Breaking; ಶೀಘ್ರವೇ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ
ನವದೆಹಲಿ, ಏಪ್ರಿಲ್ 21; ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಶೀಘ್ರವೇ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಗುರುವಾರ ಹಬ್ಬಿದೆ. ಎರಡು ದಿನಗಳ ಹಿಂದೆ ಪಕ್ಷದ ಹಿರಿಯ ನಾಯಕರ ಜೊತೆ ಪ್ರಶಾಂತ್ ಕಿಶೋರ್ ಮಹತ್ವದ ಸಭೆ ನಡೆಸಿದ್ದರು.
2024ರ ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಕಾಂಗ್ರೆಸ್ ಪಕ್ಷ ಹಲವಾರು ಬದಲಾವಣೆಗಳನ್ನು ಮಾಡುತ್ತಿದೆ. ಪ್ರತಾಂತ್ ಕಿಶೋರ್ ಪಕ್ಷ ಸೇರ್ಪಡೆಗೆ ಹಲವಾರು ಮುಖ್ಯಮಂತ್ರಿಗಳು ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಶಾಂತ್ ಕಿಶೋರ್ ಪರ ವಹಿಸಿದ ಇಬ್ಬರು ಮುಖ್ಯಮಂತ್ರಿಗಳು
ಪಕ್ಷದ ಚುನಾವಣಾ ತಂತ್ರಗಾರರ ಜೊತೆ ಪ್ರಶಾಂತ್ ಕಿಶೋರ್ ಮಹತ್ವದ ಸಭೆ ನಡೆಸಿದ್ದರು. ಪಕ್ಷದಲ್ಲಿ ಆಗಬೇಕಾದ ಬದಲಾವಣೆ ಬಗ್ಗೆ 600 ಸ್ಲೈಡ್ಗಳ ವಿವರಗಳನ್ನು ನೀಡಿದ್ದರು. ಈಗ ಅವರು ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಕಾಂಗ್ರೆಸ್ ಸೇರ್ಪಡೆ ಗುಮಾನಿ ನಡುವೆ ಪ್ರಶಾಂತ್ ಕಿಶೋರ್ ಮತ್ತು ಗಾಂಧಿ ಭೇಟಿ
ಶುಕ್ರವಾರ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಪ್ರಶಾಂತ್ ಕಿಶೋರ್ ಸಭೆ ನಡೆಸಲಿದ್ದಾರೆ. ಈ ಸಭೆಯ ವೇಳೆ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಸಹ ಉಪಸ್ಥಿತರಿರುವ ಸಾಧ್ಯತೆ ಇದೆ.
ಪೆಗಾಸಸ್ ಬಳಸಿ ಪ್ರಶಾಂತ್ ಕಿಶೋರ್ ಮೇಲೆ ಕಣ್ಗಾವಲು: ಮಮತಾ
ಮುಂದಿನ ಮೂರು ಅಥವ ನಾಲ್ಕು ದಿನದಲ್ಲಿ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಲಿದ್ದಾರೆ ಎಂದು ಎಐಸಿಸಿ ಮೂಲಗಳು ಹೇಳಿವೆ ಎಂದು ಎಎನ್ಐ ವರದಿ ಮಾಡಿದೆ.
ಸೋನಿಯಾ ಗಾಂಧಿಯನ್ನು ಪ್ರಶಾಂತ್ ಕಿಶೋರ್ ಏಪ್ರಿಲ್ 16 ಮತ್ತು 18ರಂದು ಭೇಟಿಯಾಗಿದ್ದರು. ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷದ ಕೆಲವು ನೀತಿಗಳನ್ನು ವಿರೋಧಿಸುತ್ತಿದ್ದಾರೆ ಎಂಬ ಮಾಹಿತಿ ಇತ್ತು.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪರ್ಯಾಯವಾಗಿ ರಾಷ್ಟ್ರೀಯ ಮಟ್ಟದ ಮೈತ್ರಿಕೂಟ ರಚನೆಯ ಚರ್ಚೆಯಾಗುತ್ತಿದೆ. ಆದರೆ ಈ ಮೈತ್ರಿಕೂಟವನ್ನು ಕಾಂಗ್ರೆಸ್ ಮುನ್ನಡೆಬೇಕೆ? ಎಂಬ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ.
ಕಾಂಗ್ರೆಸ್ ಪಕ್ಷ ಸೇರಿದ ಬಳಿಕ ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರಗಾರರಾಗಿ ಮುಂದುವರೆಯಲಿದ್ದಾರೆಯೇ? ಅಥವ ನೇರವಾಗಿ ರಾಜಕೀಯ ಪ್ರವೇಶ ಮಾಡಲಿದ್ದಾರೆಯೇ? ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.