ಸೇನಾ ಸಮವಸ್ತ್ರ ಧರಿಸಿದ್ದ ಪ್ರಧಾನಿಗೆ ಕೋರ್ಟ್ನಿಂದ ನೋಟಿಸ್
ಲಕ್ನೋ, ಫೆಬ್ರವರಿ 3: ಕಳೆದ ವರ್ಷ ಕಾಶ್ಮೀರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೇನಾ ಸಮವಸ್ತ್ರ ಧರಿಸಿ ದೇಶದ ಗಮನ ಸೆಳೆದಿದ್ದರು. ಸೇನಾ ಸಿಬ್ಬಂದಿಗಳೊಂದಿಗೆ ದಿನ ಕಳೆದ ಅವರು ಅಲ್ಲಿ ಅವರೊಂದಿಗೆ ಸಂವಾದ ನಡೆಸುತ್ತಿದ್ದ ಸಂದರ್ಭದಲ್ಲಿ ಭಾರತೀಯ ಸೇನಾ ಸಮವಸ್ತ್ರವನ್ನು ಧರಿಸಿದ್ದರು. ಈ ರೀತಿ ಭಾರತೀಯ ಸೇನಾ ಸಮವಸ್ತ್ರ ಧರಿಸಿದ ಕಾರಣಕ್ಕೆ ಉತ್ತರಪ್ರದೇಶದ ಜಿಲ್ಲಾ ನ್ಯಾಯಾಲಯವು ಪ್ರಧಾನಮಂತ್ರಿ ಕಚೇರಿಗೆ (PMO) ನೋಟಿಸ್ ಜಾರಿ ಮಾಡಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 140ರ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮವಸ್ತ್ರವನ್ನು ಧರಿಸುವುದು ಕಾನೂನುಬಾಹಿರವಾಗಿದ್ದು, ಇದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಬೇಕು ಎಂದು ಉತ್ತರಪ್ರದೇಶದ ಪ್ರಯಾಗರಾಜ್ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಮನವಿ ವಿಚಾರಣೆ ನಡೆಸಿದ ನ್ಯಾಯಾಲಯ ಪಿಎಂಒಗೆ ನೋಟಿಸ್ ಜಾರಿ ಮಾಡಿದೆ.
ಸೇನಾ ಸಮವಸ್ತ್ರ ಧರಿಸುವುದು ಶಿಕ್ಷಾರ್ಹಾ ಅಪರಾಧ
ಭಾರತೀಯ ದಂಡ ಸಂಹಿತೆಯ 140ನೇ ವಿಧಿಯು ಸೈನಿಕರು, ನಾವಿಕರು ಅಥವಾ ವಾಯುಸೇನಾ ಸಿಬ್ಬಂದಿಗಳು ಬಳಸುವ ಸೇನಾ ಸಮವಸ್ತ್ರ ಧರಿಸುವುದು ಶಿಕ್ಷಾರ್ಹ ಅಪರಾಧ. ಈ ಸಂಬಂಧ ಪಾಂಡೆ ಎಂಬ ವ್ಯಕ್ತಿ ಪ್ರಯಾಗರಾಜ್ ಜಿಲ್ಲಾ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 156 (3) ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು.

ಇನ್ನು ಈ ಅರ್ಜಿ ವಿಚಾರಣೆ ನಡೆಸಿದ ಪ್ರಯಾಗರಾಜ್ ಜಿಲ್ಲಾ ನ್ಯಾಯಾಧೀಶ ನಳಿನ್ ಕುಮಾರ್ ಶ್ರೀವಾಸ್ತವ ಅವರು ಪಿಎಂಒ ಮತ್ತು ವಕೀಲ ರಾಕೇಶ್ನಾಥ್ ಪಾಂಡೆ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ನ್ಯಾಯಾಲಯದಿಂದ ಪ್ರಧಾನಿ ಕಚೇರಿಗೆ ನೋಟಿಸ್ ಜಾರಿ
ಈ ಸಂಬಂಧ ಪಾಂಡೆ ಅವರು ಕಳೆದ ಡಿಸೆಂಬರ್ನಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಯನ್ನು ಆರಂಭದಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹರೇಂದ್ರನಾಥ್ ತಿರಸ್ಕರಿಸಿದ್ದರು. ಈ ಪ್ರಕರಣ ನ್ಯಾಯಾಲಯದ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸಲು ಬರುವುದಿಲ್ಲ. ನ್ಯಾಯವ್ಯಾಪ್ತಿ ಹೊಂದಿರುವ ಮ್ಯಾಜಿಸ್ಟ್ರೇಟ್ ಈ ವಿಷಯವನ್ನು ಆಲಿಸಬಹುದು ಎಂದು ಹೇಳಿ ಅದನ್ನು ತಿರಸ್ಕರಿಸಿದ್ದರು. ಈ ಆದೇಶವನ್ನು ಅವರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಆಲಿಸಿದ ನ್ಯಾಯಾಲಯ ಇದೀಗ ನೋಟಿಸ್ ಜಾರಿ ಮಾಡಿದ್ದು, ಈ ಸಂಬಂಧ ಮಾರ್ಚ್ 2ರಂದು ವಿಚಾರಣೆ ನಡೆಸಲಿದೆ.
ಸಮವಸ್ತ್ರ ಧರಿಸಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದ ಪ್ರಧಾನಿ
ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್ನಲ್ಲಿ ಯೋಧರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಿಸಿದ್ದರು. ನೌಶೇರಾದಲ್ಲಿ ದೀಪಾವಳಿಯ ಸಂದರ್ಭದಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸ್ಥಳೀಯ ಸಾಮರ್ಥ್ಯಗಳನ್ನು ಹೆಚ್ಚಿಸಲು ಸರ್ಕಾರದ ಪ್ರಯತ್ನಗಳನ್ನು ಎತ್ತಿ ತೋರಿಸಿದರು. ಸಂಪರ್ಕ ಮತ್ತು ಸೈನ್ಯದ ನಿಯೋಜನೆಯನ್ನು ಹೆಚ್ಚಿಸಲು ಆಧುನಿಕ ಗಡಿ ಮೂಲಸೌಕರ್ಯವನ್ನು ನಿರ್ಮಿಸಲಾಗಿದೆ ಎಂದಿದ್ದರು.

ನಾನು ಪ್ರತಿ ದೀಪಾವಳಿಯನ್ನು ನಮ್ಮ ಗಡಿ ಕಾಯುವ ಸೈನಿಕರೊಂದಿಗೆ ಕಳೆದಿದ್ದೇನೆ. ಇಂದು ಇಲ್ಲಿ ನಮ್ಮ ಸೈನಿಕರಿಗಾಗಿ ಕೋಟ್ಯಂತರ ಭಾರತೀಯರ ಆಶೀರ್ವಾದವನ್ನು ನನ್ನೊಂದಿಗೆ ತಂದಿದ್ದೇನೆ. ನಮ್ಮ ಸೈನಿಕರು 'ಭಾರತ ಮಾತೆಯ ಸುರಕ್ಷಾ ಕವಚ ಇದ್ದಂತೆ'. ನಿಮ್ಮೆಲ್ಲರಿಂದಾಗಿ ನಮ್ಮ ದೇಶದ ಜನರು ನೆಮ್ಮದಿಯಿಂದ ಮಲಗುತ್ತಿದ್ದಾರೆ. ನೀವು ಇಲ್ಲಿ ಪ್ರಾಣಕ್ಕೆ ಪಣಕ್ಕಿಟ್ಟು ಹೋರಾಡುತ್ತಿರುವುದರಿಂದಲೇ ಭಾರತೀಯರು ಹಬ್ಬ ಹರಿದಿನಗಳಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ ಎಂದಿದ್ದರು.
Recommended Video
ಇದೇ ವೇಳೆ ಸರ್ಜಿಕಲ್ ಸ್ಟ್ರೈಕ್ನಲ್ಲಿ ಯೋಧರ ಶ್ರಮವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹರಡಲು ಹಲವು ಪ್ರಯತ್ನಗಳನ್ನು ಮಾಡಲಾಯಿತು ಆದರೆ ಅವರಿಗೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ ಎಂದು ಹೇಳಿದ್ದರು.












Click it and Unblock the Notifications