರ್ತರ ಸಂಘ ಆಗ್ರಹಿಸಿದೆ.
2020 ರಲ್ಲಿ ಭಾರತದಲ್ಲಿ ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿನ ಕೆಲಸಕ್ಕಾಗಿ ಸನಾ ಇರ್ಷಾದ್ ಮಟ್ಟೂ ಅವರು ಪ್ರಶಸ್ತಿಯನ್ನು ಗೆದ್ದಿದ್ದಾರೆ. ತನಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ತಡೆದು ನಿಲ್ಲಿಸಲಾಗಿದೆ ಎಂದು ಟ್ವಿಟ್ಟರ್ನಲ್ಲಿ ಹೇಳಿದ್ದರು.
"ನಾನು ನ್ಯೂಯಾರ್ಕ್ನಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ಸ್ವೀಕರಿಸಲು ಹೊರಟಿದ್ದೆ. ಆದರೆ, ದೆಹಲಿ ವಿಮಾನ ನಿಲ್ದಾಣದಲ್ಲಿ ನನ್ನನ್ನು ತಡೆದು ನಿಲ್ಲಿಸಲಾಯಿತು. ನಾನು ಮಾನ್ಯತೆ ಹೊಂದಿರುವ ಅಮೆರಿಕಾ ವೀಸಾ ಮತ್ತು ಟಿಕೆಟ್ ಅನ್ನು ಹೊಂದಿದ್ದರೂ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧಿಸಲಾಗಿದೆ" ಎಂದು ಹೇಳಿದ್ದರು.
I was on my way to receive the Pulitzer award ( @Pulitzerprizes) in New York but I was stopped at immigration at Delhi airport and barred from traveling internationally despite holding a valid US visa and ticket. pic.twitter.com/btGPiLlasK
— Sanna Irshad Mattoo (@mattoosanna) October 18, 2022
ಜುಲೈನಲ್ಲಿ, ಸೆರೆಂಡಿಪಿಟಿ ಆರ್ಲೆಸ್ ಗ್ರಾಂಟ್-2020 ರ ವಿಜೇತರಾಗಿದ್ದ ಸನಾ ಇರ್ಷಾದ್ ಮಟ್ಟೂ ಅವರಿಗೆ ಪ್ಯಾರಿಸ್ಗೆ ಪ್ರಯಾಣಿಸಲು ಅನುಮತಿ ನೀಡಿರಲಿಲ್ಲ.