ರಾಷ್ಟ್ರೀಯ ಸೇನಾ ದಿನ: ರಾಷ್ಟ್ರಪತಿ, ಪ್ರಧಾನಿಯಿಂದ ಯೋಧರ ಸ್ಮರಣೆ
ನವದೆಹಲಿ,ಜನವರಿ 15: ಇಂದು ರಾಷ್ಟ್ರೀಯ ಸೇನಾ ದಿನ, ಇದರ ಅಂಗವಾಗಿ ದೇಶದ ಪ್ರಮುಖ ನಾಯಕರು ಗೌರವ ಸಲ್ಲಿಸಿದ್ದಾರೆ, ಯೋಧರನ್ನು ಸ್ಮರಿಸಿದ್ದಾರೆ.
ನಮ್ಮ ಭಾರತೀಯ ಸೇನೆ ಬಲಿಷ್ಠವಾಗಿದೆ. ಸೈನಿಕರು ಧೈರ್ಯಶಾಲಿಗಳಾಗಿದ್ದು ದೃಢ ನಿರ್ಧಾರ, ನಿಷ್ಠೆ, ಶ್ರದ್ಧೆ ಅವರಲ್ಲಿದೆ. ದೇಶಕ್ಕೆ ಹೆಮ್ಮೆ ತರುವ ಕೆಲಸವನ್ನು ಎಂದಿಗೂ ಮಾಡುತ್ತಾರೆ. ದೇಶವಾಸಿಗಳ ಪರವಾಗಿ ನಾನು ಭಾರತೀಯ ಸೇನೆಗೆ ಗೌರವ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಮ್ಮ ಹೆಮ್ಮೆಯ ಸೈನಿಕರಿಗೆ ಭಾರತೀಯ ಸೇನಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ ಅವರ ತ್ಯಾಗ, ಬಲಿದಾನಗಳನ್ನು ಕೊಂಡಾಡಿದ್ದಾರೆ.
ಸೇನಾ ದಿನದ ಅಂಗವಾಗಿ ಭಾರತೀಯ ಸೇನೆಯ ಪರಾಕ್ರಮಿ ಮಹಿಳಾ ಮತ್ತು ಪುರುಷ ಸಿಬ್ಬಂದಿಗೆ ಅಭಿನಂದನೆಗಳು. ದೇಶದ ವಿಷಯ ಬಂದಾಗ ತಮ್ಮ ಜೀವವನ್ನು ಬದಿಗೊತ್ತಿ ತ್ಯಾಗ, ಬಲಿದಾನ ಮಾಡಿದವರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳೋಣ. ಭಾರತ ಯಾವಾಗಲೂ ಸೈನಿಕರ ಧೈರ್ಯ, ಬದ್ಧತೆ, ನಿವೃತ್ತ ಯೋಧರು ಮತ್ತು ಅವರ ಕುಟುಂಬದ ಪರವಾಗಿರುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಈ ದಿನವನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತು ರಾಜ್ಯಗಳ ಎಲ್ಲಾ ಪ್ರಧಾನ ಕಚೇರಿಗಳಲ್ಲಿ ಮೆರವಣಿಗೆಗಳು ಮತ್ತು ಇತರ ಮಿಲಿಟರಿ ಪ್ರದರ್ಶನಗಳ ರೂಪದಲ್ಲಿ ಆಚರಿಸಲಾಗುತ್ತದೆ. ಇಂದು ಭಾರತ ತನ್ನ 73 ನೇ ಭಾರತೀಯ ಸೇನಾ ದಿನವನ್ನು ಆಚರಿಸುತ್ತಿದೆ. ದೇಶ ಮತ್ತು ನಾಗರಿಕರನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಧೀರ ಸೈನಿಕರಿಗೆ ಗೌರವ ಸಲ್ಲಿಸಲು ಇಂದು ಪ್ರಮುಖ ದಿನವಾಗಿದೆ.
ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡಿದ್ದನ್ನು ಗುರುತಿಸಿ ಭಾರತದಲ್ಲಿ ಪ್ರತಿವರ್ಷ ಜನವರಿ 15 ರಂದು ಸೇನಾ ದಿನವನ್ನು ಆಚರಿಸಲಾಗುತ್ತದೆ. ಕೆ. ಎಂ.ಕಾರ್ಯಪ್ಪ ಅವರು ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ 15 ಜನವರಿ 1949 ರಂದು ಅಧಿಕಾರ ವಹಿಸಿಕೊಂಡರು.